ಮರೆತ ಮನಸುಗಳ ನಡುವೆ ಕಮರಿದ ಜೀವ

Upayuktha
0


ನಾನು ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯ ಮಡಿಲಿನಿಂದ ದೂರವಾದೆ. ನನ್ನನ್ನು ಅವರು ಆ ಮನೆಗೆ ಕರೆ ತಂದರು. ಹೊಸ ಮನೆ, ಹೊಸ ಜಾಗ, ಅಪರಿಚಿತ ಜನ. ನಾನು ಭಯದಿಂದ ಅಳುಕಿ ಹೋಗಿದ್ದೆ. ಇದುವರೆಗೆ ನನ್ನ ಪ್ರಪಂಚ ಕೇವಲ ನನ್ನ ತಾಯಿಯಾಗಿದ್ದಳು. ಇಲ್ಲಿ ನನ್ನವರು ಯಾರು ಇಲ್ಲ ಎಂಬ ಕೊರಗು ಕ್ಷಣ ಕ್ಷಣ ಕಾಡುತಿತ್ತು. ನಾನು ಮನೆಯ ಮೂಲೆ ಮೂಲೆಯಲ್ಲಿ ಭಯದಿಂದ ಅವಿತುಕೊಳ್ಳುತ್ತಿದ್ದೆ. ತಾಯಿಯ ಮಡಿಲಿನಲ್ಲಿ ಬೆಚ್ಚನೆ ಮಲಗುತ್ತಿದ್ದ ನನಗೆ ಇಲ್ಲಿ ಯಾವುದೊ ಒಂದು ಬಂಧನದೊಳಗೆ ಸಿಕ್ಕಿದಂತೆ ಅನಿಸುತಿತ್ತು. ಹೊಸ ಮುಖಗಳು ನನ್ನನು ಹಿಡಿಯಲು ಬಂದಾಗ ನಾನು ಹೆದರಿ ಅಲ್ಲಿ ಇಲ್ಲಿ ಓಡುತ್ತಿದ್ದೆ. ದಿನಗಳು ಉರುಳಿತು. ನನಗೆ ಅಲ್ಲಿರುವ ಜನರ  ಪರಿಚಯವಾಯಿತು. ಭಯದಿಂದ ಓಡುತಿದ್ದ ನಾನು ಅವರೊಂದಿಗೆ ಹೊಂದಿಕೊಂಡೆ. ಅವರು ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆ ಮನೆಯಲ್ಲಿ ನನಗೂ ಒಂದು ಪುಟ್ಟ ಸ್ಥಾನ ದೊರಕಿತು. ನಾನು ಆ ಮನೆಯ ಒಬ್ಬ ಸದಸ್ಯಳಾದೆ. ಅವರು ನನ್ನನ್ನು ಅವರ ಸ್ವಂತ ಮಗುವಿನನಂತೆ ಕಾಣುತ್ತಿದ್ದರು. ಒಂದು ನಿಮಿಷ ನೆಲದಲ್ಲಿ ಬಿಡದೆ ಎತ್ತಿ ಮುದ್ದಾಡುತ್ತಿದ್ದರು. ನಾನೆಂದರೆ  ಬಹಳ ಪ್ರೀತಿ, ಕಾಳಜಿ. ಅವರ ಮಡಿಲು ನನಗೆ ಬೆಚ್ಚನೆಯ ಹಾಸಿಗೆಯಾಯಿತು. ನನ್ನ ದ್ವನಿ ಕೇಳಿದರೆ ಸಾಕು, ಮಕ್ಕಳೆಲ್ಲ ಓಡಿ ಬಂದು ನನ್ನನ್ನು  ಹಿಡಿದು ಅಪ್ಪಿಕೊಳ್ಳುತ್ತಿದ್ದರು. ಹೀಗೆ ನಾನು ಆ ಮನೆಯಲ್ಲಿ ಎಲ್ಲರಿಗೂ ಅಚ್ಚು ಮೆಚ್ಚಿನವಳಾದೆ. ನನಗೆ  ಚಿಂಟು ಎಂದು ನಾಮಕರಣ ಮಾಡಿದರು. ನನಗೆ ಹಸಿವಾದರೆ ತಕ್ಷಣ ಊಟ ನೀಡುತ್ತಿದ್ದರು. ನಾನೊಂದು ಕ್ಷಣ ಅವರ ಕಣ್ಣಿಂದ ಮರೆಯಾದರೂ ನನಗಾಗಿ ಪರಿತಪಿಸುತ್ತಿದ್ದರು. ನನ್ನ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿನಲ್ಲಿ ಕಾಣುತ್ತಿದ್ದ ಭಯ, ಆತಂಕವನ್ನು ನಾನು ಅನೇಕ ಬಾರಿ ಗಮನಿಸಿ, ಖುಷಿಪಟ್ಟಿದ್ದೇನೆ. ಇಂತಹ ಒಂದು ಸುಂದರ ಕುಟುಂಬದಲ್ಲಿ ನಾನು ಬಹಳ ಸಂತೋಷದಿಂದ ದಿನಕಳೆಯುತ್ತಿದ್ದೆ.


ಆದರೆ, ಈ ಖುಷಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ನಾನು ಇನ್ನು ಒಂಟಿಯಾಗುವೆನೆಂಬ ನೋವು ನನ್ನ ಕಾಡಲು ಸುರು ಮಾಡಿತ್ತು. ಇದಕ್ಕೆ ಕಾರಣ ನಮ್ಮ ಮನೆಗೆ ಹೊಸದಾಗಿ ಬಂದ ಒಬ್ಬ ಅತಿಥಿ. ನಿರ್ಜೀವವಾಗಿದ್ದರೂ ನನ್ನ ಮನೆಯವರನ್ನು ಬಹು ಬೇಗನೆ ಅವರತ್ತ ಸೆಳೆದುಕೊಂಡ. ಅವನು ಬಂದ ನಂತರ ನನ್ನ ಭಾವನೆಗಳಿಗೆ ಬೆಲೆ ಇಲ್ಲದಾಯಿತು. ಅಂದು ನನಗಾಗಿ ಹುಡುಕಾಡುತ್ತಿದ್ದವರು ಇಂದು ನನ್ನನ್ನು ಕಣ್ಣೆತ್ತಿ ನೋಡದಾದರು. ತಟ್ಟೆಯನ್ನೇ ನನ್ನ ಬಳಿ ಬಂದು ತಿನ್ನಿಸುತ್ತಿದ್ದವರು ಇಂದು ಊಟವನ್ನೇ ಕೊಡಲು ಮರೆತರು. ನನ್ನನ್ನು ಯಾರೂ ಮಾತನಾಡಿಸುತ್ತಿರಲಿಲ್ಲ. ನಾನು ಸಂಪೂರ್ಣವಾಗಿ ಅಲಕ್ಷಿಸಲ್ಪಟ್ಟೆ. ಮೂಲೆಯಲ್ಲಿ ಒಂಟಿಯಾಗಿ ಕುಳಿತು ಮರುಗುತ್ತಿದ್ದೆ. ನನ್ನನ್ನು ಮರೆಯುವಷ್ಟು ಇಷ್ಟು ಬೇಗ ಬದಲಾದರೆ ಎಂಬ ಬೇಸರದಿಂದ ಅವರನ್ನೇ ದಿಟ್ಟಿಸುತ್ತಿದ್ದೆ. ಇದು ನನ್ನ ಮನಸ್ಸನ್ನು ಬಹಳ ಕುಗ್ಗಿಸಿತು. ಅವನು ಅವರನ್ನು ತನ್ನ ಜಾಲದಲ್ಲಿ ಬಹು ಬೇಗನೆ ಸಿಲುಕಿಸಿದ್ದ. ಅವರ ಅಂಗೈಯಲ್ಲಿ ಅವನ ಸ್ಥಾನ ಭದ್ರವಾಗಿತ್ತು. ಅವನ ಕೈಗೊಂಬೆಯಾಗಿದ್ದ ಅವರಿಗೆ ನನ್ನ ಮೇಲಿದ್ದ ಪ್ರೀತಿ ಎಲ್ಲಿ ಕಳೆದು ಹೋಯಿತೋ, ನಾ ಕಾಣೆ.


ನಾನು ಮೌನಿಯಾದೆ. ಮೂಕನಾಗಿ ರೋಧಿಸಿದೆ. ನನಗೂ ಭಾವನೆಗಳಿವೆ. ನನ್ನ ಮೇಲಿದ್ದ ಪ್ರೀತಿ ಇನ್ಯಾರದ್ದೋ ಪಾಲಾಯಿತು. ನನ್ನನ್ನು ಅರ್ಥ ಮಾಡಿಕೊಳ್ಳುವ ಮನಸ್ಸನ್ನು ಹುಡುಕುತ್ತ ನನ್ನ ಒಂಟಿ ಪಯಣವನ್ನು ಆ ಕುಟುಂಬದಿಂದ ಹೊರಬಂದು, ಬಾಹ್ಯ ಪ್ರಪಂಚದೊಂದಿಗೆ ಮುಂದುವರಿಸಲು ತೀರ್ಮಾನಿಸಿದೆ.


ಇಷ್ಟೊಂದು ನೋವನ್ನು ಅನುಭವಿಸುತ್ತಿರುವ ನಾನು 'ಚಿಂಟೂ ಬೆಕ್ಕು'. ಆಧುನಿಕ ಯುಗದ ಪ್ರಭಾವದಿಂದ ನನ್ನವರಿಗೆ ಅಂಟಿದ ಮೊಬೈಲ್ ಗೀಳು ನನ್ನನ್ನು ಒಂಟಿಯಾಗಿಸಿತು. ನನ್ನನ್ನೇ ನನ್ನವರು ದೂರವಿಟ್ಟರು. ಕಣ್ಣಮುಂದೆಯೇ ಇದ್ದರೂ ನನಗಾರು ಇಲ್ಲವೆಂಬ ಭಾವನೆ. ಇಂದು ಅಲ್ಲಲ್ಲಿ ನನ್ನಂತ ಅದೆಷ್ಟೋ ಮುಗ್ಧ ಜೀವಗಳು ಪ್ರೀತಿ ಸಿಗದೇ ಮರುಗುತ್ತಿವೆ. ನಿಮ್ಮನ್ನು ಪ್ರೀತಿಸುವ ಜೀವಗಳಿಗೆ ಬೆಲೆ ಕೊಡಿ. ನಿಮ್ಮ ಆಸರೆಯ ಬಯಸುವ ಜೀವವನ್ನು ನೋಯಿಸಬೇಡಿ. ನಿಮ್ಮಿಂದ ದೂರವಿಟ್ಟು ಕಡೆಗಣಿಸಬೇಡಿ. ಅವುಗಳಿಗೂ ಒಂದು ಮನಸಿದೆ ಎಂಬುದನ್ನು ಮರೆಯಬೇಡಿ.

ನಾವು ಬಯಸುವುದು ಪ್ರೀತಿಸುವವರ ಬೆಚ್ಚನೆಯ ಒಂದು ಅಪ್ಪುಗೆ...




ವಿಜಯಲಕ್ಷ್ಮಿ. ಬಿ ಕೆಯ್ಯೂರು

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top