ಸೋಮವಾರ ಸಂಜೆ ಲಿಂಗೈಕ್ಯರಾದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು 'ನಡೆದಾಡುವ ದೇವರು' ಎಂದೇ ಪ್ರಸಿದ್ಧರಾದವರು. ಸರಳ ಸಜ್ಜನಿಕೆಯ ಸಾಕಾರಮೂರ್ತಿ. ಆಧ್ಯಾತ್ಮಿಕ ಜೀವನದ ಮೂಲಕ ಜನಮಾನಸನದ ಮೇಲೆ ಗಾಢ ಪ್ರಭಾವ ಬೀರಿದ ಪೂಜ್ಯರು ಅಪರೂಪ ಮತ್ತು ಅನನ್ಯ ಸಂತ.
ಸ್ವಾಮೀಜಿ ತಮ್ಮ ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಅರಿವನ್ನು ಬೆಳಗಿ, ಸನ್ಮಾರ್ಗದ ಜೀವನಕ್ಕೆ ಪ್ರೇರಣೆ ನೀಡುತ್ತಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವ ಅವರದು. ತಮಗೆ ಬಂದ ಪ್ರಶಸ್ತಿ ಪುರಸ್ಕಾರಗಳನ್ನು ತಿರಸ್ಕರಿಸಿ ಸರಳತೆ ಮೆರೆದಿದ್ದರು. ಕನ್ನಡ ಮತ್ತು ಇಂಗ್ಲೀಶ್ ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಈ ಶತಮಾನ ಕಂಡ ಮಹಾನ್ ಸಂತ.
ಇಂಥಹ ಕಾಯಕಯೋಗಿ, ಮಹಾನ್ ಸಂತ, ಅದಮ್ಯ ಚೇತನವನ್ನು ಕಳೆದುಕೊಂಡ ಕರುನಾಡು ಬಡವಾಗಿದೆ. ಭಕ್ತವೃಂದ ಶೋಕಸಾಗರದಲ್ಲಿ ಮುಳುಗಿದೆ.
ಪೇಜಾವರ ಶ್ರೀ ತೀವ್ರ ಸಂತಾಪ
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಪರಂಧಾಮ ಸೇರಿದ ವಿಷಯ ತಿಳಿದು ವಿಷಾದವಾಗಿದೆ. ಆದರೂ ವೈಕುಂಠ ಏಕಾದಶಿ ಪರ್ವದಿನ ಅವರು ತೆರಳಿರುವುದು ಅವರ ಜೀವನ ಸಾರ್ಥಕ್ಯಕ್ಕೆ ಕನ್ನಡಿಯಂತಿದೆ.
ಅವರು ಸರಳತೆಗೆ ಪರ್ಯಾಯ ಎಂಬಂತಿದ್ದರು. ಆಡಂಬರದ ಸ್ಪರ್ಶವಿಲ್ಲದೇ ವಿರಕ್ತ ಜೀವನ ನಡೆಸುವವರಿಗೆ ಮಾದರಿಯಾದವರು. ತಮ್ಮ ಸೇವಾ ಕಾರ್ಯಗಳು ಹಾಗೂ ಮಾರ್ಗದರ್ಶನಗಳ ಮೂಲಕ ಅಸಂಖ್ಯ ಜನರ ದುಃಖ-ದುಮ್ಮಾನಗಳಿಗೆ ಸಾಂತ್ವನ ಸಮಾಧಾನವನ್ನು ನೀಡುತ್ತಾ ದಾರಿಬೆಳಕಾದವರು. ಋಷಿ ಪರಂಪರೆಯ ಒಂದು ಅಮೂಲ್ಯ ಕೊಂಡಿ ಕಳಚಿರುವುದಕ್ಕೆ ತೀವ್ರ ವಿಷಾದವಾಗಿದೆ. ಶ್ರೀಸಿದ್ಧೇಶ್ವರ ಸ್ವಾಮೀಜಿಯವರ ಆತ್ಮಕ್ಕೆ ಶ್ರೀಕೃಷ್ಣನು ಸದ್ಗತಿಯನ್ನು ಕರುಣಿಸಲಿ.
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ, ಉಡುಪಿ.