ಸಂವಿಧಾನದ ಮರುನೋಟ ಇಂದಿನ ಅಗತ್ಯ- ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ

Upayuktha
0

 


25 ಸಾವಿರಕ್ಕೂ ಅಧಿಕ ಜನರು ಸಾಕ್ಷೀಕರಿಸಿದ ಕಾರ್ಯಕ್ರಮ


ವಿದ್ಯಾಗಿರಿ: 74ನೇ ಗಣರಾಜ್ಯೊತ್ಸವ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಮಾತನಾಡಿ, ಸಂವಿಧಾನದ ಮರುನೋಟ ಇಂದಿನ ಅಗತ್ಯ ಎಂದು  ಹೇಳಿದರು.


ದೇಶದ ಒಬ್ಬನೇ ಒಬ್ಬ ಪ್ರಜೆ ಹೊರಗುಳಿಯದಂತೆ ಸಂವಿಧಾನವನ್ನು ಬಹಳ ಶಿಸ್ತಿನಿಂದ ರಚಿಸಿದ್ದಾರೆ. ಸಂವಿಧಾನ ಕರಡು ಸಮಿತಿಯಲ್ಲಿನ ತಜ್ಞರು ಜಗತ್ತಿನ ಸಂವಿಧಾನ ಹಾಗೂ ಆಡಳಿತವನ್ನು ಅಧ್ಯಯನ ಮಾಡಿದ್ದು, ನಮಗೆ ಪೂರಕವಾದ ಬ್ರಿಟಿಷ್ ಸಂವಿಧಾನದ ನವ್ಯತೆ ಹಾಗೂ ಅಮೆರಿಕಾ ಸಂವಿಧಾನದ ಗಟ್ಟಿತನದ ಮಿಶ್ರಣವು ಪ್ರಮುಖವಾಗಿದೆ. ಸುಶಿಕ್ಷಿತರಿಗೆ ಮತದಾನ ಹಕ್ಕು ನೀಡಬೇಕು ಎಂದು ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಎಲ್ಲರೂ ಸಹಮತ ಹೊಂದಿದ್ದರು. ಆದರೆ, ಕೇವಲ ಅಕ್ಷರಸ್ಥರಿಗೆ ಮಾತ್ರ ಮತದಾನ ಹಕ್ಕು ನೀಡಿದ್ದರೆ, ಅಂದು ಶೇ 30 ಮಂದಿ ಮಾತ್ರ ಹಕ್ಕು ಪಡೆಯುತ್ತಿದ್ದರು. ಶೇ 70 ಜನರನ್ನು ಹೊರಗಿಡಬೇಕೇ? ಎಂಬ ಪ್ರಶ್ನೆ ಎದುರಾಗಿದ್ದು, ನಂತರ ವಯಸ್ಸಿನ ಆಧಾರದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಯಿತು ಎಂದು ವಿವರಿಸಿದರು.


ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿವಿಕೆಯನ್ನು ಪರಿಗಣಿಸಿ 1965ರ ವರೆಗೆ ಅನ್ವಯಿಸುವಂತೆ ಮೀಸಲಾತಿ ಜಾರಿಗೆ ತರಲಾಯಿತು. ಆದರೆ, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂಬ ಏಕೈಕ ಕಾರಣಕ್ಕೆ ಮೀಸಲಾತಿಯನ್ನು ಮುಂದುವರಿಸಿಕೊಂಡು ಬರಲಾಯಿತು. ಪ್ರಮಾಣವನ್ನೂ ಹೆಚ್ಚಿಸಲಾಯಿತು ಎಂದರು.


ಅಮೆರಿಕದ ಸಂವಿಧಾನಕ್ಕೆ ಅಲ್ಲಿನ ನ್ಯಾಯಾಂಗದ ಸಮ್ಮತಿ ಪಡೆಯದೇ ತಿದ್ದುಪಡಿ ಸಾಧ್ಯವಿಲ್ಲ. ಆದರೆ, ನಮ್ಮ ದೇಶದಲ್ಲಿ ಹಲವು ತಿದ್ದುಪಡಿಗಳು ಶಾಸಕಾಂಗದ ಸರಳ ಬಹುಮತದಲ್ಲಿ ಅಂಗೀಕೃತಗೊಳ್ಳುತ್ತಿವೆ. ಆ ತಿದ್ದುಪಡಿಗಳೂ ರಾಜಕೀಯ ಪಕ್ಷಗಳ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿವೆ. ಹೀಗಾಗಿ, ಅತ್ಯುತ್ತಮ ಸಂವಿಧಾನವೊಂದಕ್ಕೆ ಪದೇ ಪದೇ ತಿದ್ದುಪಡಿ ಬೇಕಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕೇಶವ ಭಾರತಿ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆ ಕುರಿತು ಸ್ಪಷ್ಟ ತೀರ್ಪು ನೀಡಿದೆ. ಆಸ್ತಿ ಹಕ್ಕು ಹೊರತು ಪಡಿಸಿ, ಇತರ ಯಾವುದೇ ಹಕ್ಕುಗಳನ್ನು ತಿದ್ದುಪಡಿ ಮಾಡದಂತೆ ನಿರ್ದೇಶಿಸಿದೆ. ಆದರೆ, ಇತರ ತಿದ್ದುಪಡಿಗಳು ರಾಜಕೀಯ ಕಾರಣಕ್ಕಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗೂ ಸೂಕ್ತ ಕಾಯಿದೆಗಳು ಅಗತ್ಯ. ಇಲ್ಲದಿದ್ದರೆ, ಉನ್ನತ ಶಿಕ್ಷಣ ಸಂಸ್ಥೆಗಳು ಅರ್ಹತೆ ಇಲ್ಲದವರ ಸೊತ್ತಾಗುವ ಅಪಾಯಗಳು ಇವೆ. ಶಿಕ್ಷಣ ಸಂಸ್ಥೆಗಳು ಹಲವು ಇರಬಹುದು. ಆದರೆ, ಆಳ್ವಾಸ್‍ನಲ್ಲಿನ ಶಿಸ್ತು, ಸಮಯ, ಸೃಜನಶೀಲತೆ, ಸೌಂದರ್ಯವು ಅನನ್ಯ. ಇದಕ್ಕೆ ಡಾ.ಎಂ.ಮೋಹನ ಆಳ್ವ ಅವರ ದೂರದೃಷ್ಟಿ ಕಾರಣ ಎಂದರು. 


ಆಳ್ವಾಸ್ ತ್ರಿವರ್ಣ ವೈಭವದಲ್ಲಿ ಒಂದಾದ INDIA

ಸಾಂಸ್ಕೃತಿಕ ಜಾಂಬೂರಿ ಮೂಲಕ ವಿಶ್ವಕ್ಕೆ ಭಾವೈಕ್ಯದ ಸಂದೇಶ ನೀಡಿದ್ದ ಆಳ್ವಾಸ್ ಅಂಗಣದಲ್ಲಿ ಗುರುವಾರ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ತ್ರಿವರ್ಣ ರಂಗಿನಲ್ಲಿ INDIA ಒಂದಾಗಿತ್ತು. ಎಲ್ಲೆಲ್ಲೂ ತ್ರಿವರ್ಣ ಸಾಂಸ್ಕೃತಿಕ  ವೈಭವ ರಂಗೇರಿದರೆ, ಸೇರಿದ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಮನದಲ್ಲಿ ದೇಶಪ್ರೇಮದ ಭಾವೈಕ್ಯದ ಭಾವ. ದೇಶಭಕ್ತಿಯ ನಿನಾದಕ್ಕೆ ಸಾಂಸ್ಕೃತಿಕ ಕಲರವವು ಮೆರುಗು ಮೂಡಿಸಿತ್ತು. ಬಣ್ಣಗಳ ಮೆರುಗು, ಆಚರಣೆ, ನುಡಿ-ನಡೆಯಲ್ಲೂ ಭಾರತೀಯ ಭಾವ ಮೂಡಿತ್ತು.


ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರ ದೂರದೃಷ್ಟಿತ್ವ ಹಾಗೂ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ನೇತೃತ್ವದಲ್ಲಿ ಆಳ್ವಾಸ್ ಪ್ರಾಂಗಣವು ಮತ್ತೊಮ್ಮೆ ಶಿಸ್ತು, ಸಮಯ ಪ್ರಜ್ಞೆ, ಸೃಜನಶೀಲತೆ, ಸೌಂದರ್ಯಕ್ಕೆ ಸಾಕ್ಷಿಯಾಯಿತು. ಬ್ಲಾಸ್ಟರ್‍ನಲ್ಲಿ ಸಿಡಿದ ತ್ರಿವರ್ಣ ರಂಗು, ಪುಟಾಣಿಗಳು ಹಾಗೂ ಗಣ್ಯರ ಕೈಯಲ್ಲಿ ಹಾರಾಡಿದ ಧ್ವಜ, ಬ್ಯಾಂಡ್ ಸೆಟ್‍ನಲ್ಲಿ ಮೊಳಗಿದ ಸಂಗೀತ, ವಿದ್ಯಾರ್ಥಿಗಳ ಗಾಯನದದಲ್ಲಿ ದೇಶಪ್ರೇಮವು ಮೇಳೈಸಿತ್ತು.  ವಂದೇ ಮಾತರಂ ಬಳಿಕ ಕೋಟಿ ಕಂಠ ಹಾಡಿನ ನಿನಾದವನ್ನು ಸೇರಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಹಸ್ರಾರು ತ್ರಿವರ್ಣ ಧ್ವಜಗಳ ಅಲೆ ರಂಗೇರಿಸಿತು.


ವೇದಿಕೆಯಲ್ಲಿ ತಿರಂಗ ಬಣ್ಣದಿಂದ 450 ವಿದ್ಯಾರ್ಥಿಗಳು ದೇಶದ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಿದ್ದರೆ, 4,003 ವಿದ್ಯಾರ್ಥಿಗಳು ತಿರಂಗದಲ್ಲಿ INDIA ರಚಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶ ರವಾನಿಸಿದರು. ಧ್ವಜಾರೋಹಣ ತಕ್ಷಣ ಮೊಳಗಿದ ರಾಷ್ಟ್ರಗೀತೆ ವೇಳೆ ಎಲ್ಲರೂ ಸೆಲ್ಯೂಟ್ ಮೂಲಕ ಧ್ವಜಕ್ಕೆ ಗೌರವ ಸಲ್ಲಿಸಿದರು. ಭಕ್ತಿ ದೇಶದತ್ತ ಚಿತ್ತೈಸಿತ್ತು.


ವಿವಿಧ ಭಾಗಗಳಿಂದ ಆಹ್ವೌನಿಸಲ್ಪಟ್ಟ 110ಕ್ಕೂ ಅಧಿಕ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕರ್ನಾಟಕ ರಾಜ್ಯ ಘಟಕದ 70ಕ್ಕೂ ಅಧಿಕ ಪದಾಧಿಕಾರಿಗಳು ಆಗಮಿಸಿದ್ದರು. ಆಳ್ವಾಸ್ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ನಡೆದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 1,700 ಕ್ಕೂ ಅಧಿಕ ಎನ್‍ಸಿಸಿ ಹಾಗೂ ಎನ್‍ಎಸ್‍ಎಸ್ ಕೆಡೆಟ್‍ಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್  ವಿದ್ಯಾರ್ಥಿಗಳು, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯೂತ್ ರೆಡ್‍ಕ್ರಾಸ್ ವಿದ್ಯಾರ್ಥಿಗಳು ಮೆರುಗು ಹೆಚ್ಚಿಸಿದರು. ಹೊನ್ನಾವರದ ‘ಸಂತ ಮದರ್ ತೆರೇಸಾ' ತಂಡದ 13 ಮಂದಿ ಸಂಗೀತದ ರಸದೌತಣ ನೀಡಿದರು. ಬ್ಲಾಸ್ಟರ್ ಮೂಲಕ ಗಗನಕ್ಕೆ ಚಿಮ್ಮಿದ ತ್ರಿವರ್ಣ ರಂಗು ಹಾಗೂ ರಿಬ್ಬನ್‍ಗಳು ಬಾನಂಗಳದಲ್ಲೂ ಚಿತ್ತಾರ ಮೂಡಿಸಿ, ವೈಭವದ ಕಳೆ ನೀಡಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಟ್ರಸ್ಟಿ ಡಾ.ವಿನಯ ಆಳ್ವ, ಉದ್ಯಮಿ ಶ್ರೀಪತಿ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ವಿವಿಧ ಜಿಲ್ಲೆಗಳ ಆಯುಕ್ತರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.  ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ ಹಾಗೂ ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top