ಅಶೋಕೆಯಲ್ಲಿ ಸೇವಾಸೌಧ ಸಮರ್ಪಣೆ, ಸಾಮ್ರಾಜ್ಯ ಪಟ್ಟಾಭಿಷೇಕ, ಪಾಕೋತ್ಸವ: ಜನವರಿ 26ರಿಂದ ಮೂರು ದಿನಗಳ ಕಾರ್ಯಕ್ರಮ

Upayuktha
1 minute read
0


ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ವಾಸ್ತವ್ಯಕ್ಕೆ ಹವ್ಯಕ ಸಮಾಜದ ವತಿಯಿಂದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇವಾಸೌಧ ಸಮರ್ಪಣೆ ಸಮಾರಂಭ ಮತ್ತು ಶ್ರೀಕರಾರ್ಚಿತ ಶ್ರೀ ರಾಮದೇವರ ಸನ್ನಿಧಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಜನವರಿ 26 ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಅಶೋಕೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷ ಹಾಗೂ ಸೇವಾಸೌಧ ಸಮರ್ಪಣಾ ಸಮಿತಿಯ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಕಾರ್ಯಕ್ರಮದ ರೂಪುರೇಷೆಗಳ ವಿವರ ನೀಡಿದರು. ಬಳಿಕ ಶ್ರೀಗಳು ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.

ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಸಿಮೆಂಟ್, ಇಟ್ಟಿಗೆ ಬಳಸದೇ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜನವರಿ 26ರಂದು ಶ್ರೀರಾಮದೇವರ ಪ್ರೀತ್ಯರ್ಥ ರಾಮ ಮೂಲಮಂತ್ರ ಹವನ, ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ನಾಗದೇವರ ಪ್ರತಿಷ್ಠೆ ನಡೆಯಲಿದೆ. 27ರಂದು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಷ್ಟೋತ್ತರ ಶತ ವಿಶೇಷ ದ್ರವ್ಯಗಳಿಂದ ಅಭಿಷೇಕ ಸೇವೆ ಮತ್ತು ಸಾಂಪ್ರದಾಯಿಕ ಪಾಕ ವೈಭವ ನಡೆಯಲಿದೆ. ಹವ್ಯಕ ಸಂಸ್ಕೃತಿಯ  ಅವಿಭಾಜ್ಯ ಅಂಗವಾದ ವಿಶಿಷ್ಟ ಭಕ್ಷ್ಯ ಭೋಜ್ಯಗಳ ಪ್ರದರ್ಶನ ಮತ್ತು ಮಾರಾಟದ ವಿಶಿಷ್ಟ ಆಹಾರೋತ್ಸವ ಆಯೋಜಿಸಲಾಗಿದೆ.

28ರಂದು ಶ್ರೀ ರಾಜರಾಜೇಶ್ವರಿ ದೇವರ ಅನುಗ್ರಹಕ್ಕಾಗಿ ಶ್ರೀಚಕ್ರ ಪೂಜೆ, ಸೇವಾಸೌಧ ಸಮರ್ಪಣೆ ನಡೆಯಲಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣವನ್ನು ಗುರುಕುಲ ಪದ್ಧತಿಯಲ್ಲಿ ಆರಂಭಹಿಸಿರುವ ದೇಶದ ಏಕೈಕ ಸಂಸ್ಥೆ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸಂಕಲ್ಪಿಸಿ ತಮ್ಮ ಕರ್ತೃತ್ವ ಶಕ್ತಿಯಿಂದ ಅದನ್ನು ಸಾಕಾರಗೊಳಿಸಿದ ವಿವಿವಿ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ವಸತಿ ಹಾಗೂ ಶ್ರೀಕರಾರ್ಚಿತ ಪೂಜಾ ಕೈಂಕರ್ಯಕ್ಕಾಗಿ ನಿರ್ಮಾಣಗೊಂಡ ಭವ್ಯ ಮಂದಿರ 'ಸೇವಾಸೌಧ'ವನ್ನು 28ರಂದು ಶ್ರೀಗಳಿಗೆ ಸಮರ್ಪಿಸಲಾಗುತ್ತದೆ ಎಂದು ಆರ್.ಎಸ್.ಹೆಗಡೆ ವಿವರ ನೀಡಿದರು.

ಶ್ರೀಮಠದ ಸೇವಾಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಶೋಭಿಸುವ ಈ ಭವ್ಯ ಮಂದಿರವನ್ನು ಸಮರ್ಪಿಸುವ ಸಮಾರಂಭದಲ್ಲಿ ರಾಜ್ಯ ಮಟ್ಟದ ಅನೇಕ ನಾಯಕರು ಹಾಗೂ ಆಧ್ಯಾತ್ಮಿಕ ಸಾಧಕರು ಭಾಗವಹಿಸುವರು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯೋನ್ಮುಖವಾಗಿವೆ.

ಸಾಮ್ರಾಜ್ಯ ಪಟ್ಟಾಭಿಷೇಕ: ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಅನಾದಿ ನಾಯಕನ ಅನಂತ ಚರಿತೆಯ ಅನುಪಮ ಕಾವ್ಯವಾದ ರಾಮಾಯಣವನ್ನು ಶ್ರೀಗಳು ಲೋಕಹಿತಕ್ಕಾಗಿ ನಿತ್ಯ ಪಾರಾಯಣ ಮಾಡುತ್ತಿದ್ದು, ಪಾರಾಯಣದ ಪರಿಸಮಾಪ್ತಿಯ ಪವಿತ್ರ ದಿನದಂದು ಸಾಮ್ರಾಜ್ಯ ಪಟ್ಟಾಭಿಷೇಕ ನಡೆಸಲಾಗುತ್ತದೆ.

ಅಗಸ್ತ್ಯರಿಂದ ಪೂಜಿತವಾದ, ವರದಿ ಮುನಿಗಳು ನೀಡಿದ ಅಶೋಕೆಯಲ್ಲಿ ಶ್ರೀ ಶಂಕರಾಚಾರ್ಯರಿಂದ ಅನುಗ್ರಹಿಸಲ್ಪಟ್ಟ, ವೀರಪರಂಪರೆಯ ಎಲ್ಲ ಪೀಠಾಧಿಪತಿಗಳಿಂದ ಪ್ರತಿದಿನ ಸೇವೆ ಸ್ವೀಕರಿಸುತ್ತಿರುವ ಶ್ರೀರಾಮದೇವರಿಗೆ ಅಶೋಕೆಯಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯುತ್ತಿದೆ ಎಂದು ತಿಳಿಸಿದರು.

ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ವಿವಿವಿ ವ್ಯವಸ್ಥಾ ಪರಿಷತ್ ಗೌರವಾಧ್ಯಕ್ಷ  ಡಿ.ಡಿ.ಶರ್ಮಾ, ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾಮದುಘಾ ಶ್ರೀ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ, ಉತ್ಸವ ಖಂಡದ ಮುಖ್ಯಸ್ಥ ಶಾಂತಾರಾಮ ಹೆಗಡೆ, ಮಾಧ್ಯಮ ವಿಭಾಗದ ಉದಯಶಂಕರ್ ಮಿತ್ತೂರು, ಸೇವಾ ಪ್ರಧಾನ ಅರವಿಂದ ದರ್ಬೆ, ಜಿ.ವಿ.ಹೆಗಡೆ, ರಾಘವೇಂದ್ರ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top