ಮೂಡುಬಿದಿರೆ: ದಕ್ಷಿಣ ಕನ್ನಡದ ಪ್ರಸಿದ್ಧ ಕಲಾಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಗಂಡು ಕಲೆ ಎಂದೇ ಹೆಸರುವಾಸಿ. ಕಥೆಗಳನ್ನು ಪ್ರಸಂಗಗಳ ಮೂಲಕ ತಂಡದಲ್ಲಿ ಒಬ್ಬೊಬ್ಬರು ಒಂದೊಂದು ಪಾತ್ರವನ್ನು ನಿರ್ವಹಿಸಿ ಯಕ್ಷಗಾನ ಪ್ರಸ್ತುತಪಡಿಸಲಾಗುತ್ತದೆ. ಆದರೆ ಒಂದು ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಒಬ್ಬರೇ ನಿರ್ವಹಿಸುವುದೆಂದರೆ ಸುಲಭದ ಮಾತಲ್ಲ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಇಂತಹ ಅದ್ಭುತ ಪ್ರದರ್ಶನ ಕಂಡುಬಂತು. ಪೆರಾಡಿಯ ದೀವಿತ್ ಎಸ್ ಕೋಟ್ಯಾನ್ 'ಏಕ ವ್ಯಕ್ತಿ ಯಕ್ಷಗಾನ' ಮಾಡಿ ನೋಡುಗರ ಮನಗೆದ್ದರು.
ಕಾರ್ಯಕ್ರಮವನ್ನು ಗಣಪತಿ ಸ್ತುತಿಯ ಮೂಲಕ ಆರಂಭಿಸಿದರು. ಎರಡು ಅವತರಣಿಕೆಯಲ್ಲಿ ಮೂಡಿಬಂದ ಪ್ರದರ್ಶನ ಮೊದಲಿಗೆ ವಿಷ್ಣುವಿನ 'ದಶಾವತಾರ'ವನ್ನು ಹರಿನಾರಾಯಣ ಗೋವಿಂದ ಗೀತನೃತ್ಯದ ಮೂಲಕ ಪ್ರಸ್ತುತಪಡಿಸಿದರು. 'ಪೂತನಾ ಮೋಕ್ಷ' ಎಂಬ ಪ್ರಸಂಗದ ಪ್ರಸ್ತಾಪವು ಏಕವ್ಯಕ್ತಿ ಯಕ್ಷಗಾನಕ್ಕಿರುವ ಶಕ್ತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಯಿತು. ಮಾಯಾ ಪೂತನಿ ಕಥನವನ್ನು ದೀವಿತ್ ಎಸ್ ಕೋಟ್ಯಾನ್ ಅವರು ನಿರೂಪಿಸಿದ ರೀತಿ ಮಾತೃತ್ವದ ಅಂತಃಕರಣ ಶಕ್ತಿ ಎಂಥದ್ದು ಎಂಬುದನ್ನು ಮನಗಾಣಿಸಿತು. ರಾಕ್ಷಸಿಯಾಗಿದ್ದರೂ ಕಂದನಿಗೆ ಹಾಲುಣಿಸುವ ಹೊತ್ತಿಗೆ ಆಕೆಯ ಹೃದಯದಲ್ಲಿ ಹುಟ್ಟುವ ಮಾತೃಭಾವದ ಆಯಾಮದ ಅನಾವರಣ ಈ ಪ್ರಸಂಗದ ವಿಶೇಷ ಆಕರ್ಷಣೆಯಾಗಿತ್ತು.
ಹಿಮ್ಮೇಳದ ಭಾಗವತಿಕೆಯಲ್ಲಿ ಧೀರಜ್ ಸಂಪಾಜೆ, ಮದ್ದಲೆಯಲ್ಲಿ ಮಯೂರ್ ನಯಗ, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ, ಕೊಳನಿನಲ್ಲಿ ಸಮರ್ಥ ಶೆಣೈ ಸಾಥ್ ನೀಡಿದರು.
ವರದಿ: ಪ್ರೀತಿ ಹಡಪದ
ದ್ವೀತಿಯ ವರ್ಷ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಎಸ್.ಡಿ.ಎಂ
ಸ್ನಾತಕೋತ್ತರ ಕೇಂದ್ರ ಉಜಿರೆ.
ಚಿತ್ರ: ವಿವೇಕ್ ಚಂದ್ರನ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ