ಭಾಗವತ ಶ್ರವಣದಿಂದ ಪ್ರೌಢಿಮೆ ಲಭ್ಯ: ಪಂಡಿತ ಬಾದರಾಯಣಾಚಾರ್ಯ

Upayuktha
0

ಮೈಸೂರು: ಭಾಗವತ ಶ್ರವಣದಿಂದ ಜೀವನವನ್ನು ನೋಡುವ ವಿಧಾನ ಬದಲಾಗುತ್ತದೆ. ಪ್ರಪಂಚವನ್ನು ಪರಿಭಾವಿಸುವ ದೃಷ್ಟಿ ಸುಧಾರಣೆಗೊಳ್ಳುತ್ತದೆ. ಪ್ರಕೃತಿಯ ಮಿತಿಗಳನ್ನು ಅರಿಯುವ ಪ್ರೌಢಿಮೆ ಬರುತ್ತದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.


ಅವರು ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದ 'ಪೂರ್ಣಪ್ರಜ್ಞ' ದಲ್ಲಿ ಭಾಗವತ ಪ್ರವಚನ ಸಪ್ತಾಹದಲ್ಲಿ ಅವರು ಮಂಗಳವಾರ ಮಾತನಾಡಿದರು.


ಭಾಗವತ ಕೇವಲ ಧರ್ಮ ಗ್ರಂಥವಲ್ಲ, ಬದುಕಿನಲ್ಲಿ ಯಾವುದನ್ನು ಮಾಡಬೇಕು, ಏನನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಮಾಡಬಾರದ್ದನ್ನೇ ಮಾಡಿ ನಿತ್ಯವೂ ದುಃಖಪಡುವ ಸ್ಥಿತಿ ಬಂದೊದಗಿದೆ ಎಂದರು.


ಅನಂತ ಕಾಲದ ಯಶಸ್ಸಿನ ಸೂತ್ರ ಭಾಗವತ ಗ್ರಂಥದಲ್ಲಿದೆ. ಹಾಗಾಗಿಯೇ ಇದು ಮಹತ್ವಪೂರ್ಣ ಕೃತಿಯಾಗಿದೆ. ನಾವು ನಮಗೆ ಮತ್ತು ಸಮಾಜಕ್ಕೆ ಹಿತಕರವಾದದ್ದನ್ನೇ ಮಾಡಿ ಆಯುಷ್ಯವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ಪ್ರವಚನದ ಸಾರ ಸಂಗ್ರಹ: ನಮ್ಮ ಪಂಚೇಂದ್ರಿಯಗಳು ದೇವರು ಕೊಟ್ಟ ವರ. ಇವುಗಳಲ್ಲಿ ಕಣ್ಣು ಪ್ರಧಾನ ಇಂದ್ರಿಯ. ನಾವು ಏನನ್ನು ನೋಡುತ್ತೇವೆಯೋ ಹಾಗೆ ಮಾಡುತ್ತೇವೆ. ನಮ್ಮ ಬುದ್ಧಿ ಮತ್ತು ಮನಸ್ಸುಗಳನ್ನು ನಿಯಂತ್ರಿಸುವುದೇ ಕಣ್ಣು. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಒಂದು ಸಾಧನೆ. ಒಟ್ಟಾರೆ ತಾತ್ಪರ್ಯವೇನೆಂದರೆ ನಮ್ಮ ಪಂಚೇಂದ್ರಿಯಗಳು ದೇವರ ಸೇವೆಗೆ ( ಇಚ್ಛತಾ ಅಭಯಂ) ಮತ್ತು ಮೋಕ್ಷ ಸಾಧನೆಗೆ ಪೂರಕವಾಗುವಂತೆ ಇದ್ದರೆ ಅದೇ ಸಾರ್ಥಕತೆ.


ಈ ಜಗತ್ತು ಸಾಧನಾ ಭೂಮಿ. ನಮ್ಮ ಲೌಕಿಕ ಸಂಬಂಧಗಳೆಲ್ಲವೂ ಕೆಲ ಕಾಲ ಮಾತ್ರ. ಅವು ನಿಮಿತ್ತ ಮಾತ್ರವಾಗಿರುತ್ತವೆ. ಆದರೆ ನಮ್ಮ ಶಾಶ್ವತ ಸಂಬಂಧಗಳೇನಿದ್ದರೂ ಅವು ದೇವರೊಂದಿಗೆ ಇರಬೇಕು ಎಂದು ಭಾಗವತ ಹೇಳಿದೆ. ಪರೀಕ್ಷಿತ ಮಹಾರಾಜನಿಗೆ ಕೇವಲ 7 ದಿನ ಮಾತ್ರ ಆಯುಷ್ಯವಿದೆ ಎಂದು ಶುಕಾಚಾರ್ಯರು ಹೇಳುತ್ತಾರೆ. ಕೂಡಲೇ ಆತ ಎಚ್ಚೆತ್ತು ಮೋಕ್ಷ ಸಾಧನೆಗೆ ತೊಡಗಿದ. ಆದರೆ ಮುಂದಿನ 7 ನಿಮಿಷ ಬದುಕುತ್ತೇವೆ ಎಂಬ ಭರವಸೆಗಳೇ ಇಲ್ಲದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ. ಇಂತಹಾ ಸಂದಿಗ್ಧ ಕಲಿಗಾಲದಲ್ಲಿ ದೇವರು ಕೊಟ್ಟ ಸಾಧನಾ ಶರೀರವನ್ನು, ಎನನಪು, ಬುದ್ಧಿ ಮತ್ತು ಇಂದ್ರಿಯಾದಿಗಳನ್ನು ಸತ್ಕಾರ್ಯಕ್ಕಾಗಿ ಮಾತ್ರ ಬಳಸಬೇಕು. ಆಗ ಮಾತ್ರ ಬದುಕಿ ಇರುವಷ್ಟು ಕ್ಷಣಗಳೂ ಆನಂದಮಯವಾಗುತ್ತವೆ ಎಂದು ಬಾದರಾಯಣಾಚಾರ್ಯರು ಹೇಳಿದರು.


ಪ್ರಾಣಾಯಾಮದ ಮಹತ್ವ: ನಿತ್ಯವೂ ಪ್ರಾಣಾಯಾಮ ಮಾಡುವುದರಿಂದ ಮನದ ದೋಶ ನಿವಾರಣೆ ಆಗುತ್ತದೆ ಎಂದು ಭಾಗವತ ಹೇಳಿದೆ. ಹಾಗಾಗಿ ಇದು ಆರೋಗ್ಯ ಸೂತ್ರ ಬೋಧಿಸುವ ಗ್ರಂಥವೂ ಆಗಿದೆ. ಒಂದೊಂದು ಅವಯವಗಳೂ ದೇವರ ಕೊಡುಗೆ. ಅವುಗಳಲ್ಲಿ ಭಗವಂತನನ್ನು ಧ್ಯಾನಿಸಬೇಕು. ಮನಸ್ಸೇ ಅತಿ ದೊಡ್ಡ ಸಾಧಕ. ಅದಕ್ಕೆ ಸೂಕ್ತ ತರಬೇತಿ ಕೊಡಬೇಕು. ಈ ದಿಸೆಯಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಮರೆಯಬಾರದು ಎಂದು ಭಾಗವತ ಸಂದೇಶ ಕೊಡುತ್ತದೆ.


ದೇವರನ್ನು ಕಳೆದುಕೊಂಡಿದ್ದೇವೆ:


ನದಿ, ಮರ, ಗುಡ್ಡ, ಬೆಟ್ಟ-ಇತ್ಯಾದಿಗಳನ್ನು ನೋಡಿದಾಗ ಇವೆಲ್ಲವೂ ಭಗವಂತನ ಸೃಷ್ಟಿ ಎಂಬ ಚಿಂತನೆ ಬರಬೇಕು. ಆದರೆ ಅವಸರದ ಬದುಕಿನಲ್ಲಿ ನಾವು ಇಂದು ದೇವರನ್ನು ಕಳೆದುಕೊಂಡಿದ್ದೇವೆ. ಭಾಗವತದ ಪ್ರತಿಯೊಂದು ಪದವನ್ನೂ ಅನುಭವಿಸಿ ನೋಡಿದಾಗ ಬದುಕಿನ ವಿರಾಟ್ ದರ್ಶನವಾಗುತ್ತದೆ. ನಾವೆಲ್ಲರೂ ಬದುಕಿನ ಪ್ರಯಾಣಿಕರು. ನಮ್ಮ ಗುರಿ (ಡೆಸ್ಟಿನೇಷನ್) ತಿಳಿದಿದ್ದರೆ ಮಾತ್ರ 'ಮಾರ್ಗ' ಖಚಿತವಾಗುತ್ತದೆ. ಲೋಕನಾಯಕನ ಜತೆಗೇ ಸದಾ ಇರುವ ಸಾಯುಜ್ಯವು ಮೋಕ್ಷವೆಂಬ ಗುರಿ ಎಡೆಗೆ ನಮ್ಮನ್ನು ಸುಗಮವಾಗಿ ಕರೆದೊಯ್ಯುತ್ತದೆ ಎಂದು ಬಾದರಾಯಣಾಚಾರ್ಯರು ನುಡಿದರು. 


ವರದಿ - ಚಿತ್ರ

ಬಾದರಾಯಣಾಚಾರ್ಯ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top