ಯಕ್ಷಗಾನ ರಂಗದಲ್ಲಿ ವರ್ಣರಂಜಿತ ವ್ಯಕ್ತಿತ್ವಕ್ಕೆ ಹೆಸರಾದವರು ಕುಂಬಳೆ ಸುಂದರರಾವ್. ಅವರಿಗೀಗ 88 ಹರೆಯ. ಯಕ್ಷಗಾನ ಆಟ-ಕೂಟಗಳಲ್ಲಿ ವಿಜೃಂಭಿಸಿದ ಒಬ್ಬ ಕಲಾವಿದ ತನ್ನ ಮಿತಿಯನ್ನು ಮೀರಿ ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದಲ್ಲಿ ಅಸೀಮ ಎತ್ತರಕ್ಕೆ ಏರಿದ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದವರು ಸುಂದರಣ್ಣ.
ತನ್ನ ಅಸ್ಖಲಿತ ವಾಕ್ಪಟುತ್ವದಿಂದ ಕನ್ನಡ ಭಾಷೆಯ ಸೊಗಸಾದ ನಿರೂಪಣೆ ಮತ್ತು ಪಾತ್ರ ತಾದಾತ್ಮ್ಯಗಳಿಂದ ಕುಂಬಳೆ ಸುಂದರರಾಯರು ಕಲಾಭಿಮಾನಿಗಳ ಮನಗೆದ್ದವರು. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿಗೆ ಮಾರ್ಚ್ 20, 1934 ರಲ್ಲಿ ಕುಂಬಳೆಯಲ್ಲಿ ಜನಿಸಿದ ಸುಂದರ ರಾಯರು ಕಲಿತದ್ದು ಕೇವಲ ಏಳನೇಯ ತರಗತಿ. ಕುಂಬ್ಳೆ ಕುಟ್ಯಪ್ಪನವರಿಂದ ಅವಶ್ಯವಿದ್ದಷ್ಟು ಯಕ್ಷಗಾನ ನಾಟ್ಯಾಭ್ಯಾಸ ಮಾಡಿ 1953 ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಬಣ್ಣದ ಬದುಕಿಗೆ ಅಡಿಯಿಟ್ಟರು. ಮುಂದೆ ಇರಾ ಸೋಮನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಕಾಲ ಕಲಾವಿದನಾಗಿ ದುಡಿದ ಅನುಭವ ಅವರದು.
ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದು ಅವರ ಹೆಚ್ಚುಗಾರಿಕೆ. ರಾಮ, ಕೃಷ್ಣ, ಭರತ, ಪರೀಕ್ಷಿತ, ಸುಧನ್ವ, ವಿಶ್ವಾಮಿತ್ರ, ಕರ್ಣ, ವಿಷ್ಣು, ಈಶ್ವರ, ಚಾರ್ವಾಕ ಇತ್ಯಾದಿ ಅವರಿಗೆ ಕೀರ್ತಿ ತಂದ ಪಾತ್ರಗಳು, ತಾಳಮದ್ದಲೆ ಕ್ಷೇತ್ರದಲ್ಲಿ ಬಹು ಬೇಡಿಕೆಯ ಅರ್ಥಧಾರಿಯಾಗಿಯೂ ಗುರುತಿಸಿ ಕೊಂಡಿರುವ ಕುಂಬಳೆಯವರ ಮಾತಿನ ಧಾಟಿಯನ್ನು ಅನುಕರಿಸುವ ಅದೆಷ್ಟೋ ಯುವ ಕಲಾವಿದರಿದ್ದಾರೆ. ಪ್ರಾಸ ಬದ್ಧ ಮಾತುಗಾರಿಕೆಗೆ ಹೆಸರಾದ ಅವರು ಉಳಿದವರೂ ಅದನ್ನು ಅನುಕರಿಸ ಹೊರಟಾಗ ಪ್ರಾಸ ಪ್ರಯೋಗವನ್ನೇ ಬಿಟ್ಟುಬಿಟ್ಟರು. ಸುಂದರ ರಾಯರು ಅಬುಧಾಬಿ, ದುಬಾೈ, ಬೆಹರಿನ್ ಮೊದಲಾದ ರಾಷ್ಟ್ರಗಳಲ್ಲಿ ಯಕ್ಷಗಾನ ತಂಡದೊಂದಿಗೆ ಸಂಚಾರ ಮಾಡಿದ್ದಾರೆ.
ಅನೇಕ ವರ್ಷಗಳಿಂದ ಚೌತಿಯ ಸಂದರ್ಭದಲ್ಲಿ ತನ್ನದೇ ಕಲಾವಿದರ ತಂಡದೊಂದಿಗೆ ಕರ್ನಾಟಕದ ಉದ್ದಗಲಕ್ಕೆ ಸಂಚರಿಸಿ ನೂರಾರು ಕಾಲಮಿತಿಯ ಯಕ್ಷಗಾನ ಪ್ರದರ್ಶಗಳನ್ನು ನೀಡಿದ ಅನುಭವೂ ಅವರಿಗಿದೆ. ಇನ್ನೂರಕ್ಕಿಂತ ಹೆಚ್ಚು ಧ್ವನಿ ಸುರುಳಿಗಳು ಇಪ್ಪತ್ತೈದಕ್ಕಿಂತ ಹೆಚ್ಚು ಸಿಡಿ ದೃಶ್ಯ ತಟ್ಟೆಗಳಲ್ಲೂ ಅವರು ಪಾತ್ರ ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಯಕ್ಷಗಾನ ರಂಗದ ಜನಪ್ರಿಯತೆ ಕುಂಬಳೆಯವರನ್ನು ರಾಜಕೀಯವಾಗಿಯೂ ಗೆಲ್ಲಿಸಿತು. 1994ರಲ್ಲಿ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅವರು 1998ರ ತನಕ ಕರ್ನಾಟಕದ ವಿಧಾನಸಭೆಯಲ್ಲಿ ತನ್ನ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2009ರಿಂದ 2012ರ ವರೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ದುಡಿದಿದ್ದಾರೆ. ಸಂಸ್ಕಾರ ಭಾರತಿಯ ಕರ್ನಾಟಕ ಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ ಇತ್ತೀಚಿನವರೆಗೂ ಕಾಯನಿರ್ವಹಿದ್ದಾರೆ. ಸಾರ್ವಜನಿಕ ಭಾಷಣ, ಧಾರ್ಮಿಕ ಪ್ರವಚನಗಳಲ್ಲಿ ಅವರದ್ದು ಎತ್ತಿದ ಕೈ. ಅಮೇರಿಕಾದ ಚಿಕಾಗೋದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಪೇಜಾವರ ವಿಶ್ವೇಶ್ವ ತೀರ್ಥರಿಂದ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಇತ್ಯಾದಿ ನೂರಾರು ಮಾನ-ಸನ್ಮಾನಗಳಿಗೆ ಕುಂಬಳೆ ಪಾತ್ರರಾಗಿದ್ದಾರೆ. 2007ರಲ್ಲಿ ಡಾ| ಡಿ.ಕೆ. ಚೌಟ ಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತು ‘ಸುಂದರಕಾಂಡ’ ಗ್ರಂಥ ಸಮರ್ಪಣೆಯಾಗಿದೆ.
-ಭಾಸ್ಕರ ರೈ ಕುಕ್ಕುವಳ್ಳಿ
‘ವಿದ್ಯಾ’, ಕದ್ರಿ ಕಂಬಳ ರಸ್ತೆ, ಬಿಜೈ,
ಮಂಗಳೂರು – 575004, ಮೊ.: 9449016616.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ