ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Upayuktha
0

ಕಾನೂನಿನ ಅಜ್ಞಾನವು ಕ್ಷಮಿಸತಕ್ಕದ್ದಲ್ಲ : ನ್ಯಾಯಾಧೀಶೆ ಅರ್ಚನಾ ಕೆ


ಪುತ್ತೂರು: ಕಾನೂನಿನ ಅಜ್ಞಾನವು ಕ್ಷಮಿಸತಕ್ಕದ್ದಲ್ಲ. ಕಾನೂನು ಜೀವನದಲ್ಲಿ ಅಮ್ಮನ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ ಮತ್ತು ಮನುಷ್ಯ ಗೋರಿಯನ್ನು ತಲುಪುವವರೆಗೂ ಕಾನೂನು ಮನುಷ್ಯನನ್ನು ಕಾಪಾಡುತ್ತದೆ ಎಂದು ಪುತ್ತೂರಿನ ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ ಉಣ್ಣಿತಾನ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಇ ಯಲ್ಲಿ ಗುರುವಾರ ಕಾನೂನು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಕಾನೂನು ಏಕೆ ಮುಖ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು.


ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಇವರು ಮಾತನಾಡಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಾನೂನಿನ ಸುಪರ್ದಿಯಲ್ಲಿ ಇರುತ್ತೇವೆ. ಯಾರು ತೊಂದರೆಗೆ ಒಳಗಾಗುತ್ತಾರೋ ಅವರನ್ನು ರಕ್ಷಿಸುವುದೇ ಕಾನೂನು. ಕಾನೂನಿನ ಹಿಂದೆ ಅನೇಕ ಉದ್ದೇಶಗಳಿರುತ್ತದೆ ಎಂದರು.


ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ಕುರಿತು ಇರುವ ಕಾಯಿದೆಯೇ ಪೋಕ್ಸೋ. ಮಕ್ಕಳ ದೈಹಿಕ ಮಾನಸಿಕ ವಿಕಾಸಕ್ಕೆ ತಡೆ ಆಗದಂತೆ ಜಾರಿಗೆ ಬಂದ ಕಾಯ್ದೆ ಇದಾಗಿದ್ದು, ಸಂತ್ರಸ್ತ ಮಕ್ಕಳಿಗೆ ಪರಿಹಾರವನ್ನು ನೀಡುತ್ತದೆ. ಏನಾದರೂ ಸಮಸ್ಯೆಗಳಾದರೆ ಮಕ್ಕಳು ಸಹಾಯವಾಣಿಯ ಮೊರೆ ಹೋಗಬಹುದು. ಪೋಕ್ಸೋ ಪ್ರಕರಣವನ್ನು ವಿಚಾರಣೆ ಮಾಡಲೆಂದೇ ವಿಶೇಷವಾಗಿ ಮಕ್ಕಳ ಸ್ನೇಹಿ ನ್ಯಾಯಾಲಯ ಇರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಪೋಕ್ಸೋ ವಿಷಯಕ್ಕೆ ಸಂಬಂಧಪಟ್ಟಂತೆ ಮಾಧ್ಯಮದಲ್ಲಿ ವರದಿ ಮಾಡುವಂತಿಲ್ಲ. ಯಾರಿಗೆ ತೊಂದರೆ ಆಗಿದೆಯೋ ಅಂಥವರಿಗೆ ರಕ್ಷಣೆ ನೀಡುವ ಹೊಣೆ ಸರ್ಕಾರದ್ದಾಗಿದೆ ಎಂದು ಪೋಕ್ಸೋ ಕಾಯ್ದೆಯ ನಿಯಮದ ಕುರಿತು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನೈತಿಕವಾದ ಮೌಲ್ಯಗಳು ನಮ್ಮಲ್ಲಿ ಇರಬೇಕು. ಸಮಾಜ ಸೇವೆಯ ಗುರಿ ನಮ್ಮದಾಗಬೇಕು. ಅಷ್ಟೇ ಅಲ್ಲ ನಮ್ಮ ಸುತ್ತಮುತ್ತಲು ಆಗುವ ಘಟನೆಗಳಿಗೆ ನಾವು ಸ್ಪಂದಿಸಬೇಕು ಎಂದು ತಿಳಿಸಿದರು.


ಶಾಲೆಯ ಪ್ರಾಂಶುಪಾಲೆ ಮಾಲತಿ ಡಿ ಭಟ್ ಸ್ವಾಗತಿಸಿ, ಪುತ್ತೂರಿನ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಅಂಬಿಕಾ ಸಿ ಬಿ ಎಸ್.ಇ ಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ವಂದಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶ್ರೀಚಿನ್ಮಯಿ ರೈ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top