ಮಂಗಳೂರು: ಪ್ರತಿಯೊಬ್ಬರನ್ನೂ ಕಾಯುವುದು ಆತ್ಮಸಾಕ್ಷಿ, ಇದನ್ನು ವಂಚಿಸಲು ಸಾಧ್ಯವಿಲ್ಲ. ಮಾನವ ಕಳ್ಳಸಾಗಣೆ ನಿಯಂತ್ರಣಕ್ಕೆ ಕ್ರಮಬದ್ಧ ಅನುಷ್ಟಾನ, ಕಾನೂನಿನ ಬಗ್ಗೆ ಗೌರವ, ನಾಗರೀಕನಾಗಿ ಕರ್ತವ್ಯ, ನೈತಿಕ ಹೊಣೆಗಾರಿಕೆ ಮುಖ್ಯ. ಇದರ ಸಂಪೂರ್ಣ ನಿಯಂತ್ರಣ ನಮ್ಮ ಕೈಯಲ್ಲಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಮಂಗಳೂರು ವಿವಿ ವ್ಯಾಪ್ತಿಯ ಮೊದಲ ಮಾನವ ಕಳ್ಳಸಾಗಣೆ ವಿರೋಧಿ ಕ್ಲಬ್ ಉದ್ಘಾಟಿಸಿ, ಮಾನವ ಕಳ್ಳಸಾಗಣೆ, ಕಾಳಜಿಗಳು ಮತ್ತು ತಂತ್ರಗಳು ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಮಾನವ ಕಳ್ಳಸಾಗಾಣೆ ಅಮಾನವೀಯ, ಅನಿಷ್ಠ. ಇಂತಹ ಪಿಡುಗುಗಳನ್ನು ಮಟ್ಟಹಾಕಲು ವಿದ್ಯೆಯ ಜೊತೆಗೆ ಪ್ರಜ್ಞೆ ಬೇಕು. ನಾವು ಸಂಘಟಿತರಾದಾಗ ಮಾತ್ರ ಇವುಗಳ ನಿವಾರಣೆ ಸಾಧ್ಯ ಎಂದರು.
ಮುಖ್ಯ ಅತಿಥಿ, ಮಂಗಳೂರು ಉತ್ತರ ಉಪವಲಯದ ಸಹಾಯಕ ಪೊಲೀಸ್ ಆಯುಕ್ತ ಎಸ್.ಮಹೇಶ್ ಕುಮಾರ್, ಸಮಾಜದಲ್ಲಿನ ಅನಿಷ್ಟ ಪಿಡುಗುಗಳಲ್ಲಿ ಮಾನವ ಕಳ್ಳಸಾಗಣೆ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ದಂಧೆ ಕಾನೂನಿನ ಅರಿವಿಲ್ಲದೆ ನಮ್ಮ ಸುತ್ತಮುತ್ತಲು ನಡೆಯುತ್ತಿದೆ ಮತ್ತು ಇದನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಜನಸಾಮಾನ್ಯರು ಕೂಡ ಕೈಜೋಡಿಸಬೇಕು, ಎಂದರು. ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ನ ನಿಶ್ಚಿತ ಕಾರ್ಯತಂತ್ರ ವಿಭಾಗದ ಮುಖ್ಯಸ್ಥೆ ಪ್ರತಿಮಾ ಎಂ ಗೌರವ ಅತಿಥಿಗಳಾಗಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮೊದಲಾದವರು ಉಪಸ್ಥಿತರಿದ್ದರು.
ಮಾನವ ಕಳ್ಳಸಾಗಣೆ ವಿರೋಧಿ ಕ್ಲಬ್ ನ ಅಧ್ಯಕ್ಷ ಪ್ರೊ.ಜಯರಾಜ್ ಅಮೀನ್ ಅತಿಥಿಗಳನ್ನು ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಗಾಯತ್ರಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಎ.ಹೆಚ್.ಟಿ.ಸಿ ಯ ಸದಸ್ಯ ಕಾರ್ಯದರ್ಶಿ ಡಾ. ನಾಗರತ್ನ ಕೆ. ಎ ಧನ್ಯವಾದ ಸಮರ್ಪಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ