ಕಾಸರಗೋಡು : ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ವಿಂಶತಿ ವರ್ಷದ ಅಂಗವಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ 306 ಮಂದಿಯಲ್ಲಿ 206 ಜನರಿಗೆ ಇಂದು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಭೆಯ ದಿವ್ಯಸಾನ್ನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ , ಬಾಹ್ಯ ಕಣ್ಣು ಮಾತ್ರವಲ್ಲದೆ ಹೃದಯದ ಕಣ್ಣನ್ನೂ ತೆರೆದು ಜನರ ಸೇವೆ ಮಾಡಬೇಕು. ಆಗಲೇ ಸೇವೆ ದೇವರಿಗೆ ಪ್ರೀತ್ಯರ್ಥವಾಗುವುದು ಎಂದು ನುಡಿದು, ಪ್ರಸಾದ್ ನೇತ್ರಾಲಯದ ಸೇವಾಕಾರ್ಯವನ್ನು ಪ್ರಶಂಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇದರ ವೈದ್ಯಕೀಯ ನಿರ್ದೇಶಕರಾದ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಭಾಗವಹಿಸಿ, ಜನರ ಕಣ್ಣಿನ ಆರೋಗ್ಯ ಕುರಿತು ಶ್ರೀಮಠದ ಕಾಳಜಿ ಬಗ್ಗೆ ಸಂತಸ ವ್ಯಕ್ತಪಡಿಸಿದರರು. ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯದ್ ಮಕ್ಬುಲ್ ಉಪಸ್ಥಿತರಿದ್ದರು. ನೇತ್ರಶಿಬಿರದಲ್ಲಿ 56 ಮಂದಿಗೆ ಕಣ್ನಿನ ಪೊರೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು, ಈಗಾಗಲೇ ಅವರಲ್ಲಿ 23 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ ಅಧ್ಯಕ್ಷತೆ ವಹಿಸಿದ್ದರು. ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಹಾಡಿದರು. ರಾಮಚಂದ್ರ ಚೆರುಗೋಳಿ ಸ್ವಾಗತಿಸಿ, ಯವರು ನಡೆಸಿ, ಡಾ.ಗೋಪಿನಾಥ್ ರವರು ವಂದಿಸಿದರು. ಸದಾಶಿವ ಮೋಂತಿಮಾರು ನಿರೂಪಿಸಿದರು.