ಖ್ಯಾತ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯು ಸನಿಹದಲ್ಲಿರುವ ಈ ಶುಭ ಸಂದರ್ಭದಲ್ಲಿ , ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು #ShineYourCity (ನಿಮ್ಮ ನಗರವನ್ನು ಬೆಳಗಿಸಿ) ಅಭಿಯಾನವನ್ನು ಕೈಗೊಂಡರು. ಈ ವರ್ಷ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಲು ನಾಗರೀಕರನ್ನು ಉತ್ತೇಜಿಸಲು, ಆರ್ಕಿಡ್ಸ್ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಬಿಟಿಎಂ ಲೇಔಟಿನ ನಂದಿನಿ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಖ್ಯಾತ ಪರಿಸರವಾದಿ, ಹಿರಿಯ ನಟ ಹಾಗೂ ಎಕೋ ವಾಚ್ ಸಂಸ್ಥಾಪಕ ಸುರೇಶ ಹಬ್ಳೀಕರ್ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಹೊಂಗೆ, ದಾಸವಾಳ, ಅಶೋಕ, ಬೇವು, ಬಿಲ್ವಪತ್ರೆ ಸೇರಿದಂತೆ ವಿವಿಧ ಸಸಿಗಳನ್ನು ತಂದಿದ್ದರು. ವಿದ್ಯಾರ್ಥಿಗಳು ಮೈದಾನದವನ್ನು ಸ್ವಚ್ಛಗೊಳಿಸಿ ತದನಂತರ ಸಸಿಗಳನ್ನು ನೆಟ್ಟು ನೀರುಣಿಸಿದರು. ನೆಟ್ಟಿರುವ ಸಸಿಗಳನ್ನು ಮುತುವರ್ಜಿಯಿಂದ ನೋಡಿಕೊಂಡು,ಇನ್ನೂ ಹೆಚ್ಚಿನ ಸಸಿಗಳನ್ನು ನೆಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.
ಸುರೇಶ ಹೆಬ್ಳೀಕರ್ ಅವರು ವಿದ್ಯಾರ್ಥಿಗಳಿಗೆ ಜೀವವೈವಿಧ್ಯದ ಮಹತ್ವ ಮತ್ತು ಪರಿಸರ ಉಳಿಸುವ ಅಗತ್ಯತೆಯ ಕುರಿತು ಮಾತನಾಡಿದರು. "ನಗರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಮನುಜ ಸಮೂಹ ಪ್ರಕೃತಿಯ ವಿನಾಶಕ್ಕೆ ಕಾರಣರಾಗಿದ್ದಾರೆ. ಆದ್ದರಿಂದ ಪರಿಸರ ಉಳಿಸುವುದು ನಮಗೆ ಬಹುಮುಖ್ಯವಾಗಿದ್ದು, ಯುವ ಮನಸ್ಸುಗಳು ಪ್ರಾಥಮಿಕವಾಗಿ ಇದರ ಕಡೆ ಗಮನಹರಿಸಬೇಕು. ಅಳಿದಿರುವ ಪ್ರಕೃತಿಯನ್ನು ಪೋಷಿಸಿ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ" ಎಂದರು.
ಆರ್ಕಿಡ್ಸ್ ಆಂತಾರಾಷ್ಡ್ರೀಯ ಶಾಲೆ, ಬಿಟಿಎಂ ಲೇಔಟ್ನ ಪ್ರಾಂಶುಪಾಲೆ ಜಾಸ್ಮಿನ್ ಕೆ. ಜೆ ಮಾತನಾಡಿ, "ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣವು ಅಗತ್ಯವಾಗಿದ್ದು, ಸಂಕೀರ್ಣ ಪರಿಸರ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ, ಎಳವೆಯಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಮುಂದಕ್ಕೆ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ" ಎಂದರು.
ಪರಿಸರವನ್ನು ಸ್ವಚ್ಛವಾಗಿರಿಸಿ, ಪಟಾಕಿ ಮುಕ್ತ ದೀಪಾವಳಿಯನ್ನು ಆಚರಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಭಾ ಕಾರ್ಯಕ್ರಮದ ನಂತರ ಸುರೇಶ್ ಹೆಬ್ಳೀಕರ್ ಅವರೊಂದಿಗೆ ಸಂವಾದ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ