ಕುಂಬಳೆ: ಅನಂತಪುರ ಸರೋವರ ಕ್ಷೇತ್ರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

Chandrashekhara Kulamarva
0

ಚಿತ್ರ: ರವಿನಾರಾಯಣ ಗುಣಾಜೆ


ಕುಂಬಳೆ: ಕಾಸರಗೋಡಿನ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ತನ್ನ ಸುದೀರ್ಘ ಬದುಕಿಗೆ ವಿದಾಯ ಹೇಳಿದೆ.


ಬಬಿಯಾ ಇಹಲೋಕ ತ್ಯಜಿಸಿದ ಘಟನೆ ಭಾನುವಾರ ತಡರಾತ್ರಿ ವೇಳೆಗೆ ದೇವಸ್ಥಾನದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಬಳಿಕ ಸ್ಥಳೀಯ ನಿವಾಸಿಗಳು ಸರೋವರದಿಂದ ಬಬಿಯಾನ ಕಳೇಬರವನ್ನು ಮೇಲಕ್ಕೆತ್ತಿ ವಿಧ್ಯುಕ್ತ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.



ನೂರಾರು ವರ್ಷಗಳಿಂದ ಈ ಮೊಸಳೆ ಅನಂತಪುರ ಕ್ಷೇತ್ರದ ಸರೋವರದಲ್ಲಿ ವಾಸವಿದ್ದು, ದೇವರ ಮೊಸಳೆ ಎಂದೇ ಖ್ಯಾತವಾಗಿತ್ತು. ದೇವಸ್ಥಾನದ ನೈವೇದ್ಯದ ಪ್ರಸಾದವನ್ನು ಪ್ರತಿನಿತ್ಯ ಸ್ವೀಕರಿಸುತ್ತಿದ್ದ ಬಬಿಯಾ, ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಆಗಾಗ್ಗೆ ದರ್ಶನ ನೀಡುತ್ತಿದ್ದ. ಯಾರಿಗೂ ಯಾವುದೇ ರೀತಿಯ ತೊಂದರೆ ನೀಡದ ಬಾಳಿದ ಬಬಿಯಾನನ್ನು ಭಕ್ತಾದಿಗಳು ದೇವರ ಮೊಸಳೆ ಎಂಬ ಭಕ್ತಿಯಿಂದ ಕಾಣುತ್ತಿದ್ದರು.




ಕ್ಷೇತ್ರದ ಐತಿಹ್ಯದ ಪ್ರಕಾರ, ಹಿಂದೆ ಬ್ರಿಟಿಷರ ಆಡಳಿತ ಕಾಲದಲ್ಲಿ ಬ್ರಿಟಿಷ್‌ ಅಧಿಕಾರಿಯೊಬ್ಬ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ಷೇತ್ರದ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದ. ಆದರೆ ಮರುದಿನವೇ ಸರೋವರದಲ್ಲಿ ಮೊಸಳೆ ಮತ್ತೆ ಕಾಣಿಸಿಕೊಂಡಿತ್ತು. ಅಂದಿನಿಂದ ಜನತೆ ಮೊಸಳೆಯನ್ನು ದೇವರ ಮೊಸಳೆಯೆಂದೇ ನಂಬಿಕೊಂಡು ಪೂಜಿಸುತ್ತಿದ್ದರು. ಕ್ಷೇತ್ರದ ಸರೋವರದಲ್ಲಿ ಕೇವಲ ಒಂದೇ ಮೊಸಳೆ ಇದ್ದುದು ಬ್ರಿಟಿಷ್‌ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದುದನ್ನು ಸ್ಥಳೀಯರೇ ನೋಡಿದ್ದರು. ಆದರೆ ಮರುದಿನವೇ ಮೊಸಳೆ ಪುನರ್ಜನ್ಮವೆತ್ತಿದಂತೆ ಮರಳಿ ಕಾಣಿಸಿಕೊಂಡಿದ್ದುದು ಆಸ್ತಿಕರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.


ಆ ನಂತರವೂ ಕ್ಷೇತ್ರದಲ್ಲಿ ಇದುವರೆಗೂ ಒಂದೇ ಮೊಸಳೆ ವಾಸವಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top