
ಬಹುಶ: ನನ್ನ ಈ ಲೇಖನ ಹಲವರು ಹುಬ್ಬೇರಿಸುವಂತೆ ಮಾಡಲೂ ಸಾಕು. ನನ್ನ ಮೇಲೆ ಕಲ್ಲು ಮುಳ್ಳುಗಳ ಸುರಿಮಳೆಯಾಗಲೂ ಸಾಕು. ಹಾಗೆಂದು ವಾಸ್ತವವನ್ನು ತಿಳಿಸದಿದ್ದರೆ ಚರಿತ್ರೆಗೇ ಮಾಡಿದ ಅಪಮಾನವಾಗಲಾರದೇ?
ಇಂದಿನ ಈ ಸ್ಥಿತಿಗೆ ಕಾರಣರಾರು? ಅದೇ ಮೊದಲ ಪ್ರಶ್ನೆ. ಅದಕ್ಕೆ ಉತ್ತರ ನನ್ನ ಪ್ರಕಾರ:
ಅವೈಜ್ಞಾನಿಕ ಮುಂದಾಲೋಚನೆ ಇಲ್ಲದ ಮಾಡಿದ ಭಾಷಾವಾರು ಪ್ರಾಂತ್ಯ ರಚನೆ ಎಂಬ ಹುಚ್ಚು ನಿರ್ಧಾರ. ಯಾವುದೇ ಭಾಷೆ ಇರಲಿ ಗೀಟು ಎಳೆದಂತೆ ಒಂದು ಚೌಕಟ್ಟಿನೊಳಗೆ ನಿಲ್ಲ ಬಹುದೇ? ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಾವಣೆಯಾಗುವ ಗಡಿ ಯಾವುದು? ಯಾವುದೇ ಪ್ರಾಂತ್ಯದ ಮಧ್ಯ ಭಾಗ ತೆಗೆದು ಕೊಂಡರೆ ಅಲ್ಲಿಂದ ಗಡಿಗಳ ವರೆಗೆ ಆಡು ಭಾಷೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಈಗ ಅವೈಜ್ಞಾನಿಕವಾಗಿ ನಿರ್ಮಿಸಿದ ಗಡಿಗಳಿಗೆ ತಲಪುವಾಗ 50 ಅಥವಾ 60% ಒಂದು ಭಾಷೆ ಮಾತನಾಡುವವರಾದರೆ ಉಳಿದವರು ಇನ್ನೊಂದು ಭಾಷೆ ಮಾತನಾಡುವವರು. ಭಾಷಾವಾರು ಪ್ರಾಂತ್ಯ ರಚನೆ ಅವರಿಗೆ ನ್ಯಾಯ ಒದಗಿಸ ಬಲ್ಲುದೇ?
ಪೊಟ್ಟಿ ಶ್ರೀರಾಮುಲು ಎಂಬ ಭಾಷಾ ದುರಭಿಮಾನಿ ಭಾಷಾವಾರು ಪ್ರಾಂತ್ಯ ರಚನೆ ಎಂಬ ಒಂದು ಕಲ್ಪನೆಯನ್ನು ಹರಿ ಬಿಟ್ಟಾಗಲೇ ಅದನ್ನು ತಡೆಗಟ್ಟಿದ್ದರೆ ಮುಂದಿನ ಈ ಅನಾಹುತಗಳೊಂದೂ ನಡೆಯುತ್ತಿರಲಿಲ್ಲ. ಜವಾಹರ್ ಲಾಲ್ ನೆಹರೂ ಎಂಬ ಹೊರ ದೇಶದಲ್ಲಿ ತನ್ನ ಹೆಸರು ಮೆರೆಸಿ ಉತ್ತಮನೆನಿಸಿ ಕೊಳ್ಳುವ ಹುಚ್ಚು ಹೊಂದಿದ್ದ ಪ್ರಧಾನ ಮಂತ್ರಿ ಯಾವುದೇ ಸಂದರ್ಭ ಬಂದರೂ ಭಾಷಾವಾರು ಪ್ರಾಂತ್ಯ ರಚನೆ ಇಲ್ಲವೇ ಇಲ್ಲ ಎಂಬ ಹಠಮಾರಿ ಧೋರಣೆ ತಳೆದ. ಆದರೆ ಹಿಡಿದ ಛಲ ಸಾಧಿಸಲು ಇವರೇನು ವಲ್ಲಭಾಭಾಯಿ ಪಠೇಲರಲ್ಲ. ಸಾಕಷ್ಟು ಜನ ಪೊಟ್ಟಿ ಶ್ರೀರಾಮುಲುವಿನೊಂದಿಗೆ ಸಂಧಾನ ನಡೆಸಲು ತಿಳಿಸಿದರೂ ದುರಹಂಕಾರದಲ್ಲಿ ಎಲ್ಲಾ ಸಲಹೆ ಗಳನ್ನೂ ತಳ್ಳಿ ಹಾಕಿದ್ದರು. ಪರಿಣಾಮ ಪೊಟ್ಟಿ ಶ್ರೀ ರಾಮುಲು ಉಪವಾಸ ಕೈಗೊಂಡು ಅವರ ದೇಹಾಂತ್ಯವಾಯಿತು. ಈ ದೇಹಾಂತ್ಯದೊಂದಿಗೆ ಆಂದ್ರ ಪ್ರದೇಶ ಸಂಪೂರ್ಣ ಹೊತ್ತಿ ಉರಿಯ ತೊಡಗಿತು. ಈಗ ಈ ಅಸಮರ್ಥ ಪ್ರಧಾನಿ ಕೂಡಲೇ ಭಾಷಾವಾರು ಪ್ರಾಂತ್ಯ ರಚನೆ ಮಾಡುತ್ತೇನೆಂದು ಘೋಷಿಸಿ ಬಿಟ್ಟರು. ಗೋವಿಂದ ವಲ್ಲಭ ಪಂತರೆಂಬ ಸಮರ್ಥ ಗೃಹಮಂತ್ರಿ ಎನಿಸಿದವರೂ ಅಸಹಾಯಕರಾಗಿ ತಮ್ಮ ಸಮ್ಮತಿಯನ್ನೂ ಒತ್ತಿ ಬಿಟ್ಟರು. ಅಲ್ಲಿಗೆ ತೊಗ್ಲಕ್ ಭರಣದ ಒಂದನೇ ಹುಚ್ಚು ಸುರುವಾಗಿಯೇ ಹೋಯಿತು.
ಇಂದು ಅದೇ ಪೊಟ್ಟಿ ಶ್ರೀರಾಮುಲುವಿನ ಆಂದ್ರ ಪ್ರದೇಶ ಒಂದೇ ಭಾಷೆಯಾದರೂ ಎರಡಾಗಿ ಒಡೆದಿದೆ. ಅವನ ತೆಲುಗು ಪ್ರೇಮ ಆಂದ್ರವನ್ನು ಒಂದಾಗಿಸಿ ಇರಿಸಿ ಕೊಳ್ಳಲು ಸಹಕರಿಸಲಿಲ್ಲ. ಅತೀ ಕೆಟ್ಟ ಆಡಳಿತಾ ನಿರ್ಧಾರಕ್ಕೆ ಒಂದು ಉದಾಹರಣೆಯೇ ಈ ಭಾಷಾವಾರು ಪ್ರಾಂತ್ಯ ರಚನೆ. ಒಂದೇ ಭಾಷೇ ಊರಿಂದ ಊರಿಗೆ ವ್ಯತ್ಯಾಸ ವಾಗುತ್ತಾ ಹೋಗುತ್ತದೆಂಬ ಸಾಮಾನ್ಯ ಜ್ಞಾನ ಸಾಕಿತ್ತು ಇದು ಅವೈಜ್ಞಾನಿಕ ಎಂದು ತಿಳಿಯಲು.
ಉದಾ: ಧಾರವಾಡದ ಕನ್ನಡ ಬೆಂಗಳೂರು ಕನ್ನಡ. ಹಾಗೆಯೇ ಮಂಗಳೂರು ಕನ್ನಡ ಉತ್ತರ ಕನ್ನಡದ ಕನ್ನಡ.
ನಾವಿರುವ ಕೇರಳದ ಕಾಸರಗೋಡು ಮಲೆಯಾಳ ಕೋಝಿಕ್ಕೋಡಿಗೆ ತಲಪುವಾಗ ವ್ಯತ್ಯಾಸ ವಾಗಿ ಬಿಡುತ್ತದೆ. ಇನ್ನು ಟಿಸಿ ಕಡೆಯ ಮಲೆಯಾಳಿಗಳು ರಾಗ ಎಳೆದು ಮಾತನಾಡುವ ಮಲೆಯಾಳವೇ ಬೇರೆ. ಪಾಲ್ಘಾಟ್ ಕಡೆ ಹೋದರೆ ತಮಿಳು ಮಿಶ್ರಿತ ಮಲೆಯಾಳ. ಹೇಗೆ ಈ ಭಾಷೆಯಲ್ಲೇ ವ್ಯತ್ಯಾಸ ಹೊಂದಿದವರಿಗೆಲ್ಲಾ ನ್ಯಾಯ ಒದಗಿಸುತ್ತೀರಾ?
ಎರಡನೆಯದೇ ರಾಜಕೀಯ ಹಸ್ತಕ್ಷೇಪ. ಕಾಂಗ್ರೆಸ್ ಆಗ ಸಂಪೂರ್ಣ ಭಾರತವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಂಡಿತ್ತು. ಆದರೆ ಅಲ್ಲಿ ಹೆಚ್ಚಿನ ಕಾರುಬಾರು ಒಂದಷ್ಟೂ ಉತ್ತರ ಭಾರತದ ನಾಯಕರುಗಳಾಗಿದ್ದರೆ ಇನ್ನೊಂದಷ್ಟು ತಮಿಳರು ಹಾಗೂ ಮಲೆಯಾಳಿಗಳದ್ಧು. ಉಳಿದವರೆಲ್ಲ ಹೆಸರಿಗುಂಟು ಆಟಕ್ಕಿಲ್ಲ ಎಂಬುವವರು. ಅದರ ಪರಿಣಾಮ ಆಯಾಯಾ ಪ್ರದೇಶದ ನಾಯಕರೆನಿಸಿ ಕೊಂಡವರು ಅವರ ಸ್ವಾರ್ಥಕ್ಕೆ ಬೇಕಾದಂತೆ ಭಾಷೆಯ ಗಡಿಯನ್ನು ಹಾಕಿಸಿ ಪ್ರಾಂತ್ಯ ವಿಭಜನೆ ಮಾಡಿಯೇ ಬಿಟ್ಟರು. ಅಸ್ತಿತ್ವವೇ ಇಲ್ಲದ ಮಲೆಯಾಳಕ್ಕಾಗಿ ಕೇರಳ ಎಂಬ ರಾಜ್ಯವನ್ನೇ ಮಾಡಿ ಕೊಟ್ಟರು.
ಕೆ.ಪಿ.ಕೇಶವ ಮೆನನ್ ಎಂಬ ಸೂಕ್ಷ್ಮ ಬುದ್ದಿಯ ಮಲೆಯಾಳಿ ಪಣಿಕ್ಕರ್ ಎಂಬ ಮತ್ತೊಬ್ಬ ಬುದ್ದಿಜೀವಿ ಅಧಿಕಾರಿಯೊಂದಿಗೆ ಸೇರಿ ತನಗೆ ಬೇಕಾದಂತೆ ಕೇರಳ ರಾಜ್ಯವನ್ನು ಸೃಷ್ಟಿ ಮಾಡಿ ಬಿಟ್ಟ. ಸಂಪೂರ್ಣ ಕನ್ನಡ ನಾಡಾಗಿದ್ದ ಕಾಸರಗೋಡು ಹೊಸದುರ್ಗಗಳನ್ನು ಕೇರಳಕ್ಕೆ ಸೇರಿಸಿಯೇ ಬಿಟ್ಟ. ಚಂದ್ರಗಿರಿಯಾಚೆ ಹೊಸದುರ್ಗದ ವರೆಗೆ ಆ ಕಾಲದಲ್ಲಿ ಹೆಚ್ಚು ಕಡಮೆ 50:50 ಪ್ರಮಾಣದಲ್ಲಿ ಮಲೆಯಾಳ ಕನ್ನಡಗಳಿದ್ದರೆ ಚಂದ್ರಗಿರಿಯ ಉತ್ತರಕ್ಕೆ 70:30 ಪ್ರಮಾಣದಲ್ಲಿ ಕನ್ನಡ ಹಾಗೂ ಮಲೆಯಾಳಿಗಳಿದ್ದರು. ಅದರಲ್ಲಿ ಮಾಪ್ಳೆ ಮಲೆಯಾಳ ಮಾತನಾಡುವ ಮಲೆಯಾಳಿಗಳ ಸಂಖ್ಯೆಯೇ ದೊಡ್ಡದಿತ್ತು. ಇವರೆಲ್ಲಾ ಕನ್ನಡವೇ ಕಲಿತು ಕನ್ನಡದಲ್ಲೇ ವ್ಯವಹರಿಸುತ್ತಿದ್ದರು. ಆದರೆ ರಾಜಕೀಯದಾಟ ಕಾಸರಗೋಡನ್ನು ಶಾಶ್ವತವಾಗಿ ಕನ್ನಡ ನಾಡಿನಿಂದ ಬೇರ್ಪಡಿಸಿತ್ತು.
ಆ ಕಾಲದ ಹಿರಿಯರು ಕನ್ನಡಕ್ಕಾಗಿ ಮಾಡಿದ ಚಳವಳಿಗಳೆಲ್ಲಾ ನಿರರ್ಥಕವಾಗಿತ್ತು. ನರಸತ್ತ ಕರ್ನಾಟಕದ ರಾಜಕಾರಣಿಗಳಿಗೆ ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ನಾಡು ಬೇಡವಾಯಿತು. ರಾಷ್ಟಕವಿ ಗೋವಿಂದ ಪೈಗಳು ಕಯ್ಯಾರರು ಎಲ್ಲಾ ಕೇರಳವೆಂಬ ಮಲೆಯಾಳ ರಾಜ್ಯದಲ್ಲಿ ಹುದುಗಿಯೇ ಹೋದರು. ಕನ್ನಡಕ್ಕೆ ಎಷ್ಟೆಷ್ಟೋ ಉಡುಗೊರೆ ಕೊಟ್ಟ ಕಾಸರಗೋಡಿನ ಕನ್ನಡಿಗರ ಹೆಸರು ಕೂಡ ನೆನಪಿಡಲು ಮನಸ್ಸಿಲ್ಲದಾಯಿತು ಕರ್ನಾಟಕದ ನಾಯಕತ್ವಕ್ಕೆ. ಕೇವಲಾ ಬೆಳಗಾಂ ಬಗ್ಗೆ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದ ಕರ್ನಾಟಕದ ರಾಜಕಾರಣಿಗಳು ಹಾಗೂ ಕನ್ನಡ ಹೋರಾಟಗಾರರೆಂದು ಕರೆಸಿ ಕೊಳ್ಳುವವರಿಗೆಲ್ಲಾ ಕಾಸರಗೋಡು ಅಲಕ್ಷ್ಯಗೊಂಡ ಕೂಸು.
ಆದ್ದರಿಂದ ಸಂಭ್ರಮಿಸಲೇ ಈ ರಾಜ್ಯೋತ್ಸವವೆಂಬ ಸುಳ್ಳು ಪ್ರಹಸನವನ್ನು. ನೈಜವಾದ ಕನ್ನಡ ರಾಜ್ಯ ಉದಯವಾಗಿದೆಯೇ? ಕನ್ನಡದ ಮಕ್ಕಳಿಗೆ ಭೂಲೋಕದ ಯಾವ ಭಾಗದಲ್ಲಾದರೂ ನೋವಾದರೆ ಪ್ರತಿಕರಿಸುವ ಶಕ್ತಿ ಇದೆಯೇ ಕನ್ನಡ ಹೋರಾಟಗಾರರೆಂದು ಶಾಲು ಹೊದೆದು ನವೆಂಬರ್ ಒಂದಕ್ಕೆ ಭಾಷಣ ಬಿಗಿಯುವವರಿಗೆ?
ಇಲ್ಲ ಸ್ವಾಮಿ ಇಲ್ಲವೇ ಇಲ್ಲ. ಯಾಕೆಂದರೆ ಇವರಿಗೆಲ್ಲಾ ಕನ್ನಡದ ಮೇಲೆ ಅಭಿಮಾನವಲ್ಲ ಇರೋದು ಕೇವಲಾ ದುರಭಿಮಾನ. ಪರಭಾಷೆಯ ಮೇಲೆ ಇರಬೇಕಾದ ಸಹಿಷ್ಣುತೆ ಇಲ್ಲದೆ ತಮ್ಮ ರಾಜ್ಯದಲ್ಲಿ ನಡೆಸುವ ಚಳವಳಿ ಇತರ ರಾಜ್ಯದಲ್ಲಿ ಇರುವ ತನ್ನದೇ ರಾಜ್ಯದ ಜನಗಳಿಗೆ ತೊಂದರೆ ಕೊಡುವುದು ಎಂಬ ಅಲ್ಪ ಜ್ಞಾನವೂ ಇಲ್ಲದಾಯಿತೇ ಈ ಹೋರಾಟಗಾರರಿಗೆ?
ನಿಮ್ಮ ಮನೆಯಂಗಳದಲ್ಲಿ ನೀವು ಇನ್ನೊಬ್ಬನಿಗೆ ಕೊಡುವ ತೊಂದರೆ ತನ್ನದೇ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ನಾಯಿಯ ಬೊಗಳುವಿಕೆಗೆ ಸಮನಲ್ಲವೇ?
ಅರಿತು ನಡೆದರೆ ಮಾತ್ರ ಲೋಕದಲ್ಲಿ ಎಲ್ಲೆಂದರಲ್ಲಿ ಇರುವ ಕನ್ನಡಿಗರಿಗೆ ತೊಂದರೆಯಾದರೆ ಎದ್ಧು ಹೋರಾಟ ಮಾಡುವ ಕಿಚ್ಚು ಬರ ಬಹುದಷ್ಟೆ. ಇಲ್ಲವಾದರೆ ತನ್ನಂಗಳದಲ್ಲಿ ಬೊಗಳಿ ಹೊರಗೆ ಹೋದ ಕೂಡಲೇ ಕುಯ್ಯಿಂಗುಟ್ಟಿ ಬಾಲ ಅಡಿಗೆ ಹಾಕಿ ಮುದುರಿಕೊಳ್ಳುವ ನಾಯಿಯ ಬೊಗಳುವಿಕೆಗೆ ಸಮನಾಗದೇ ಈ ಹೋರಾಟಗಳು?
ಕಾಸರಗೋಡಿನಲ್ಲಿ ಕನ್ನಡ ಎಂಬುದು ಎಂದೋ ಸತ್ತು ಹೋಗಿದೆ. ಈಗ ಇರುವುದು ಭಗವಂತಾ ಈ ಜೀವವನ್ನು ಬೇಗ ಕೊಂಡು ಹೋಗಪ್ಪಾ ಎಂದು ಪ್ರಾರ್ಥಿಸುವ ಕನ್ನಡವಷ್ಟೇ. ಅದೂ ಬೇಗ ಆಗ್ತದೆ ಬಿಡಿ ಬೇಸರ ಪಡ್ಬೇಡಿ. ಸಾಧ್ಯ ಇದ್ದರೆ ಆಗ ಬಂದು ಕಾಸರಗೋಡಿನ ಕನ್ನಡದ ಶವ ಪೆಟ್ಟಿಗೆಯ ಮೇಲೆ ಎರಡು ಹೂ ಇಟ್ಟು ಒಂದು ಊದು ಬತ್ತಿ ಹಚ್ಚಿ ಎರಡು ಮೊಸಳೆ ಕಣ್ಣೀರು ಸುರಿಸಿ ಹೋಗಿ ಬಿಡಿ.
ಒಂದು ಅರಸಿನ ಶಾಲು ಹೊದೆದು ಜೈ ಕನ್ನಡಾಂಬೆ ಎಂದೂ ಅಂದು ಬಿಡಿ. ಪಾರ್ತಿಸುಬ್ಬ ಇರಬಹುದು. ಉಮೇಶ್ ರಾವ್, ಮಹಾಬಲ ಭಂಡಾರಿ, ಕುಣಿಕುಳ್ಳಾಯ, ಶೆರೂಲ್, ಕಯ್ಯಾರರು, ಮಂ.ಗೋವಿಂದ ಪೈ ಯವರು ಹೀಗೆ ಎಷ್ಟೆಷ್ಟೋ ಹೆಸರಿಸಲೂ ಸಿಗದಷ್ಟು ಮಹಾನುಭಾವರೆಲ್ಲಾ ಕನ್ನಡದವರು ಎಂಬುದನ್ನೇ ಮರೆತು ಸಂಭ್ರಮಿಸಿ ಬಿಡಿ.
ನನ್ನಂತಹ ಬೆರಳೆಣಿಕೆಯ ಕನ್ನಡಿಗ ಎಂಬುವವರು ಇಂತಹ ಬರಹ ಬರೆಯುವುದು ನಿಂತೇ ಹೋಗಲಿ ಎಂದು ಕೂಡಾ ಪ್ರಾರ್ಥಿಸಿ ಬಿಡಿ. ಅಲ್ಲಿವರೆಗೂ ನಾವಂತೂ ಕಾಸರಗೋಡಿನ ಕನ್ನಡಿಗರಿಗಿದು ಕರಾಳದಿನ ಎನ್ನುವವರೆ
-ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ