ಕಾಸರಗೋಡು: "ಕಾಸರಗೋಡು ಬಹುಭಾಷೆಗಳ ನಾಡಾದರೂ ಇಲ್ಲಿ ಕನ್ನಡವೇ ಪ್ರಧಾನವಾಗಿದೆ. ಕನ್ನಡದ ಕಲೆ ಮತ್ತು ಸಾಹಿತ್ಯ ಇಲ್ಲಿ ಶ್ರೀಮಂತವಾಗಿದೆ.ಅದರಲ್ಲೂ ಗಮಕ ಮತ್ತು ಯಕ್ಷಗಾನ ಕಲೆಗಳೆರಡೂ ನಮ್ಮ ಸಂಸ್ಕೃತಿಯ ಕಣ್ಣುಗಳು" ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಯೋಗೀಶ್ ರಾವ್, ಚಿಗುರುಪಾದೆ ಅಭಿಪ್ರಾಯ ಪಟ್ಟರು.
ಅವರು ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಹವ್ಯಕ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ "ಕಲೋಪಾಸನೆ" ಸಮಾರಂಭದ ದ್ವಿತೀಯ ದಿನದಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಗಮಕ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಲಾಶ್ರೀ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀ ಕೃಷ್ಣಪ್ರಸಾದ್ ಕೋಟೆಕಣಿ ಹಾಗೂ ಶ್ರೀ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಭಾಗವಹಿಸಿದ್ದರು. ಅನಂತರ ಜರಗಿದ "ಸಾಂಪ್ರದಾಯಿಕ ಹಾಡು" ಕಾರ್ಯಕ್ರಮದಲ್ಲಿ ಶ್ರೀಮತಿಯರಾದ ಪುಷ್ಪಲತಾ ವಿ.ಕೆ.ಭಟ್, ಪ್ರೇಮಲತಾ ಮನ್ನಿಪ್ಪಾಡಿ, ಜಯಲಕ್ಷ್ಮೀ ಜಿ.ಭಟ್, ವಿಜಯಾಸುಬ್ರಹ್ಮಣ್ಯ, ಶೈಲಜಾ ಬಿ.ಅವರು ಸಂಪ್ರದಾಯದ ಹಾಡುಗಳ ಗೋಷ್ಠಿಯನ್ನು ನಡೆಸಿಕೊಟ್ಟರು.
ಮಹಾಕವಿ ಕುಮಾರವ್ಯಾಸ ಭಾರತದಿಂದಾಯ್ದ "ಪಾಶುಪತಾಸ್ತ್ರ" ಎಂಬ ಭಾಗದ ಗಮಕ ವಾಚನ-ವ್ಯಾಖ್ಯಾನಗಳನ್ನು ಕರ್ನಾಟಕ ಕಲಾಶ್ರೀ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀ ರಾಧಾಕೃಷ್ಣ ಕಲ್ಚಾರು ನಡೆಸಿಕೊಟ್ಟರು.
ಅಪರಾಹ್ಣ "ಕರ್ಣಾರ್ಜುನ" ಎಂಬ ಯಕ್ಷಗಾನ ತಾಳಮದ್ದಳೆಯ ನುರಿತ ಕಲಾವಿದರ ಕೂಡುವಿಕೆಯಿಂದ ಜರಗಿತು. ಮುಮ್ಮೇಳದಲ್ಲಿ ಭಾಗವತರಾಗಿ ಶ್ರೀ ಪುತ್ತೂರು ರಮೇಶ ಭಟ್, ಚೆಂಡೆವಾದಕರಾಗಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆ ವಾದಕರಾಗಿ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ ಮುಮ್ಮೇಳದಲ್ಲಿ ಶ್ರೀಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ವಾಸುದೇವರಂಗ ಭಟ್, ರಾಧಾಕೃಷ್ಣ ಕಲ್ಚಾರು, ಡಾ|ಶ್ರೀಶ ಕುಮಾರ ಪಂಜಿತ್ತಡ್ಕ ಭಾಗವಹಿಸಿದ್ದರು.
ಸಮಾರೋಪ ಭಾಷಣವನ್ನು ಡಾ|ಯು.ಮಹೇಶ್ವರಿ ನೆರವೇರಿಸಿದರು. ವಿ.ಬಿ.ಕುಳಮರ್ವ ವಿರಚಿತ ಭಾಮಿನಿ ಷಟ್ಪದಿಯ ಗಮಕಗೀತೆಯನ್ನು ಪ್ರಾರ್ಥನೆಯಾಗಿ ಕು|ಸಂವೃತಾ ಭಟ್, ಪೇರ್ಯ ಅವರು ಹಾಡಿದರು. ಶ್ರೀ ವಿಶಾಲಾಕ್ಷ ಪುತ್ರಕಳ ಮತ್ತು ಶ್ರೀ ಡಿ. ಜಯನಾರಾಯಣ ತಾಯನ್ನೂರು ವಂದನಾರ್ಪಣೆ ಗೈದರು.
ಪ್ರಧಾನ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಸಮಗ್ರ ಪ್ರಸ್ತಾವನೆಯೊಂದಿಗೆ ಸಮಾರಂಭದ ನಿರೂಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ