ಧನ್ವಂತರಿ ಜಯಂತಿ: ದೇವ ವೈದ್ಯನ ಪೂಜಿಸುವ ದಿನ

Upayuktha
0

ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಧನ್ವಂತರಿ ದೇವರಿಗೆ ವಿಶೇಷವಾದ ಸ್ಥಾನವಿದೆ. ಪುರಾತನ ವೇದ ಗ್ರಂಥಗಳಲ್ಲಿ ಧನ್ವಂತರಿ ದೇವರನ್ನು ಆಯುರ್ವೇದ ಶಾಸ್ತ್ರದ ದೇವರು ಎಂದೂ ಪೂಜಿಸಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರುಗಳು ಧನ್ವಂತರಿಯನ್ನು ವಿಷ್ಣುವಿನ ಅವತಾರ ಎಂದೂ ಸಂಬೋಧಿಸುತ್ತಾರೆ ಮತ್ತು ಪೂಜಿಸುತ್ತಾರೆ. ವೈದ್ಯರುಗಳ ದೇವರು, ಗಾಯ ಗುಣಪಡಿಸುವ ದೇವರು, ಆಯುರ್ವೇದ ವೈದ್ಯ ಪದ್ಧತಿಯ ದೇವರು, ಫಿಸಿಷಿಯನ್ ಗಳ ದೇವರು ಹೀಗೆ ಹತ್ತು ಹಲವು ಹೆಸರುಗಳಿಂದ ಧನ್ವಂತರಿ ದೇವರು ಕರೆಯಲ್ಪಡುತ್ತಾರೆ ಮತ್ತು ಪೂಜಿಸುತ್ತಾರೆ.


ಧನ್ವಂತರಿ ದಿವೇದಾಸ ಜನಿಸಿದ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ದೇಶದೆಲ್ಲೆಡೆ ರಾಷ್ಟ್ರೀಯ ಆಯುರ್ವೇದ ದಿನ ಎಂದು ಆಚರಿಸಿ ಧನ್ವಂತರಿ ದೇವರ ಆಶೀರ್ವಾದ ತಡೆದು ಸುಖ ಶಾಂತಿ ಆರೋಗ್ಯ, ನೆಮ್ಮದಿಗಾಗಿ ಪ್ರಾರ್ಥಿಸುತ್ತಾರೆ. ಉತ್ತರ ಭಾರತದಲ್ಲಿ ಧನ್ ತೇರಾಸ್ ಅಥವಾ ದಾಂತೇರಸ್ ಎಂದೂ ಆಚರಿಸಿ ಸಂಭ್ರಮಿಸುತ್ತಾರೆ ನಮ್ಮ ಪುರಾಣ ಗ್ರಂಥ ವಿಷ್ಣು  ಪುರಾಣದಲ್ಲಿ ದಲ್ಲಿ ಕೇಳಿ ಬರುವ ಕಾಶಿಯ ರಾಜ ದೀವೆದಾಸರ ಮೊಮ್ಮಗನಾದ ಧನ್ವಂತರಿಯನ್ನು ಪೂಜಿಸಿದಲ್ಲಿ ಸಕಲ ಆರೋಗ್ಯವನ್ನು ಕರುಣಿಸುತ್ತಾನೆ ಎಂಬ ಬಲವಾದ ಪ್ರತೀತಿ ಜನರಲ್ಲಿ ಬೇರೂರಿದೆ.

ಮೂರು ಸಾವಿರ ವರ್ಷಗಳ ಹಿಂದೆ ಕಾಶಿಯ ಗಂಗಾ ನದಿಯ ತಳದಲ್ಲಿ ಹೇರಳವಾಗಿದ್ದ "ಕಾಶ" ಸಸ್ಯದ ಮೊನಚು ತುದಿಗಳನ್ನು ಬಳಸಿ, ಗಂಗೆಯಲ್ಲಿ ತೇಲಿ ಬಿಟ್ಟ ಶವಗಳನ್ನು ಭೇದಿಸಿ, ಶವಚ್ಚೇದನ ಮಾಡಿ, ಇಡಿಯ ದೇಹದ ಬಿಡಿ ಬಿಡಿ ಭಾಗಗಳನ್ನು ಬಿಡದೆ ಗುರುತಿಸಿ, ಅಂತಹ ಅಂಗಾಂಗಗಳಿಗೆ ಹೆಸರು ನೀಡಿ, ಅವುಗಳ ಸಹಜ ಮತ್ತು ವಿಕೃತ ಸ್ಥಿತಿ ಗುರುತಿಸಿ, ವೈದ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದೆ ವೈದ್ಯ ಲೋಕದ ಅನಭಿಷಿಕ್ತ ದೊರೆ, ಅಲೌಕಿಕ  ದೇವ ಮಾನವ, ಕಾಶಿರಾಜ ದಿವೇದಾಸ ಶ್ರೀ ಧನ್ವಂತರಿ ದೇವರ ಜಯಂತಿಯನ್ನು  ಇಂದು ದೇಶದೆಲ್ಲೆಡೆ ಆಚರಿಸಿ ಸಂಭ್ರಮಿಸಲಾಗುತ್ತಿದೆ.


ರಾಮಾಯಣದ ಭಾಗವತ ಪುರಾಣ ಮತ್ತು ಬಾಲ ಕಾಂಡದಲ್ಲಿ,ಧನ್ವಂತರಿ ದೇವರು, ದೇವತೆಗಳು ಮತ್ತು ದಾನವರು ಸಮುದ್ರ ಮಥನ ಮಾಡುವಾಗ ಅಮೃತ ಕಲಶದೊಂದಿಗೆ  ಉದ್ಭವವಾದರು ಎಂಬ ವಿವರಣೆ ಇದೆ. ಹೀಗೆ ಅಮೃತದೊಂದಿಗೆ ಉದ್ಭವವಾದ ಧನ್ವಂತರಿ ದೇವರಿಂದ ಅಮೃತವನ್ನು ಅಸುರರು ಕಸಿದುಕೊಂಡಾಗ ವಿಷ್ಣುವು ಮೋಹಿನಿಯ ರೂಪದಲ್ಲಿ ಅವತರಿಸಿ ಆಮ್ರತವನ್ನು ಪಡೆದು ದೇವತೆಗಳಿಗೆ ನೀಡಿದ ಎಂಬ ಪ್ರತೀತಿ ಇದೆ. ಈ ಕಾರಣದಿಂದ ಧನ್ವಂತರಿಯನ್ನು ವಿಷ್ಣುವಿನ ಅವತಾರ ಎಂದು ಕರೆಯುತ್ತಾರೆ. ರಾಕ್ಷಸರೊಂದಿಗೆ ಹೋರಾಡುವ ಸಂಧರ್ಭದಲ್ಲಿ ಗುಣಪಡಿಸಲಾದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ದೇವತೆಗಳಿಗೆ ಚಿಕಿತ್ಸೆ ನೀಡಲು ಧನ್ವಂತರಿ ರೂಪದಾರಿಯಾಗಿ ವಿಷ್ಣು ಅವತರಿಸಿದ ಎಂದು ನಂಬಲಾಗಿದೆ. ಶಂಖ, ಚಕ್ರ, ಅಮೃತ ಕಲಶ ಮತ್ತು ಜಲೌಖ ದಾರಿಯಾದ ಧನ್ವಂತರಿ ದೇವರನ್ನು ದಿನನಿತ್ಯ ಪೂಜಿಸಿದಲ್ಲಿ ದಿನವಿಡೀ ಚೈತನ್ಯ ಪೂರ್ಣತೆ ಉಳಿಯುತ್ತದೆ ಮತ್ತು ಅಮೃತತ್ವವನ್ನು ಪಡೆಯಬಹುದು ಎಂದು ವಿಶ್ಲೇಶಿಸಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸಾರಿಕ ಬಳಕೆಯಿಂದ ಔಷಧಿ ತಯಾರಿಸಿದ ಗೌರವ ಧನ್ವಂತರಿ ದೇವರಿಗೆ ಸಲ್ಲುತ್ತದೆ.

- ಡಾ|| ಮುರಲೀ ಮೋಹನ್ ಚೂಂತಾರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top