ಕಾಸರಗೋಡು : ಉಪ್ಪಳ ಸಮೀಪದ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಪರಿಸರದಲ್ಲಿ ಭಾರತೀಯ ಸೇನೆ ಸೇರವ ಆಸಕ್ತ ಅಭ್ಯರ್ಥಿಗಳಿಗೆ ಉಚಿತ ವಸತಿ ,ಶಾರೀರಿಕ ತರಬೇತಿ ಶಿಬಿರ ಕಳೆದ ಒಂದು ತಿಂಗಳಿನಿಂದ ನಡೆದು ಸಂಪನ್ನಗೊಂಡಿತು. ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಭಾರತಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನೀಡಿದ ಆಶೀರ್ವಚನದಲ್ಲಿ ಶ್ರೀಗಳು, ಇಡೀ ಭಾರತ ನನ್ನದು ಎಂಬ ವಿಶಾಲ ಮನೋಭಾವದಿಂದ ದೇಶ ಸೇವೆ ಮಾಡಬೇಕು. ದೇಶದ ಸೇವೆ ಎಂದರೆ ಅದು ದೇವರ ಸೇವೆ. ಈ ಮೂಲಕ ಭಾರತ ಮಣ್ಣಿನ ಸಂಸ್ಕ್ರತಿ ಉಳಿಸಬೇಕು ಎಂದು ನುಡಿದರು .
ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎ.ಕೆ ಜಯಚಂದ್ರನ್ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಲಕ್ಷ್ಮಿ ಇವರುಗಳು ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಜೀವನದ ಗುರಿ ಸಾಧಿಸುವ ಬಗ್ಗೆ ಸದಾಶಯದ ನುಡಿಗಳನ್ನು ನುಡಿದರು. ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡಿನ ದ್ರೋಣಾಚಾರ್ಯ ಸೈನಿಕ ತರಬೇತಿ ಅಕಾಡೆಮಿಯ ಅಧ್ಯಕ್ಷ ಲೆಫ್ಟಿನೆಂಟ್ ವಿಜಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ 46 ವಿದ್ಯಾರ್ಥಿಗಳು ತರಬೇತಿ ಪಡೆದರು. ಅಶೋಕ್ ಬಾಡೂರು ಸ್ವಾಗತಿಸಿ, ಸರ್ವೇಶ್ ಕೊರಂಬಳ ವಂದಿಸಿದರು. ವಂದೇಮಾತರಂನೊಡನೆ ಆರಂಭಗೊಂಡ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.