ಅ.8-9: ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕದಿಂದ 2 ದಿನಗಳ 'ಕಲೋಪಾಸನೆ'

Upayuktha
0


ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್‌ನ ಕೇರಳ ಗಡಿನಾಡ ಘಟಕವು ಅಕ್ಟೋಬರ್‌ 8 ಮತ್ತು 9ರಂದು ಕಾಸರಗೋಡಿನಲ್ಲಿ ಎರಡು ದಿನಗಳ ವೈವಿಧ್ಯಮಯ 'ಕಲೋಪಾಸನೆ' ಕಾರ್ಯಕ್ರಮ ಹಮ್ಮಿಕೊಂಡಿದೆ.


ಈ ವಿಶಿಷ್ಟ ಹಾಗೂ ವಿಶೇಷವಾದ ಸಮಾರಂಭದಲ್ಲಿ ಸಾಹಿತ್ಯ ಹಾಗೂ ಕಲೋಪಾಸಕರೆಲ್ಲರೂ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಡಿಂಡಿಮವನ್ನು ಯಶಸ್ವಿಯಾಗಿ ಬಾರಿಸುವಲ್ಲಿ ಸಂಪೂರ್ಣವಾಗಿ ಸಹಕರಿಸಬೇಕೆಂದು ಘಟಕದ ಅಧ್ಯಕ್ಷ ಶ್ರೀ ಟಿ.ಶಂಕರನಾರಾಯಣ ಭಟ್ ಹಾಗೂ ಗೌರವ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


ಕಲೋಪಾಸನೆ ಕಾರ್ಯಕ್ರಮವು ಕಾಸರಗೋಡು ನಗರದ ಹೊಸ ಬಸ್ಸುನಿಲ್ದಾಣದ ಸಮೀಪದ ಬದಿಬಾಗಿಲು ಎಂಬಲ್ಲಿರುವ "ಹವ್ಯಕ ಸಭಾ ಭವನ"ದಲ್ಲಿ ನಡೆಯಲಿದೆ. 


ದಿನಾಂಕ 8 ಶನಿವಾರ ಅಪರಾಹ್ಣ ಗಂಟೆ 2-00 ರಿಂದ ಆರಂಭವಾಗುವ ಸಮಾರಂಭವನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|ಸೋಮಶೇಖರ್ ಅವರು ಉದ್ಘಾಟಿಸಲಿದ್ದಾರೆ.  ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ನ್ಯಾಯವಾದಿ ಶ್ರೀ ದಾಮೋದರ ಶೆಟ್ಟಿ, ಕಾಸರಗೋಡಿನ ಹಿರಿಯ ನ್ಯಾಯವಾದಿ ಶ್ರೀ ಐ.ವಿ.ಭಟ್ ಹಾಗೂ ಕಾಸರಗೋಡು ಕರ್ನಾಟಕ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಕೆ.ಎಂ.ಬಳ್ಳಕ್ಕುರಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆ ಮಾಡಲಿರುವರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿರುವರು. 


ಅನಂತರ 3-30 ರಿಂದ 'ಗಮಕ ಕಲಾಧರೆ' ಕು| ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ "ಶ್ರೀರಾಮ ನಿರ್ಯಾಣ" ಎಂಬ ಹರಿಕಥಾ ಕಾಲಕ್ಷೇಪವು ನಡೆಯಲಿರುವುದು. 4-30 ರಿಂದ ಲಕ್ಷ್ಮೀಶನ ಜೈಮಿನಿ ಭಾರತದಿಂದಾಯ್ದ "ಸೀತಾ ಪರಿತ್ಯಾಗ ಮತ್ತು ಕುಶ ಲವರ ಜನನ" ಎಂಬ ಕಥಾಭಾಗದ ವಾಚನ-ವ್ಯಾಖ್ಯಾನವನ್ನು ಶ್ರೀ ಕೊಚ್ಚಿ ಗೋಪಾಲಕೃಷ್ಣ ಭಟ್ ಹಾಗೂ ಪೆಲ್ತಾಜೆ ಶ್ರೀ ಶ್ರೀಹರಿ ಭಟ್ ನೆರವೇರಿಸಲಿರುವರು. 


ದಿನಾಂಕ 9 ಆದಿತ್ಯವಾರ ಪೂರ್ವಾಹ್ಣ 9-00 ಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ|ಜಿ.ಎಲ್. ಹೆಗಡೆಯವರು ದೀಪಜ್ವಾಲನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಎಕಾಡೆಮಿಯ ಸದಸ್ಯ ಶ್ರೀ ಯೋಗೀಶ ರಾವ್, ಚಿಗುರುಪಾದೆ ಭಾಗವಹಿಸುವರು. ಡಾ|ವೆಂಕಟಗಿರಿ, ಶ್ರೀ ಕಾಸರಗೋಡು ಚಿನ್ನಾ, ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭಾಶಂಸನೆ ಮಾಡುವರು. 


10-00 ರಿಂದ ಶ್ರೀಮತಿಯರಾದ ಪುಷ್ಪಲತ ವಿ.ಕೆ.ಭಟ್, ಪ್ರೇಮಲತಾ ಮನ್ನಿಪ್ಪಾಡಿ, ಜಯಲಕ್ಷ್ಮಿ ಜಿ.ಭಟ್ ಅವರು ಸಾಂಪ್ರದಾಯಿಕ ಹಾಡುಗಳನ್ನು ಹಾಡಲಿರುವರು.  


10-45 ರಿಂದ ಕುಮಾರವ್ಯಾಸ ಭಾರತದಿಂದಾಯ್ದ "ಪಾಶುಪತಾಸ್ತ್ರ" ಎಂಬ ಕಾವ್ಯಭಾಗದ ವಾಚನ-ವ್ಯಾಖ್ಯಾನ ಗಳನ್ನು 'ಕರ್ನಾಟಕ ಕಲಾಶ್ರೀ' ಗಮಕಿ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಹಾಗೂ ಡಾ|ಜಿ.ಎಲ್.ಹೆಗಡೆ ಕುಮಟಾ ಅವರು ನಡೆಸಿಕೊಡಲಿರುವರು.     


ಮಧ್ಯಾಹ್ನ 1-30 ರಿಂದ "ಕರ್ಣಾರ್ಜುನ" ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಪುತ್ತೂರು ರಮೇಶ ಭಟ್ ಭಾಗವಸುವರು. ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಅವರು ಚೆಂಡೆ ಮತ್ತು ಮದ್ದಳೆ ವಾದನದಲ್ಲಿ ಸಹಕರಿಸಲಿರುವರು. ಮುಮ್ಮೇಳದಲ್ಲಿ ಖ್ಯಾತ ಕಲಾವಿದರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ಉಜಿರೆ ಅಶೋಕ ಭಟ್, ಶ್ರೀ ವಾಸುದೇವ ರಂಗ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರು, ಡಾ|ಶ್ರೀಶಕುಮಾರ ಪಂಜಿತ್ತಡ್ಕ ಭಾಗವಹಿಸಲಿರುವರು. 


ಸಮಾರೋಪ ಸಮಾರಂಭದಲ್ಲಿ ಡಾ|ಯು.ಮಹೇಶ್ವರಿ ಅವರು ಸಮಾರೋಪ ಭಾಷಣ ಮಾಡಲಿರುವರು. ಶ್ರೀ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು.  


ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಜರಗುವ ಈ "ಕಲೋಪಾಸನಾ" ಸಮಾರಂಭದಲ್ಲಿ ಡಾ|ರಮಾನಂದ ಬನಾರಿ, ಶ್ರೀ ರವಿಶಂಕರ್ ಡಿ.ಯಸ್, ಶ್ರೀ ಗುರುರಾಜ್, ಶ್ರೀ ರಘುರಾಮ ಮುಳಿಯ, ಡಾ|ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀ ದಿವಾಣ ಗೋವಿಂದ ಭಟ್, ಶ್ರೀ ಎಸ್.ಎನ್.ಪಂಜಾಜೆ, ಶ್ರೀ ಪಿ.ಟಿ.ಭಟ್ ಅವರ ಗೌರವ ಉಪಸ್ಥಿತಿ ಇರುವುದು.   


*******

ಕರ್ನಾಟಕ ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡ ಘಟಕವು ಹದಿನೈದು ವರ್ಷಗಳ ಹಿಂದೆ ಎಡನೀರು ಮಠದ ಪರಮಪೂಜ್ಯ ಬ್ರಹ್ಮೆಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯಹಸ್ತಗಳಿಂದ ಉದ್ಘಾಟನೆ ಗೊಂಡು ಈಗಾಗಲೇ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ. 


ಶ್ರೀ ಸೀತಾರಾಮಚಂದ್ರರ ಅವಳಿ ಪುತ್ರರತ್ನರಾದ ಕುಶ-ಲವರು ಆದಿಗಮಕಿಗಳೆಂಬ ನಂಬಿಕೆಯಿದೆ. ಅವರು ಜನಿಸಿದುದು ಶ್ರಾವಣ ಮಾಸದಲ್ಲಿ. ಆ ಸವಿನೆನಪಿಗಾಗಿ ಪ್ರತಿವರ್ಷವೂ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ "ಗಮಕ ಶ್ರಾವಣ" ಎಂಬ ಹೆಸರಿನಲ್ಲಿ ಕಾವ್ಯವಾಚನ ಹಾಗೂ ವ್ಯಾಖ್ಯಾನಗಳ ಸರಣಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.


ನಮ್ಮ ಘಟಕದ ದಶಮಾನೋತ್ಸವ ಸಂದರ್ಭದಲ್ಲಿ ಗಮಕಕಲೆಗೆ ಸಂಬಂಧಿಸಿದ ಕಾವ್ಯವಾಚನ-ವ್ಯಾಖ್ಯಾನಗಳ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಶಿಬಿರ, ಯಕ್ಷಗಾನ ಹಾಗೂ ಗಮಕ ಗೋಷ್ಠಿ, ತಾಳಮದ್ದಳೆ, ಹಳಗನ್ನಡ-ನಡುಗನ್ನಡ ಛಂದಸ್ಸುಗಳ ಪರಿಚಯ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಕಲೆ ಹಾಗೂ ಸಾಹಿತ್ಯಾಭಿಮಾನಿಗಳು ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ತನ್ಮೂಲಕ ಕೇರಳ ಗಡಿನಾಡಿನಲ್ಲಿ ಪ್ರಾಚೀನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಜನಮಾನಸಕ್ಕೆ ತಲಪಿಸುವಲ್ಲಿ ನಮ್ಮ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top