ಸೆ. 10 ಶನಿವಾರ ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞದ ಶುಭಾರಂಭ
ಬೆಂಗಳೂರು: ನಗರದ ಜಯನಗರ 8ನೇ ಬಡಾವಣೆಯಲ್ಲಿರುವ ಶ್ರೀ ಜಯರಾಮ ಸೇವಾ ಮಂಡಳಿಯು ಪೇಜಾವರ ಮಠದ ಪೂಜ್ಯ ವಿಶ್ವೇಶ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಪ್ರಾರಂಭವಾದ ಸಂಸ್ಥೆ. 50 ವರ್ಷಗಳಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗಿರುವ ಈ ಸಂಸ್ಥೆ ಕಳೆದ ವರ್ಷ ತಾನೇ ಸುವರ್ಣ ಮಹೋತ್ಸವವನ್ನು ಆಚರಿಸಿದೆ. ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣದ ಶುಭ ಸಂದರ್ಭದಲ್ಲಿ ತೇರಾಕೋಟಿ ಶ್ರೀರಾಮ ನಾಮ ಲೇಖನ ಮಹಾಯಜ್ಞವನ್ನು ವರ್ಷಪೂರ್ತಿ ನಡೆಸಲು ಸಂಕಲ್ಪ ಮಾಡಲಾಗಿದೆ. ಕೆ ಆರ್ ನಗರದ ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾ ಸ್ವಾಮಿಗಳು ಈ ಲೇಖನ ಯಜ್ಞದ ಮಹಾ ಸಂರಕ್ಷಕರಾಗಿರುತ್ತಾರೆ.
ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞದ ಶುಭಾರಂಭದ ಪೂರ್ವಭಾವಿಯಾಗಿ ಶ್ರೀ ಜಯರಾಮ ಸೇವಾ ಮಂಡಳಿಯ ಎರಡನೇ ಮಹಡಿಯಲ್ಲಿರುವ ಪ್ರೊ. ಜಿ ವೆಂಕಟಸುಬ್ಬಯ್ಯ ಜನ್ಮಶತಾಬ್ಧಿ ಕಲಾಭವನದಲ್ಲಿ ಇದೇ ಸೆಪ್ಟಂಬರ್ 05 ರಿಂದ 09ರವರಗೆ ಪ್ರತಿ ದಿನ ಸಂಜೆ 5.30 ರಿಂದ 6.30ರವರಗೆ ಆಹ್ವಾನಿತ ತಂಡಗಳಿಂದ ಭಜನೆ ಮತ್ತು ಸತ್ಸಂಗ ಹಾಗೂ 6.30 ರಿಂದ ರಾತ್ರಿ 8.00 ವರಗೆ ಶತಾವಧಾನಿ ಡಾ|| ಆರ್ ಗಣೇಶ್ ಅವರಿಂದ ಕ್ಷೇಮೇಂದ್ರ ವಿರಚಿತ ಶ್ರೀ ರಾಮಾಯಣ ಕಥಾಮಂಜರಿ ಉಪನ್ಯಾಸ ಮಾಲೆಯನ್ನು ಏರ್ಪಡಿಸಿದೆ. ಈ ಉಪನ್ಯಾಸ ಮಾಲೆಯನ್ನು ಶ್ರೀ ನಾಗಲಕ್ಷ್ಮಿ ಫೌಂಡೇಶನ್ ರವರು ಪ್ರಾಯೋಜಿಸಿದ್ದಾರೆ. ಸೆಪ್ಟಂಬರ್ 05 ಸೋಮವಾರ ಸಂಜೆ 6.30ಕ್ಕೆ ಈ ಉಪನ್ಯಾಸ ಮಾಲೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾನ್ಸರ್ ರೋಗತಜ್ಞ ಪದ್ಮಶ್ರೀ ಡಾ|| ಕೆ. ಎಸ್ ಗೋಪಿನಾಥ್ ನೆರವೇರಿಸಲಿದ್ದಾರೆ.
ಸೆಪ್ಟಂಬರ್ 10 ಶನಿವಾರ ಬೆಳಗ್ಗೆ 08.00 ರಿಂದ 10.00 ಗಂಟೆಯ ವರಗೆ ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞದ ಶುಭಾರಂಭದ ಪ್ರಯುಕ್ತ ನಾದಸ್ವರ, ಭಜನೆ ಹಾಗೂ ವೇದಘೋಷದೊಂದಿಗೆ ಜಯನಗರದ 8ನೇ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶ್ರೀ ರಾಮ ದೇವರ ಶೋಭಾ ಯಾತ್ರೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯ ಶ್ರೀ ಸ್ವಾಮಿ ಜಪಾನಂದಜೀ ಅವರ ದಿವ್ಯ ಸಾನಿಧ್ಯದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಕೆ ನಾರಾಯಣ್ ರವರಿಂದ ಲೇಖನ ಮಹಾಯಜ್ಞ ಕಾರ್ಯಕ್ರಮದ ಉದ್ಘಾಟನೆ. ಬಹುಭಾಷಾ ಪಂಡಿತ ಲೇಖಕ, ಚಿಂತಕರಾದ ಶತಾವಧಾನಿ ಡಾ|| ಆರ್ ಗಣೇಶ್ ಅವರಿಗೆ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಪಾಂಚಜನ್ಯ ಪುರಸ್ಕಾರ ಪ್ರದಾನ. ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ.ಎನ್ ಕುಮಾರ್ ರವರು ಪೋಷಕ ಸಮಿತಿಯನ್ನು ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಶ್ರೀ ಜಯರಾಮ ಸೇವಾ ಮಂಡಳಿಯ ಅಧ್ಯಕ್ಷರಾದ ಶ್ರೀ ಆರ್ ಎನ್ ಸ್ವಾಮಿ ಹಾಗೂ ಕಾರ್ಯದರ್ಶಿ ಶ್ರೀ ಎಸ್. ಕೆ ಗೋಪಾಲಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವರಗಳಿಗೆ 9886242168