ಯಕ್ಷರಕ್ಷಾ ಪ್ರಶಸ್ತಿ ಪ್ರದಾನ- 'ಯಕ್ಷ ಪುರುಷೋತ್ತಮ' ಗ್ರಂಥ ಬಿಡುಗಡೆ- ಅಜ್ಜ ಕೊರಗಜ್ಜ ಯಕ್ಷಗಾನ
ಮುಂಬಯಿ: ಯಕ್ಷಗಾನ ನೃತ್ಯ ತರಬೇತಿ, ಪ್ರದರ್ಶನ- ಬಯಲಾಟ, ಸರಣಿ ತಾಳಮದ್ದಳೆ, ಕಲಾವಿದರಿಗೆ ಪ್ರಶಸ್ತಿ- ಸಮ್ಮಾನ, ಗ್ರಂಥ ಪ್ರಕಟಣೆ ಇತ್ಯಾದಿ ಮಹತ್ವಪೂರ್ಣ ಕಾರ್ಯಕ್ರಮಗಳ ಮೂಲಕ ಕಳೆದ ಎರಡು ದಶಕಗಳಿಂದ ಮುಂಬೈ ಮಹಾನಗರದಲ್ಲಿ ಒಂದು ಭದ್ರವಾದ ಸಾಂಸ್ಕೃತಿಕ ಪರಿವೇಶವನ್ನು ನಿರ್ಮಿಸಿಕೊಂಡಿರುವ ಅಜೆಕಾರು ಕಲಾಭಿಮಾನಿ ಬಳಗವು ಇದೀಗ 21ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಅವರ ಶಿಷ್ಯರು ಮತ್ತು ಊರಿನ ಶ್ರೇಷ್ಠ ಕಲಾವಿದರ ಮೂಲಕ ನಗರದ ವಿವಿಧೆಡೆ ಜರಗಿದ ನೂರಾರು ಕಾರ್ಯಕ್ರಮಗಳು ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿವೆ.
ಏಕವಿಂಶತಿ ಕಲಾ ಸಂಭ್ರಮ:
ಅಜೆಕಾರು ಕಲಾಭಿಮಾನಿ ಬಳಗದ 21ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಸಪ್ಟೆಂಬರ್ 11,2022 ರಂದು ರವಿವಾರ ಮುಂಬೈ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾ ಗ್ರಹದಲ್ಲಿ 'ಏಕ ವಿಂಶತಿ ಕಲಾ ಸಂಭ್ರಮ' ಎಂಬ ಅದ್ದೂರಿ ಸಮಾರಂಭವನ್ನು ಏರ್ಪಡಿಸಲಾಗಿದೆ. ಅಪರಾಹ್ನ ಗಂ. 2 ರಿಂದ ಆರಂಭವಾಗುವ ಕಾರ್ಯಕ್ರಮವನ್ನು ವಸಾಯಿ ತಾಲೂಕು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಶೆಟ್ಟಿ ಉದ್ಘಾಟಿಸುವರು. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು ಪ್ರಸಿದ್ಧ ಜ್ಯೋತಿಷ್ಕರಾದ ಅಶೋಕ್ ಭಟ್ ಕುರ್ಲಾ ಆಶೀರ್ವಚನ ನೀಡುವರು.
ಮುಲುಂದ್ ಬಂಟ್ಸ್ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಪ್ರಿಯೇಶ್ ಇಂಡಸ್ಟ್ರೀಸ್ ಭಾಂಡೂಪ್ ಸಿಎಂಡಿ ಶಂಕರ್ ಶೆಟ್ಟಿ ಮುಲುಂಡ್, ವಸಾಯಿ ಮಣಿಕಂಠ ಸೇವಾ ಸಮಿತಿ ಗೌರವಾಧ್ಯಕ್ಷ ಶಂಕರ್ ಆಳ್ವ ಕರ್ನೂರು, ನಾಯ್ ಗಾಂವ್- ವೀರಾರ್ ಬಂಟ್ಸ್ ಕಾರ್ಯಾಧ್ಯಕ್ಷ ಅಶೋಕ್ ಕೆ. ಶೆಟ್ಟಿ, ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ಆರ್.ಎಂ. ಭಂಡಾರಿ, ವಸಾಯಿ ತಾಲೂಕು ಜೀವದಾನಿ ಯಕ್ಷಕಲಾ ವೇದಿಕೆ ವಸಾಯಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಕುಡ್ಲಾಡಿ, ಮೀರಾ ರೋಡ್- ವಿರಾರ್ ರಜಕ ಸಂಘದ ಮಾಜಿ ಅಧ್ಯಕ್ಷ ದೇವೇಂದ್ರ ಬುನ್ನನ್, ಹಿರಿಯ ಹೋಟೆಲ್ ಉದ್ಯಮಿ ರಮೇಶ್ ಶೆಟ್ಟಿ ಕಾಪು ಉದ್ಘಾಟನಾ ವೇದಿಕೆಯಲ್ಲಿ ಅತಿಥಿಗಳಾಗಿರುವರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸುವರು.
ಯಕ್ಷರಕ್ಷಾ ಪ್ರಶಸ್ತಿ ಮತ್ತು ಕಲಾ ಗೌರವ ಪ್ರದಾನ:
ಸಾಯಂಕಾಲ ಜರಗುವ ಸಮಾರೋಪ ಸಮಾರಂಭವನ್ನು ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸುವರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸುವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಲಾ ಗೌರವ ಯಕ್ಷರಕ್ಷಾ ಪ್ರಶಸ್ತಿಯನ್ನು ಮುಂಬೈ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ.ಆರ್.ಕೆ.ಶೆಟ್ಟಿ ಮತ್ತು ಬಜಪೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಲಾಪೋಷಕ ಬಾಬು ಶೆಟ್ಟಿ ಪೆರಾರ ಅವರಿಗೆ ಪ್ರದಾನ ಮಾಡಲಾಗುವುದು.
ಅಜೆಕಾರು 'ಏಕವಿಂಶತಿ ಯಕ್ಷರಕ್ಷಾ ಪ್ರಶಸ್ತಿ- 2022' ಗೌರವಕ್ಕೆ ಆಯ್ಕೆಯಾಗಿರುವ ಯುವ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಮತ್ತು ಮುಂಬೈಯ ಖ್ಯಾತ ಯಕ್ಷಗಾನ ಹಾಸ್ಯಗಾರ ರಾಜ ತುಂಬೆ ಅವರಿಗೆ ನೀಡಿ ಸನ್ಮಾನಿಸಲಾಗುವುದು. ಅಲ್ಲದೆ ಮಾತೆ ಸಂಪ ಶೆಟ್ಟಿ ಅವರ ಸ್ಮರಣಾರ್ಥ ನೀಡಲಾಗುವ 'ಮಾತೃ ಶ್ರೀ ಯಕ್ಷ ರಕ್ಷಾ ಪ್ರಶಸ್ತಿ' ಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಪ್ರದಾನ ಮಾಡಲಾಗುವುದು.
ಯಕ್ಷಗಾನ ರಂಗದ ವಿವಿಧ ವಿಭಾಗಗಳ ಸಾಧಕರಾದ ಕಲಾವಿದ ವಿಠಲ ಪ್ರಭು, ಚೆಂಡೆ ವಾದಕ ಹರಿಯಪ್ಪ ಆಚಾರ್ಯ, ಹಾಸ್ಯಗಾರರಾದ ದಿನೇಶ್ ಕೋಡಪದವು, ಮೋಹನ್ ದೇವಾಡಿಗ ಮುಚ್ಚೂರು, ವೇಷಧಾರಿ ಮನೋಜ್ ಕುಮಾರ್ ಹೆಜಮಾಡಿ ಮತ್ತು ಮದ್ದಲೆ ವಾದಕ ಹರೀಶ್ ಸಾಲಿಯಾನ್ ಅವರಿಗೆ ವಿತರಿಸಲಾಗುವುದು.
'ಯಕ್ಷ ಪುರುಷೋತ್ತಮ' ಸ್ಮೃತಿ ಸಂಪುಟ ಲೋಕಾರ್ಪಣೆ:
ಮುಂಬೈಯಲ್ಲಿ ಹಲವು ಮಂದಿ ಶಿಷ್ಯರನ್ನು ರೂಪಿಸಿ ಯಕ್ಷಗಾನದ ಸರ್ವಾಂಗಗಳಲ್ಲಿ ತಜ್ಞರಾಗಿ ಮಾರ್ಗದರ್ಶಕರಾಗಿದ್ದು ವರ್ಷದ ಹಿಂದೆ ಅಗಲಿ ಹೋದ ಯಕ್ಷಗಾನ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸ್ಮರಣಾರ್ಥ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪ್ರಕಟಿಸಿರುವ 500 ಪುಟಗಳ 'ಯಕ್ಷ ಪುರುಷೋತ್ತಮ' ಸ್ಮೃತಿ ಸಂಪುಟವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಹೇರಂಬ ಇಂಡಸ್ಟ್ರೀಸ್ ಸಿಎಂ ಡಿ ಸದಾಶಿವ ಶೆಟ್ಟಿ ಕನ್ಯಾನ ಗ್ರಂಥ ಲೋಕಾರ್ಪಣೆ ಮಾಡುವರು. ಗ್ರಂಥದ ಸಂಪಾದಕ ಯಕ್ಷಗಾನ ಅರ್ಥಧಾರಿ ಮತ್ತು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕೃತಿಯ ಬಗ್ಗೆ ಮಾತನಾಡುವರು. ಬಳಿಕ ಗೌರಾವರ್ಪಣೆ ಜರಗಲಿದೆ.
ಮುಂಬೈ ಬಿಲ್ಲವರ ಎಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ. ಅಮೀನ್ , ತುಂಗ ಹಾಸ್ಪಿಟಲ್ ಚೇರ್ಮನ್ ರಾಜೇಶ್ ಶೆಟ್ಟಿ, ಮಾತೃಭೂಮಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿ ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಮುಂಬೈ ಬಂಟರ ಸಂಘ ಮತ್ತು ಬಂಟರ ವಾಣಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ಜೆ.ಶೆಟ್ಟಿ ಅಜೆಕಾರು, ಬರೋಡ ತುಳುಕೂಟ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಬಾರ್ಕೂರು ಕಚ್ಚೂರು ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ, ಬಾಂಬೆ ಎಸೋಸಿಯೇಷನ್ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಮುಂಬೈ ಬಂಟರ ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ, ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಬಂಟರ ವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸುವರು.
ಏಕವಿಂಶತಿ ಕಲಾ ಸಂಭ್ರಮದ ಅಂಗವಾಗಿ ಅಂದು ಅಪರಾಹ್ನ ಗಂ. 2 ರಿಂದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ನುರಿತ ಕಲಾವಿದರಿಂದ ತುಳುನಾಡಿನ ಕಾರಣೀಕ ದೈವದ ಪುಣ್ಯ ಕಥಾ ಭಾಗವನ್ನು ಹೊಂದಿರುವ 'ಅಜ್ಜ ಅಜ್ಜ ಕೊರಗಜ್ಜ' ಎಂಬ ಅಬ್ಬರದ ತುಳು ಯಕ್ಷಗಾನ ಪ್ರದರ್ಶನ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಸಂಪೂರ್ಣ ಸಹಕಾರ ನೀಡಿ ಯಕ್ಷಕಲೆಯನ್ನು ಬೆಂಬಲಿಸಬೇಕೆಂದು ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ