ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ 24 ಸರಣಿಯ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಜರಗಿತು. ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ, ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಅವರನ್ನು ಸಂಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ ಜಿ.ಸತೀಶ್ ರೈ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಕ್ಷಗಾನ ಕಲೆಯ ಪ್ರಾಚೀನತೆಯನ್ನು ಸ್ಮರಿಸಿದರು. ಹಾಗೂ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಕಲೆಯನ್ನು ಬೆಳೆ ಸುವಂತಹ ಕೆಲಸದ ಜೊತೆ ಕಲಾವಿದರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. 24 ವಾರಗಳ ಕಾರ್ಯಕ್ರಮದಲ್ಲಿ 24 ಅರ್ಹ ಕಲಾವಿದರನ್ನು ಗುರುತಿಸಿ ಅಂತಹ ಕಲಾವಿದರಿಗೆ ಸನ್ಮಾನವನ್ನು ಮಾಡಿರುವುದು ನಿಜಕ್ಕೂ ಸ್ತುತ್ಯರ್ಹವಾದದ್ದು. ಎಲೆಯ ಮರೆಯ ಕಾಯಿಯಂತೆ ಇದ್ದಂತಹ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಎಂದರು.
ವಿಶ್ವನಾಥ ಶ್ರೀಯಾನ್ ಸಂಸ್ಮರಣೆ:
ಕೀರ್ತಿಶೇಷ ವಿಶ್ವನಾಥ ಶ್ರೀಯಾನ್ ಸಂಸ್ಮರಣೆಯನ್ನು ಮಾಡಿದ ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅವರು ಮಂಗಳೂರು ಪರಿಸರದಲ್ಲಿ ಹವ್ಯಾಸಿ ವಲಯದಲ್ಲಿ ಮೂರು ದಶಕಗಳ ಹಿಂದೆ ಖಳ ಪಾತ್ರಗಳಲ್ಲಿ ಮಿಂಚುತ್ತಿದ್ದ ವಿಶ್ವನಾಥರ ಕೊಡುಗೆಯನ್ನು ನೆನಪಿಸಿದರು.
ಕಣಿಪುರ ಪತ್ರಿಕೆಯ ಮುಖಪುಟ ಲೇಖನ:
"ಕಣಿಪುರ" ಯಕ್ಷಗಾನ ಮಾಸ ಪತ್ರಿಕೆಯ ಸೆಪ್ಟೆಂಬರ ತಿಂಗಳ ಸಂಚಿಕೆಯನ್ನು ಸಂಘದ ಗೌರವಾಧ್ಯಕ್ಷ ಸಿ.ಎಸ್. ಭಂಢಾರಿ ಬಿಡುಗಡೆ ಗೊಳಿಸಿದರು. ಸಂಪಾದಕ ಚಂಬಲ್ತಿಮಾರ್ ಸಂಘದ ಚರಿತ್ರೆಯನ್ನು ದಾಖಲಿಸುವ ಔಚಿತ್ಯವನ್ಮು ನೆನಪಿಸಿದರು.
ಅಶೋಕ ಬೊಳೂರು ಅಭಿನಂದಿಸಿದರು. ಶಿವಪ್ರಸಾದ್ ಪ್ರಭು ಸಂಮಾನ ಪತ್ರವನ್ನು ವಾಚಿಸಿದರು. ಮೋಹನ್ ಬಂಗೇರ ಉಪಸ್ಥಿತರಿದ್ದರು. ಶೋಭಾ ಐತಾಳ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ "ಅಂಗದ ಸಂಧಾನ" ತಾಳಮದ್ದಳೆ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ