ಬೆಂಗಳೂರು: ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾವಿದ್ಯಾಲಯವು ಕಾಲೇಜು ವಾರ್ಷಿಕೋತ್ಸವ "ಸಂಭವ"ವನ್ನು 14 ಆಗಸ್ಟ್ 2022 ಭಾನುವಾರದಂದು ಬೆಳಿಗ್ಗೆ 11:00 ಗಂಟೆಗೆ ಬಿಎಂಎಸ್ ತಾಂತ್ರಿಕ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಎಸ್. ರಾಗಿಣಿ ನಾರಾಯಣ್, ಧರ್ಮದರ್ಶಿಗಳು ಅಧ್ಯಕ್ಷರು, ಬಿಎಂಎಸ್ ಶಿಕ್ಷಣ ದತ್ತಿ ಹಾಗೂ ಅಧ್ಯಕ್ಷರು, ಬಿಎಂಎಸ್ ಮಹಿಳಾ ಮಹಾವಿದ್ಯಾಲಯ ಸ್ವಾಯತ್ತ ಸಂಸ್ಥೆ ಮತ್ತು ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಜಾತ ಡಿ ರವರು ಮುಖ್ಯ ಅತಿಥಿಗಳಾದ ಮಿಸ್ಟರ್ ಕರ್ನಾಟಕ 2013 ಹಾಗೂ ಚಲನಚಿತ್ರನಟರಾದ ಶ್ರೀ ಸೂರಜ್ ಗೌಡ, ಚಲನಚಿತ್ರನಟಿ ಧನ್ಯ ರಾಮ್ಕುಮಾರ್, ಸರಿಗಮಪ ಖ್ಯಾತಿಯ ಗಾಯಕ ಶ್ರೀ ಕಂಬದ ರಂಗಯ್ಯ ರವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ದಿವ್ಯಾ ಮತ್ತು ತಂಡದವರ ಹಾಡಿನೊಂದಿಗೆ ಹಾಗೂ ಗಣ್ಯರೆಲ್ಲರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧನ್ಯ ರಾಮ್ಕುಮಾರ್ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಬಂದು ವಿದ್ಯಾರ್ಥಿಳೊಂದಿಗೆ ಮಾತನಾಡುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿ, ತಮ್ಮ ಕಾಲೇಜಿನ ಕೆಲವು ನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರು ತಮ್ಮ ಗುರಿ ಸಾಧಿಸಲು ಒಂದು ದಿಟ್ಟ ದಾರಿಯನ್ನು ನಿರ್ಧರಿಸಬೇಕೆಂದರು. ಗಂಡು ಮತ್ತು ಹೆಣ್ಣು ಮಕ್ಕಳು ಸಮಾನರು ಮತ್ತು ಸ್ವಂತಕ್ಕಾಗಿ ಹೋರಾಡಬೇಕು ಎಂಬ ಡಾ. ಪುನೀತ್ ರಾಜ್ಕುಮಾರ್ ಅವರ ಸಂದೇಶವನ್ನು ಪ್ರಸ್ತಾಪಿಸಿ, ಪಾಲಿಸುವಂತೆ ಕರೆ ನೀಡಿದರು.
ನಂತರ ಅವರು ತಮ್ಮ ಸಹೋದರ ಧೀರಜ್ ಕುಮಾರ್ ಅವರ ಚಿತ್ರ 'ಶಿವ 143' ಅನ್ನು ಪ್ರಚಾರ ಮಾಡಿದರು. ಶ್ರೀ ಸೂರಜ್ ಗೌಡ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಭಾರತವು ಮಹಿಳೆಯರ ಕೈಯಲ್ಲಿ ಸುರಕ್ಷಿತವಾಗಿದೆ ಮತ್ತು ಮುಂದಿನ ದಶಕಗಳಲ್ಲಿ ಮಹಿಳೆಯರು ಮಾತ್ರ ಜಗತ್ತನ್ನು ಆಳುತ್ತಾರೆ ಎಂದರು. ಶ್ರೀ ಕಂಬದ ರಂಗಯ್ಯ ರವರು, ಎಲ್ಲಾ ವಿದ್ಯಾರ್ಥಿನಿಯರಿಗೆ ತಮ್ಮ ಮೊಬೈಲ್ ಗಳ ಫ್ಲ್ಯಾಷ್ಲೈಟ್ ಅನ್ನು ಸ್ವಿಚ್ ಆನ್ ಮಾಡುವಂತೆ ನಿರ್ದೇಷಿಸಿ, ಡಾ. ರಾಜ್ಕುಮಾರ್ ಹಾಗೂ ಡಾ. ಪುನೀತ್ ರಾಜ್ಕುಮಾರ್ ಅವರ ಕೆಲವು ಹಿಟ್ ಹಾಡುಗಳನ್ನು ಹಾಡಿ, ಮನರಂಜಿಸಿದರು.
ವಾಣಿಜ್ಯ ವಿಭಾಗದ ರಚನಾ ಕೆ ಎಂ, ಕಾಲೇಜಿನ ಪರೀಕ್ಷಾ ರ್ಯಾಂಕ್ ವಿಜೇತರನ್ನು ಪರಿಚಯಿಸಿದರು ಮತ್ತು ಮುಖ್ಯ ಅತಿಥಿಗಳು ಪ್ರಮಾಣ ಪತ್ರ ನೀಡಿದರು. ನಂತರ, ವಿದ್ಯಾರ್ಥಿನಿಯರೇ ಹಾಡಿನ ಸಂಯೋಜನೆ, ಹಾಡುಗಾರಿಕೆ ಮತ್ತು ವೀಡಿಯೊಗ್ರಫಿ ಸ್ವತಃ ಮಾಡಿರುವ ‘ಸಂಭವ ಥೀಮ್ ಸಾಂಗ್’ ಅನ್ನು ಬಿಡುಗಡೆ ಮಾಡಲಾಯಿತು, ಇದು ಕಾಲೇಜಿನ ಮೆರುಗು ಹೆಚ್ಚಿಸಿತು. ಉಪ ಪ್ರಾಂಶುಪಾಲರು ಹಾಗೂ ಡೀನ್ ಆದ ಡಾ. ವಸುಂಧರಾ ಡಿ ಇ ಅವರು ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿನಿಯರಾದ ಆಲಿಯಾ ಅಮ್ರೀನ್ ಮತ್ತು ಹುಝೈಫಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಾಸ್ತ್ರೀಯ, ಜಾನಪದ, ಪಾಶ್ಚಿಮಾತ್ಯ ನೃತ್ಯಗಳು, ರವಿ ವರ್ಮರವರ ಚಿತ್ರಕಲೆ ಆಧಾರಿತ ಫ್ಯಾಷನ್ ಶೋಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಯಿತು ಮತ್ತು ಎನ್ಸಿಸಿ ವಿದ್ಯಾರ್ಥಿನಿಯರು ಭಾರತೀಯ ಸೇನೆಯ ಕುರಿತು ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಭೋಜನ ವಿರಾಮದ ನಂತರ ಡಿಜೆ ವಿಸ್ಮಯ್ ಅವರ ಡಿಜೆ ಕಾರ್ಯಕ್ರವನ್ನು ವಿದ್ಯಾರ್ಥಿನಿಯರು ಆನಂದಿಸಿದರು. ಈ ದಿನದಂದು ವಿವಿಧ ಮಳಿಗೆಗಳನ್ನು ಆಯೋಜಿಸಲಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ