ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ದೀರ್ಘವಾದ ಸಮಾಲೋಚನೆಯ ನಂತರವೇ ತನ್ನ ಯೋಜನೆಗಳನ್ನು ಸಮಾಜದ ಮುಂದಿರಿಸುತ್ತಾ ಬಂದಿದೆ. ಸಮಾಜದಲ್ಲಿರುವ ಸತ್ಯ ಸಂಗತಿಗಳನ್ನು ರಾಷ್ಟ್ರದ ಮುಂದಿರಿಸಬೇಕು ಎಂಬ ಉದ್ದೇಶದಿಂದ ವಿಶ್ವ ಸಂವಾದ ಕೇಂದ್ರದಡಿಯಲ್ಲಿ ಸಂವಾದ ಡಿಜಿಟಲ್ ಚಾನೆಲನ್ನು ಮುನ್ನಡೆಸುತ್ತಿದೆ. ಸಂವಾದ ಹೆಸರಿನಂತೆ ಧನಾತ್ಮಕ ಸಂಗತಿಗಳ ಕುರಿತಾದ ಚರ್ಚೆ ಎಲ್ಲರ ಸ್ವಭಾವವಾಗಬೇಕು ಎಂದು ಆರ್ ಎಸ್ ಎಸ್ ನ ಪ್ರಾಂತ ಪ್ರಚಾರ ವಿಭಾಗದ ಟೋಳಿ ಸದಸ್ಯ ಸುನಿಲ್ ಕುಲಕರ್ಣಿ ಹೇಳಿದರು.
ವಿವೇಕಾನಂದ ತಾಂತ್ರಿಕ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ಮಂಥನ ಪುತ್ತೂರು ವೈಚಾರಿಕ ವೇದಿಕೆಯ ವತಿಯಿಂದ ಆಯೋಜಿಸಲಾದ ಸಂವಾದ ಸಮಾಲೋಜನೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತಾಡಿದರು.
ಪ್ರಸ್ತುತ ರಾಜ್ಯವ್ಯಾಪಿ ಜನರ ಅನಿಸಿಕೆಗಳನ್ನು ಪಡೆಯುತ್ತಾ ಸಂವಾದ ಯಾತ್ರೆ ಸಾಗುತ್ತಿದೆ. ತೆರೆದ ಕಣ್ಣುಗಳಿಂದ ಸಂಗತಿಗಳನ್ನು ನೋಡಬೇಕಾದ ಮನಸ್ಥಿತಿಯ ಜಾಗೃತಿ ಮಾಡುತ್ತಿದೆ. ಸಾಮಾಜದ ಬದಲಾವಣೆಗೆ ತನ್ನದೊಂದು ಕೊಡುಗೆ ನೀಡುವ ಬಯಕೆ ಇರುವವರಿಗೆ ಧನಾತ್ಮಕ ಸುದ್ದಿಗಳನ್ನು ಹಂಚುವುದಕ್ಕೆ ಸಂವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಪ್ರಜ್ಞಾವಂತ ನಾಗರಿಕರ ಅನಿಸಿಕೆಗಳನ್ನು ಪಡೆದು ಸಮಾಜಕ್ಕೆ ಶಕ್ತಿ ತುಂಬಿ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಯತ್ನಿಸುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆಹಾರ ತಜ್ಞೆ ಡಾ.ಹೆಚ್.ಎಸ್.ಪ್ರೇಮಾ ಮಾತನಾಡಿ, ಸಂವಾದ ಕೇಳುಗನಿಗೆ ಮತ್ತು ಹೇಳುಗನಿಗೆ ದೃಢತೆಯನ್ನು ಹೆಚ್ಚಿಸಿದೆ. ಜಾಹೀರಾತು ಇಲ್ಲದೆ, ಸತ್ಯವನ್ನು ಹೇಳುವ ಒಂದು ಮಾಧ್ಯಮವಾಗಿ ಬೆಳೆದಿದೆ. ಸಂವಾದ ಒಂದು ವಿಷಯಕ್ಕೆ ಸೀಮಿತಗೊಳ್ಳದೆ ನಾನಾ ವಿಭಾಗಗಳಲ್ಲಿ ಸತ್ವಯುತ ವಿಚಾರವನ್ನು ಜನಮಾನಸದಲ್ಲಿರಿಸುತ್ತಿದೆ. ಅನೇಕ ಕಾರಣಗಳಿಗಾಗಿ ಸತ್ಯವನ್ನು ದ್ವೇಷಿಸುವ ವರ್ಗಕ್ಕೆ ತಕ್ಕದಾದ ರೀತಿಯಲ್ಲಿ ಉತ್ತರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂವಾದದ ಮೂಲಕ ಉಪಸ್ಥಿತರಿದ್ದ ಕೇಳುಗರಿಂದ ಅವರ ಅಪೇಕ್ಷೆ ಮತ್ತು ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಮಂಥನ ಪುತ್ತೂರು ಟೋಳಿ ಸದಸ್ಯರಾದ ಹರಿಣಿ ಪುತ್ತೂರಾಯ ಪ್ರಸ್ತಾವನೆಗೈದು ಸ್ವಾಗತಿಸಿದರು, ಅರುಣ್ ಕಿರಿಮಂಜೇಶ್ವರ ನಿರೂಪಿಸಿದರು. ಮಂಥನ ಪುತ್ತೂರು ತಂಡದ ಸದಸ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು.