ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಪ್ರಣೀತ ಸಂಸ್ಥೆಗಳ ವತಿಯಿಂದ 2022ರ ಧ್ವಜ ಸಂಹಿತೆ ತಿದ್ದುಪಡಿ ಕುರಿತು ಸಂವಾದದಲ್ಲಿ ಕ.ಗಾ.ಸ್ಮಾ.ನಿ. ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಸಂವಾದಕ್ಕೆ ಚಾಲನೆ ನೀಡಿ ಮಾತನಾಡುತ್ತ ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಸಂಹಿತೆ ತಿದ್ದುಪಡಿ ಮಾಡಿರುವುದರಿಂದ ಖಾದಿ ಉದ್ಯಮಕ್ಕೆ ಹಾಗೂ ರಾಷ್ಟ್ರಧ್ವಜ ಉತ್ಪಾದನಾ ಸಂಸ್ಥೆಗಳಿಗೆ ಹಾಗೂ ಕಾರ್ಯಕರ್ತರಿಗೆ ಅಪಾರ ನೋವು ಉಂಟಾಗಿದೆ. ಇದು ಮಹಾತ್ಮ ಗಾಂಧೀಜಿಯವರ 18 ರಚನಾತ್ಮಕ ಕಾರ್ಯಗಳಲ್ಲೊಂದಾದ ಖಾದಿ ಉತ್ಪಾದನೆ ಮತ್ತು ಬಳಕೆಗೆ ವಿರುದ್ಧವಾದ ಕ್ರಮವಾಗಿದೆ ಎಂದು ತಿಳಿಸಿ ಕಾಯ್ದೆಯ ತಿದ್ದುಪಡಿಗೆ ಆಗ್ರಹಿಸಿದರು.
ರಾಷ್ಟ್ರಧ್ವಜಕ್ಕೆ ತನ್ನದೇ ಆದ ಪಾವಿತ್ರö್ಯತೆ ಇದೆ. ಅದನ್ನು ಖಾದಿ ಬಟ್ಟೆಯಲ್ಲಿಯೇ ಈ ಹಿಂದೆ ತಯಾರಿಸಲಾಗುತ್ತಿತ್ತು. ಸ್ವಾವಲಂಬನೆ ಹಾಗೂ ಆತ್ಮಗೌರವದ ಪ್ರತೀಕವಾಗಿ ಖಾದಿ ವಸ್ತ್ರ ಉತ್ಪಾದನೆಯ ಬದಲಾಗಿ ಸುಸ್ಥಿರ ಬದುಕಿನ ಸಂಕೇತವಾದ ಗಾಂಧಿ ವಿಚಾರ-ತತ್ವಕ್ಕೆ ಅಪಚಾರವೆಂಬಂತೆ ಅನ್ಯ ವಸ್ತ್ರ ಗಳನ್ನು ಬಳಸಿ ಧ್ವಜ ತಯಾರಿಕೆ ಮಾಡುತ್ತಿರುವುದರಿಂದ ಸಾವಿರಾರು ಗ್ರಾಮೋದ್ಯೋಗಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ವಿಷಾದಿಸಿದರು.
ಸುಮಂಗಲಿ ಸೇವಾಶ್ರಮದ ಎಸ್.ಜಿ.ಸುಶೀಲಮ್ಮ ಮಾತನಾಡುತ್ತಾ ಖಾದಿ ಭಂಡಾರಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಗ್ರಾಮೋದ್ಯೋಗಿಗಳಿಗೆ ನೆರವಾಗಬೇಕೆಂದು ಅಭಿಪ್ರಾಯಪಟ್ಟರು. ಅಂತೆಯೇ ಖಾದಿ ವಸ್ತುಗಳ ಬಳಕೆ ಕುರಿತು ಜಾಗೃತಿ ಉಂಟುಮಾಡುವ ನಿಟ್ಟಿನಲ್ಲಿ ಮಾಧ್ಯಮ ಸಂವಾದಗಳನ್ನು ನಡೆಸಬೇಕೆಂದು ತಿಳಿಸಿದರು.
ಉಪಾಧ್ಯಕ್ಷ ಎನ್.ಆರ್.ವಿಶುಕುಮಾರ್ ಮಾತನಾಡುತ್ತ ಈ ಹಿಂದಿನ ಭಾರತೀಯ ರಾಜಕೀಯ ನಾಯಕರಲ್ಲಿ ಗಾಂಧೀಜಿ ಮೌಲ್ಯಗಳು ಅಂರ್ತಗತವಾಗಿತ್ತು. ಧ್ವಜ ಸಂಹಿತೆಯ ತಿದ್ದುಪಡಿ ಮಾಡುವ ಮೊದಲು ಅದರ ಮೂಲ ಆಶಯಗಳು ಬದಲಾಗದೇ, ಸಾರ್ವಜನಿಕ ಹಿತಾಸಕ್ತಿಯೊಡನೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಈ ಚರ್ಚೆಯನ್ನು ಗಾಂಧಿ ಪ್ರಣೀತ ಸಂಸ್ಥೆಗಳು ಶಾಂತಿಯುತ ಪ್ರತಿಭಟನೆಯ ಮೂಲಕ ಮುಂದಿನ ದಿನಗಳಲ್ಲಿ ಅಭಿಯಾನವಾಗಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಗ್ರಾಮ ಸೇವಾ ಸಂಘದ ಅಭಿಲಾಷ್, ಭಾರತ ಸೇವಾದಳದ ಚಂದ್ರಶೇಖರ್, ಮಹೇಶ್ ಗೌಡ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಸಂಗಮೇಶ್ವರಮಠ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಸತ್ಯಮಂಗಲ ಮಹಾದೇವ, ಲೀಲಾ ವಾಸುದೇವ್, ಅಮರ ಬಾಪು ಚಿಂತನ ಪತ್ರಿಕೆಯ ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಭಾಗವಹಿಸಿದರು.