ಮಂಗಳೂರು: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ‘ಆಜಾದೀ ಕಾ ಅಮೃತ ಮಹೋತ್ಸವ’ ಅಭಿಯಾನದ ಅಂಗವಾಗಿ ದಿನಾಂಕ 11-08 - 2022ನೇ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಮಂಗಳೂರು ಘಟಕದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಅಭಿಯಾನದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ವಹಿಸಿ ಮಾತನಾಡಿ, ಕೇಂದ್ರ ಕಛೇರಿಯ ಆದೇಶದಂತೆ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗವಹಿಸಬೇಕು, ರಾಷ್ಟ್ರ ಧ್ವಜವನ್ನು ಮನೆ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರಂದು ಹಾರಿಸಬೇಕು, ಅರಳಿಸಬೇಕು, ಗೌರವಿಸಬೇಕು, ರಾಷ್ಟ್ರ ಧ್ವಜ ಎನ್ನುವುದು ಸಾರ್ವಭೌಮತ್ವದ ಸಂಕೇತವಾಗಿರುತ್ತದೆ, ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಗೌರವ ಮೂಡಿಸಬೇಕು ಎಂದು ನುಡಿದರು.
ಪ್ರತಿ ಗೃಹರಕ್ಷಕರು ತಮ್ಮ ಮನೆಗಳಲ್ಲಿ ಮೂರು ದಿನ ರಾಷ್ಟ್ರ ಧ್ವಜ ಅರಳಿಸಿ, ದೇಶ ಪ್ರೇಮ ಮೆರೆಯಬೇಕು ಎಂದು ಗೃಹರಕ್ಷಕರಿಗೆ ಆದೇಶ ನೀಡಿದರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್, ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ಶೇರಾ ಹಾಗೂ 150 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.