ವಿವಿ ಕಾಲೇಜು: 76 ನೇ ಸ್ವಾತಂತ್ರ್ಯೋತ್ಸವದ ವೇಳೆ ಪತ್ರಕರ್ತ ಪಿ ಬಿ ಹರಿಪ್ರಸಾದ್ ರೈ ಅಭಿಮತ
ಮಂಗಳೂರು: ದೇಶವನ್ನು ಪ್ರೀತಿಸುವುದೇ ದೇಶಸೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಬಾಹ್ಯ ಶಕ್ತಿಗಳು ನಮ್ಮನ್ನು ಬೇರ್ಪಡಿಸಲು ಪ್ಯಯತ್ನಿಸಿದರೂ ದೇಶದ ಬಗ್ಗೆ ಪ್ರೀತಿ, ಸೌಹಾರ್ದತೆ ನಮ್ಮ ರಕ್ತದಲ್ಲಿಯೇ ಇರುವುದರಿಂದ ಯಾರೂ ನಮ್ಮನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ, ಎಂದು ವಿಜಯವಾಣಿ ದೈನಿಕದ ಹಿರಿಯ ವರದಿಗಾರ ಪಿ ಬಿ ಹರಿಪ್ರಸಾದ್ ರೈ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸೋಮವಾರ 76 ನೇ ಸ್ವಾತಂತ್ರ್ಯೋತ್ಸವದ ವೇಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಅದೆಷ್ಟೋ ಮಂದಿಯನ್ನು ನಾವು ಮರೆತಿದ್ದೇವೆ. ಮಂಗಳೂರಿನಲ್ಲೇ ಬ್ರಿಟಿಷರಿಂದ ಕ್ರೂರವಾಗಿ ಕೊಲ್ಲಲ್ಪಟ್ಟವರನ್ನು, ಕೊನೆಯವರೆಗೂ ಕೆಚ್ಚೆದೆಯಿಂದ ಹೋರಾಡಿದ ಕೆದಂಬಾಡಿ ರಾಮಯ್ಯ ಗೌಡರಂತವರ ಬಗ್ಗೆ ಪತ್ರಕರ್ತರೂ ಸೇರಿ ಯಾರೂ ಮಕ್ಕಳಿಗೆ ತಿಳಿಸುತ್ತಿಲ್ಲ. ಇದು ಅವರ ಬಲಿದಾನಕ್ಕೇ ಅನ್ಯಾಯ ಮಾಡಿದಂತೆ. “ಎಪ್ಪತ್ತೈದು ವರ್ಷದ ನಂತರವೂ ಸ್ವಾತಂತ್ಯ ಉಳಿಸಿಕೊಂಡಿದ್ದೇವೆ ಎಂದಾದರೆ ಅದಕ್ಕೆ ಗಡಿ ಕಾಯುತ್ತಿರುವ ಲಕ್ಷಾಂತರ ಯೋಧರು ಕಾರಣ. ಆದರೆ ಅವರ ತ್ಯಾಗ ಬಲಿದಾನವನ್ನು ನಾವು ನೆನಪಿಸಿಕೊಳ್ಳುತ್ತಿಲ್ಲ,” ಎಂದು ಅಭಿಪ್ರಾಯಪಟ್ಟರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ.ಅನಸೂಯ ರೈ, ಜಾತಿ ಮತಬೇಧವನ್ನು ಬದಿಗಿಟ್ಟು ಎಲ್ಲರೂ ಪ್ರಧಾನಮಂತ್ರಿಗಳ ಕರೆಯಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಪ್ರತಿ ಮನೆಯಲ್ಲೂ ಆಚರಿಸಿರುವುದು ಅಭಿನಂದನೀಯ, ಎಂದರು. ಎನ್ಸಿಸಿ (ಭೂದಳ) ಅಧಿಕಾರಿ ಡಾ. ಜಯರಾಜ್ ಎನ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಸಿಸಿ (ನೌಕಾದಳ) ಅಧಿಕಾರಿ ಡಾ. ಯತೀಶ್ ಕುಮಾರ್ ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ ಎ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಗಾಯತ್ರಿ ಎನ್, ಡಾ. ಸುರೇಶ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಭಾಗವಾಗಿ ʼಆಝಾದಿ ಕ ಅಮೃತ್ ಮಹೋತ್ಸವʼದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಯೋಗ ಪ್ರದರ್ಶನ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ