ಭಕ್ತಿಯಿಂದ, ಪ್ರೀತಿಯಿಂದ ಪೂಜಿಸಿದಾಗ ಶ್ರೀಕೃಷ್ಣ ಒಲಿಯುತ್ತಾನೆ: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಭಕ್ತಿಯಿಂದ, ಪ್ರೀತಿಯಿಂದ ಪೂಜಿಸಿದಾಗ ಶ್ರೀಕೃಷ್ಣ ಜಾತಿ ಭೇದವಿಲ್ಲದೆ ಒಲಿಯುತ್ತಾನೆ. ಆಗ ಮಾನವ ಜೀವನ ಪಾವನವಾಗುತ್ತದೆ. ಸಾಮೂಹಿಕ ಭಜನೆಯಲ್ಲಿ ಮಹಾನ್ ಶಕ್ತಿಯಿದೆ. ಸಮಾಜವಾದ ಹಾಗೂ ಹಂಚಿ ತಿನ್ನುವ ಸಂದೇಶವನ್ನು ಮೊದಲಿಗೆ ತೋರಿಕೊಟ್ಟವನೇ ಭಗವಾನ್ ಶ್ರೀಕೃಷ್ಣ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುವಾರ ಆಚರಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ನರಜನ್ಮವೊಂದು ಕನಸು. ಇಂತಹ ಸಂಬಂಧವೆಲ್ಲ ಸುಮ್ಮನೆ. ಭಾರತೀಯರ ಮೂಲ ಉದ್ದೇಶ ಮೋಕ್ಷ ಸಾಧನೆ. ಮೀರಾ ಬಾಯಿಯಂತೆ, ಶಬರಿಯಂತೆ ಭಕ್ತಿಯಿಂದ ಪ್ರೀತಿಯಿಂದ ಭಗವಂತನ ಕೃಪೆಗೆ ಪಾತ್ರರಾಗೋಣ. ಕರ್ತವ್ಯ ನಿರ್ವಹಿಸಿ ಜವಾಬ್ದಾರಿ ಕೃಷ್ಣನ ಮೇಲೆ ಹಾಕಿದಾಗ ಗುರಿ ಮುಟ್ಟುವುದರಲ್ಲಿ ಸಂದೇಹವಿಲ್ಲ. ಎಲ್ಲಾ ಸಮಸ್ಯೆಗಳಿಗೂ ಶ್ರೀಕೃಷ್ಣನೇ ಪರಿಹಾರ ಕೊಡುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಂತಹ ಸ್ಪರ್ಧೆಗಳಾದ ಚಿತ್ರಕಲಾ ಸ್ಪರ್ಧೆ, ಭಗವದ್ಗೀತಾ ಕಂಠ ಪಾಠ ಹಾಗೂ ಭಜನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸ್ಮರಣಿಕೆಗಳನ್ನು ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ನಾಯಕ ಅರ್ಜುನ್ ಕೆ ಚಿದಂಬರ್ ಶ್ರೀಕೃಷ್ಣನ ವಿಗ್ರಹಕ್ಕೆ ಆರತಿ ಬೆಳಗಿದರು.
ಕಾಲೇಜಿನ ಪ್ರಾಚಾರ್ಯೆ ಸುಚಿತ್ರಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾನ್ವಿ ಪ್ರಾರ್ಥಿಸಿದರು. ಉಪನ್ಯಾಸಕ ನಮೃತ್ ಜಿ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು. ನಂತರ ‘ಶ್ರೀಕೃಷ್ಣ ಸಂಧಾನ’ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು.