ನಮ್ಮ ಜವಾಬ್ದಾರಿ ನಿಭಾಯಿಸೋಣ: ಡಾ ಚೂಂತಾರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸೋಮವಾರ ನಡೆಯಿತು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯ ಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಮೃತ ಮಹೋತ್ಸವದ ಈ ದಿನದಂದು ಎಲ್ಲರೂ ಭಕ್ತಿಯಿಂದ, ಪ್ರೀತಿಯಿಂದ, ಗೌರವದಿಂದ ಜಾತಿ ಮತ ಭೇದವಿಲ್ಲದೆ ಸ್ವಾತಂತ್ರೋತ್ಸವ ಸಂಭ್ರಮವನ್ನು ಆಚರಿಸಬೇಕು. ನಮಗೆ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಸುಭಾಸ್ ಚಂದ್ರ ಬೋಸ್ ಮುಂತಾದ ಮಹನೀಯರ ತ್ಯಾಗ ಬಲಿದಾನದಿಂದ 75 ವರ್ಷಗಳ ಹಿಂದೆ ಸ್ವಾತಂತ್ರ್ಯ ದೊರಕಿದೆ. ನಮಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರ ಎಂದು ಯುವಜನರು ತಿಳಿದುಕೊಂಡು ತಪ್ಪು ದಾರಿ ಹಿಡಿಯಬಾರದ. 75ನೇ ಈ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯ ಜೊತೆಗೆ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರಿತು ನಿಭಾಯಿಸಿದಲ್ಲಿ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಸಮಾದೇಷ್ಟರು ನುಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೀಫ್ ಟ್ರಾಫಿಕ್ ವಾರ್ಡನ್ ಆದ ಸ್ಕ್ವಾಡ್ರನ್ ಲೀಡರ್ ಪ್ರೊ. ಸುರೇಶ್ ನಾಥ್ ಎಂ. ಎಲ್ ಇವರು ಮಾತನಾಡಿ 76ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರತಿ ಪ್ರಜೆಗೂ ಸಂಭ್ರಮದ ಹಬ್ಬ. ಪ್ರಧಾನ ಮಂತ್ರಿಯವರ ಹರ್ ಘರ್ ತಿರಂಗಾ ಅಭಿಯಾನ ಅಮೃತ ಮಹೋತ್ಸವಕ್ಕೆ ವಿಶೇಷ ಮೆರಗು ಕೊಟ್ಟಿದೆ. ಹಬ್ಬದ ವಾತಾವರಣ, ಇಡೀ ದೇಶದಲ್ಲಿ, ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದು, ಏರಿಸುವುದು, ಅರಳಿಸುವುದು, ಪ್ರದರ್ಶಿಸುವುದು ವೈಶಿಷ್ಟತೆ. ಈ ದಿನವನ್ನು ಐತಿಹಾಸಿಕ ದಿನವಾಗಿ ಮಾತ್ರ ಉಳಿಯಬಾರದು. ಇದನ್ನು ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಯೋಧರ ಬಲಿದಾನವನ್ನು ಜ್ಞಾಪಿಸುವ ದಿನವಾಗಬೇಕು. ಸ್ವಾತಂತ್ರ್ಯಯ ಯೋಧರ ಪ್ರಾಣ ತ್ಯಾಗ ಮಾಡಿದವರನ್ನು ನೆನೆಯುವ ದಿನ. ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಗೌರವಿಸುವ ದಿನ. ನಮ್ಮ ಮುಂದಿನ ಪೀಳಿಗೆಗೆ ನಾವು ಆದರ್ಶಪ್ರಾಯವಾಗಬೇಕಾದರೆ ನಾವೆಲ್ಲರೂ ಹೆಚ್ಚಿನ ಹೊಣೆಗಾರಿಕೆ, ಜವಾಬ್ದಾರಿ, ಕಾರ್ಯಕ್ಷಮತೆ, ಧನಾತ್ಮಕ ಚಿಂತೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಪ್ರತಿ ಮನೆ ಮನೆಗಳಲ್ಲಿ, ಮನಗಳಲ್ಲಿ ದೇಶ ಪ್ರೇಮ, ದೇಶ ಭಕ್ತಿ ಉಕ್ಕಿ ಹರಿಯಲಿ ಎಂದು ಅಭಿಪ್ರಾಯಪಟ್ಟರು. ಕುಮಾರಿ ವೈಷ್ಣವಿ ಇವರು ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಅವರು ವಂದನಾರ್ಪಣೆಗೈದರು. ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ ಎಂ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ಮಂಗಳೂರು ಘಟಕದ ಘಟಕಾಧಿಕಾರಿ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ ಶೇರಾ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್, ಹಾಗೂ ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ಲೀಲಾ ಕುಕ್ಯಾನ್, ರಾಜಶ್ರೀ ಮತ್ತು ಒಟ್ಟು 125 ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ