ಜನ ತಲೆಗೊಂದು ಮಾತನಾಡುತ್ತಾರೆ. ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದೆಂದು ಅರ್ಥವಾಗುವುದಿಲ್ಲ. ಎಲ್ಲ ವಿಚಾರದಲ್ಲೂ ಜನ ಹೆಚ್ಚಾಗಿ ಹುಳುಕನ್ನೇ ಹುಡುಕಲು ಪ್ರಯತ್ನಿಸುತ್ತಾರೆ. ದೊಡ್ಡ ದೊಡ್ಡ ವಿಚಾರಗಳನ್ನು ಮಾತ್ರವಲ್ಲ ಸಣ್ಣ ಸಣ್ಣ ವಿಚಾರದಲ್ಲೂ ಹುಳುಕನ್ನೇ ಕಾಣುತ್ತಾರೆ. ಉದಾಹರಣೆಯಾಗಿ ಕಪ್ಪು ಬಣ್ಣವನ್ನು ಆಯ್ದುಕೊಳ್ಳೋಣ.
ಎಲ್ಲಾ ಬಣ್ಣಗಳನ್ನು ಇಷ್ಟಪಡುವ ಜನರು ಆ ಬಣ್ಣಗಳ ಮೂಲ ಬಣ್ಣವಾದ ಕಪ್ಪನ್ನು ದೂರವಿಡುತ್ತಾರೆ.
ಕಪ್ಪಿನ ಕಾಗೆ ಶನಿಯಂತೆ, ಕಪ್ಪಿನ ಸೀರೆ ಕೆಡುಕಂತೆ, ಕಪ್ಪಿನ ಬೆಕ್ಕು ಅಪಶಕುನವಂತೆ, ಆದರೆ ದೃಷ್ಟಿ ತಾಗದಂತೆ ಕಟ್ಟುವ ಕಪ್ಪು ನೂಲು ರಕ್ಷಣೆಯಂತೆ, ಕಪ್ಪಿನ ಕರಿಮಣಿ ಮಂಗಳವಂತೆ, ಕಪ್ಪಿನ ಕಾಡಿಗೆ ಲಕ್ಷಣವಂತೆ... ವರ್ಣ ಒಂದೇ ಆದರೆ ನಂಬಿಕೆ ಹಲವು ಎಲ್ಲವನ್ನು ಯೋಚಿಸಿದಾಗ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವುದಿಲ್ಲ.
ಈ ವಿಚಾರದ ಕುರಿತು ಆಳವಾಗಿ ಯೋಚಿಸ್ತಾ ಹೋದರೆ ಮಾನವನ ನಂಬಿಕೆಗಿಂತ ದೃಢವಾದ ವಿಚಾರ ಬೇರೊಂದಿಲ್ಲವೆಂಬುವುದು ಅರಿವಾಗುತ್ತದೆ. ಕಪ್ಪು ತಪ್ಪು ಎಂದು ಭಾವಿಸಿದವರಿಗೆ ಅದು ಎಂದಿಗೂ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ. ಅದೇ ಕಪ್ಪನ್ನು ಒಪ್ಪಿದವರಿಗೆ ಎಂದಿಗೂ ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ. ಇದಕ್ಕೆ ಉದಾಹರಣೆಗಳನ್ನು ನಮ್ಮೊಳಗೆ ಕಾಣಬಹುದಾಗಿದೆ. ತನ್ನ ಮೈಬಣ್ಣವನ್ನೇ ತನ್ನ ಶಕ್ತಿಯನ್ನಾಗಿಸಿಕೊಂಡ ಅಮೇರಿಕದ ಟಿವಿ ಕಾರ್ಯಕ್ರಮ ನಿರೂಪಕಿ ಓಫ್ರ ವಿನ್ಫ್ರೆ ಕಪ್ಪು ಸುಂದರಿ ಪ್ರಶಸ್ತಿ ಪಡೆದಿರುವುದು ಉದಾಹರಣೆ. ಆದರೆ ಕಪ್ಪಾಗಿ ಹುಟ್ಟಿದ್ದೇವೆಂದು ತಮ್ಮ ಬಣ್ಣವೇ ತಮಗೆ ಕಳಂಕವೆಂದು ಪ್ರಾಣತ್ಯಾಗ ಮಾಡಿದವರು ಇದ್ದಾರೆ.
ಇದು ನಮ್ಮ ವೈಫಲ್ಯತೆಗಳನ್ನು ನಮ್ಮ ಶಕ್ತಿಯನ್ನಾಗಿಸಿದರೆ ಸಕಲವನ್ನು ಗೆಲ್ಲಬಹುದು ಇಲ್ಲವಾದರೆ ಅದು ನಮ್ಮನ್ನೇ ಬಲಿ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಯಾವುದೇ ಬಣ್ಣ ಪಡೆದು ಜನಿಸಿದ ಮಾನವನು ಕೊನೆಗೆ ಸುಟ್ಟು ಕರಕಲಾಗಲೇಬೇಕು. ಹೀಗಾಗಿ ಜೀವಿಸುವ ನಾಲ್ಕು ದಿನ ಯಾವುದನ್ನು ಯಾರನ್ನು ದೂರದೆ ಬದುಕಿದರೆ ಆ ಬದುಕು ಸಾರ್ಥಕವಾಗುತ್ತದೆ. ಅಗರಬತ್ತಿ ಕಪ್ಪಾದರೂ ಸೂಸುವ ಗಂಧ ಸುಗಂಧ.
ದೀಪದ ಬತ್ತಿ ಬಿಳಿಯಾದರು, ಅದರ ಅಂತ್ಯ ಕರಿಯ ಬೂದಿ. ಹೀಗಾಗಿ ಇದರಿಂದ ನಾವು ತಿಳಿಯಬೇಕಾದುದೇನೆಂದರೆ ಪ್ರತಿಯೊಬ್ಬರಿಗೂ ಪ್ರತಿಯೊಂದಕ್ಕೂ ಅದರದೇ ಆದ ಶ್ರೇಷ್ಠತೆ ಇರುತ್ತದೆ ಎಂಬುದಾಗಿದೆ.
-ಚೈತನ್ಯ ಲಕ್ಷ್ಮೀ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ