ಕನಕ ಮನೆಮನೆಗೆ ತಲುಪಲಿ: ಡಾ ಎಂ ಮೋಹನ ಆಳ್ವ

Upayuktha
0

ಮಂಗಳೂರು ವಿವಿ: ಕನಕ ಸಾಹಿತ್ಯ ಸಮ್ಮೇಳನ ಉದ್ಗಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ


ಮಂಗಳಗಂಗೋತ್ರಿ: ಕನಕದಾಸರು, ಪುರಂದರದಾಸರು, ನಾರಾಯಣ ಗುರುಗಳಂತಹ ಸಂತರು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಅಧಿಕಾರಶಾಹಿಯ ದರ್ಪದ ವಿರುದ್ಧ, ಆರ್ಥಿಕ ಸಂಗ್ರಹದ ಆಸೆಯ ವಿರುದ್ದ ಧ್ವನಿಯೆತ್ತಿ ಸಮಾನತೆಯ ನಿರ್ಮಲ ಬದುಕಿನ ದಾರಿಯನ್ನು ತೋರಿದವರು, ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು. 


ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಕನಕದಾಸ ಸಂಶೋಧನ ಕೇಂದ್ರ ಮತ್ತು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಆರಂಭವಾದ ಎರಡು ದಿನಗಳ 'ಕನಕ ಸಾಹಿತ್ಯ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯಕ್ಕೆ ಸೇರಲಿ ಬಿಡಲಿ, ಅದನ್ನು ಮೀರಿ ಕನಕರಂತಹ ಭಕ್ತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸಿದ ಸಂತರ ಚಿಂತನೆಗಳನ್ನು ಸಮಾಜ ಒಳಗೊಳ್ಳಬೇಕು. ಕನಕದಾಸರನ್ನೇ ಕುರಿತಾದ ಈ ಮೊದಲ ಕನಕ ಸಾಹಿತ್ಯ ಸಮ್ಮೇಳನ ಚಾರಿತ್ರಿಕ ಮಹತ್ತ್ವವನ್ನು ಹೊಂದಿದೆ, ಎಂದರು.


ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮಾತನಾಡಿ,  ವಿಶ್ವವಿದ್ಯಾನಿಲಯಕ್ಕೆ ಸೆಪ್ಟಂಬರ್ ವೇಳೆಗೆ ಸಾಂಸ್ಕೃತಿಕ ನೀತಿಯನ್ನು ರೂಪಿಸಲಾಗುವುದು. ಈ ಮೂಲಕ ವಿವಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಯುವ ತಲೆಮಾರಿಗೆ ಆಸಕ್ತಿ ಉಂಟಾಗುವಂತೆ ತಲುಪಿಸಲಾಗುವುದು, ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ  ಮಾತನಾಡಿ, ಕನಕದಾಸ ಪೀಠದ ಚಟುವಟಿಕೆಗಳು ಸಮಾಜಕ್ಕೆ ಉಪಯುಕ್ತ ಚುಂತನೆಗಳನ್ಮು ಒದಗಿಸುತ್ತಿವೆ, ಎಂದರು. 


ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ,. ಬಿ ಶಿವರಾಮ ಶೆಟ್ಟಿ ತಾವು ಕಳೆದ ಬಾರಿ ಪಡೆದ ಕನಕ ಪುರಸ್ಕಾರದ ಮೊತ್ತವನ್ನು ಮಂಗಳೂರು ವಿವಿಯ ಕನಕ ಪೀಠಕ್ಕೆ ದೇಣಿಗೆಯಾಗಿ ನೀಡಿದರು. ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಸಂಶೋಧನ ಕೇಂದ್ರದ ಸಮನ್ವಯಾಧಿಕಾರಿ ಎಂ.ಆರ್ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ಆನಂದ ಎಂ ಕಿದೂರು ವಂದಿಸಿದರು. ಉಪನ್ಯಾಸಕ ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.  


ಬಳಿಕ ಪರಂಪರೆಯ ಬೆಳಕಲ್ಲಿ ಕನಕ ವಿಚಾರಗೋಷ್ಠಿ ನಡೆಯಿತು. ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಲಕ್ಷ್ಮೀಶ ತೋಳ್ಪಾಡಿ, ಶಿವಮೊಗ್ಗದ ಎಂ. ಆರ್ ಸತ್ಯನಾರಾಯಣ ಮಾತನಾಡಿದರು. ಬಳಿಕ ನಡೆದ ಕನಕ ತರಂಗಿಣಿ ಮಹಾಕಾವ್ಯ ಮಂಥನ ಗೋಷ್ಠಿಯಲ್ಲಿ ಡಾ.ಪಾದೇಕಲ್ಲು ವಿಷ್ಣು ಭಟ್, ಶಿವಕುಮಾರ್ ಅಳಗೋಡು, ಬೆಳವಾಡಿ ಮಂಜುನಾಥ್ ಭಾಗವಹಿಸಿದ್ದರು. 


ಸಾಂಸ್ಜೃತಿಕ ಕಾರ್ಯಕ್ರಮ:

ಉಷಾ ಉಡುಪಿ ಮತ್ತು ತಂಡದಿಂದ ಕನಕ ಗಾಯನ, ಪವನ್ ಕಿರಣಕೆರೆ ಮತ್ತು ಗಾಯತ್ರಿ ನಾಗರಾಜ್ ಇವರಿಂದ ನಳಚರಿತ್ರೆ ಗಮಕ ವ್ಯಾಖ್ಯಾನ, ಶ್ರೀದೇವಿ ಕಲ್ಲಡ್ಕ, ಶ್ರೀವಾಣಿ ಕಾಕುಂಜೆ, ಸುನಿಲ್ ಪಲ್ಲಮಜಲು ಇವರಿಂದ ಕನಕ ಅರ್ಥಾನುಸಂಧಾನ ಕಾರ್ಯಕ್ರಮ ಹಾಗೂ ಬಳ್ಳಾರಿಯ ಮಲ್ಲಿಕಾರ್ಜುನ ಬಿ ವಿ ತಂಡ ನಡೆಸಿಕೊಟ್ಟ ಕನಕ ಗೊಂಬೆಯಾಟ ಪ್ರದರ್ಶನ ಗಮನಸೆಳೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top