ಮೂಡುಬಿದಿರೆ: ಗ್ರಾಹಕ ಜಾಗೃತಿ ಕಾಯ್ದೆ ಕುರಿತು ಜನರು ತಿಳಿಯಬೇಕಾಗಿದೆ. ಇದರ ಅರಿವು ಇಲ್ಲದಿರುವುದರಿಂದ ಜನರು ಮೋಸ ಹೋಗುತ್ತಿದ್ದು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಅಬೂಬಕ್ಕರ್ ಸಿದ್ದೀಕ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ "ಜಾಗೋ ಗ್ರಾಹಕ್ ಜಾಗೋ" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇವರು, ಯಾವುದಾದರೂ ವಸ್ತು ಖರೀದಿಸುವಾಗ ಅದರ ಎಮ್.ಆರ್.ಪಿ, ಎಕ್ಸ್ ಪೈರಿ ದಿನಾಂಕ ನೋಡಿ ಖರೀದಿಸಿ ಹಾಗೂ ಮರೆಯದೇ, ನೀವು ಬಿಲ್ ಪಡೆಯಿರಿ. ಯಾಕೆಂದರೆ ಆ ವಸ್ತುವಿನಿಂದ ನಿಮಗೆ ಹಾನಿಯಾದಾಗ ನೀವು ಗ್ರಾಹಕ ನ್ಯಾಯಾಲಯದಿಂದ ಸಹಾಯ ಪಡೆಯಬಹುದು ಎಂದರು.
ಜಗತ್ತಿನಲ್ಲಿ ಯಾವುದೇ ವಸ್ತು ಉಚಿತವಾಗಿ ದೊರೆಯುವುದಿಲ್ಲ. ಮಾರುಕಟ್ಟೆಯಲ್ಲಿ ಡಿಸ್ಕೌಂಟ್, ಒಂದರ ಜತೆಗೆ ಇನ್ನೊಂದು ಉಚಿತ ಎಂದು ಘೋಷಿಸುತ್ತಾರೆ. ಆದರೆ ಇವುಗಳ ಹಿಂದೆ ಹೋಗಬೇಡಿ. ಒಂದು ಮಗು ತಾಯಿಯ ಗರ್ಭದಿಂದ ಹುಟ್ಟಿದ ಸಮಯದಿಂದ ಹಿಡಿದು ಸಾಯುವ ತನಕ ಗ್ರಾಹಕ ದಬ್ಬಾಳಿಕೆ ನಡೆಯುತ್ತದೆ. ಹಾಗಾಗಿ ಜನರು ಒಗ್ಗಟ್ಟಿನಿಂದ ಈ ದಬ್ಬಾಳಿಕೆಯ ವಿರುದ್ಧ ತಮ್ಮ ಧ್ವನಿ ಎತ್ತಬೇಕು ಎಂದರು.
ಹೆಚ್ಚಿನ ಜನರು ಹಣ್ಣು, ತರಕಾರಿ ವಸ್ತುವನ್ನು ಖರೀದಿಸುವಾಗ ಅದರ ಬಣ್ಣ ಮಾತ್ರ ನೋಡುತ್ತಾರೆ. ಆದರೆ ಕೆಲವೊಂದು ಕೃತಕವಾಗಿ ತಯಾರಿಸಿದ್ದನ್ನು ಅರಿವಿಲ್ಲದೆ ನಾವು ಖರೀದಿಸುತ್ತೇವೆ. ನಾವು ನೈಜ್ಯವಾದ, ಸಾವಯುವ ಹಣ್ಣು ತರಕಾರಿಗಳನ್ನು ಖರೀದಿಸಬೇಕು, ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ನಿಕಾಯದ ಡೀನ್ ಸಂಧ್ಯಾ ಕೆ.ಎಸ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ ಇದ್ದರು.
ವಿದ್ಯಾರ್ಥಿ ಸೌರಭ್ ಸಿಂಗ್ ಸ್ವಾಗತಿಸಿ, ರೊನಾಲ್ಡ್ ರಾಜಕುಮಾರ್ ವಂದಿಸಿದರು. ವಿದ್ಯಾರ್ಥಿ ರೋಹಿತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ