ಕಾಣದ ಕೈಗಳು... ಕಾಣುವ ಬುದ್ಧಿ ನಮ್ಮದಾಗಿರಲಿ

Upayuktha
0

ಇಂದು ಜಗತ್ತು ನಡೆಯುವುದೇ ಕಾಣದ ಕೈಗಳ ಚಳಕದಿಂದ. ಆದರೆ ಇವೆಲ್ಲವೂ ಅಗೋಚರವಾಗಿರುವುದರಿಂದ ಅದರ ಮಹತ್ವ ಯಾರ ಅರಿವಿಗೂ ಬರುವುದಿಲ್ಲ. ವಿಪರ್ಯಾಸವೆಂದರೆ ಈ ಕಾಣದ ಕೈಗಳು ಒಂದು ಕ್ಷಣ ವಿರಮಿಸಿದರೂ ಪ್ರಪಂಚದ ಅವಸಾನವಾಗುವುದು. ಸೂರ್ಯೋದಯ ಸೂರ್ಯಾಸ್ತವನ್ನು ದಿನವೂ ಕಾಣುತ್ತೇವೆ. ಆದರೆ ಭೂಮಿ ತಿರುಗುವುದು ನಮಗರಿವಾಗುವುದಿಲ್ಲ. ಮಳೆ ಬರುವುದು ನಮಗೆ ಕಂಡರೂ ನೀರು ಆವಿಯಾಗಿ ಮೋಡವಾಗುವ ಪ್ರಕ್ರಿಯೆಯ ಅನುಭವವು ನಮಗಿಲ್ಲ. ಗಾಳಿಯನು ಸೇವಿಸುತ ಪ್ರತಿಕ್ಷಣವು ಇದ್ದರೂ ಗಾಳಿಯದು ಬೀಸುತ್ತ ಅಧ್ವಾನಗಳೇ ಆದರೂ ಗಾಳಿಯ ಚಲನೆ ನಮಗೆ ಕಾಣಿಸುವುದಿಲ್ಲ. ಗಿಡವು ಮರವಾಗಿ ಫಸಲನ್ನು ನೀಡುವುದು ನಮಗೆ ಬೇಕೆನಿಸಿದರೂ ಅದೇ ಮರದ ಬೇರುಗಳ ಕ್ರಿಯೆಯು ನಮಗೆ ತಿಳಿಯುವುದೇ ಇಲ್ಲ. ಭೂಕಂಪನಕ್ಕೆ ಅಲ್ಲೋಲ ಕಲ್ಲೋಲವಾದರೂ ಆ ಕಂಪನಗಳಿಗೆ ಅದೆಷ್ಟೋ ಕಾಲದ ಪೂರ್ವ ತಯಾರಿ ನಮಗೆ ತಿಳಿದದ್ದೇ ಇಲ್ಲ. ಹೀಗೆ ಅನೇಕ ಘಟನೆಗಳು ಪ್ರಕೃತಿಯಲ್ಲಿ ನಡೆಯುವಾಗ ನಮಗೆ ಅದರ ಕಾಣದ ಮುಖಗಳೇ ನಿರ್ಣಾಯಕವಾಗಿರುತ್ತವೆ ಎಂಬುದೂ ಅರಿವಾಗುವುದಿಲ್ಲ. ಏನೇ ಇರಲಿ ಪ್ರಕೃತಿಯಿಂದ ನಾವು ಪಾಠವನ್ನು ಕಲಿತವರಾದ್ದರಿಂದ ನಮ್ಮ ವ್ಯವಹಾರಗಳೂ ಅದೇ ರೀತಿಯಲ್ಲಿರುವುದೂ ಸೋಜಿಗವೆಂದೆನಿಸುವುದಿಲ್ಲ. 


ಇವತ್ತು ಮಗುವು ಜನಿಸುವುದರಿಂದ ತೊಡಗಿ ಪ್ರತಿಯೊಂದು ಕ್ರಿಯೆಯೂ ಕಾಣದ ಕೈಗಳ ಪರಿಣಾಮವೇ ಆಗಿರುತ್ತದೆ. ಗರ್ಭಿಣಿಯನ್ನು ನಾವು ಆಸ್ಪತ್ರೆಗೆ ಸೇರಿಸುತ್ತೇವೆ ಹೆರಿಗೆಗಾಗಿ. ಆಗ ನಾವು ನೋಡುವುದು ಪ್ರತಿಷ್ಠಿತ ಆಸ್ಪತ್ರೆ, ಪ್ರತಿಷ್ಠಿತ ವೈದ್ಯರನ್ನು. ಇದು ಸಹಜ ಕೂಡ. ಆದರೆ ಅಷ್ಟೇ ಮಹತ್ವದ ಅನೇಕ ವಿಚಾರಗಳು ಆಸ್ಪತ್ರೆಯಲ್ಲಿರುತ್ತವೆ. ಆದರೆ ನಾವದನ್ನು ಎಲ್ಲೂ ಹೇಳಿಕೊಳ್ಳುವುದೂ ಇಲ್ಲ, ಅಥವಾ ಅವು ಬೆಳಕಿಗೆ ಬರುವುದೂ ಇಲ್ಲ. ಸೆಕ್ಯೂರಿಟಿಯಿಂದ ತೊಡಗಿ ವೈದ್ಯನವರೆಗೆ ಅನೇಕ ಕಾಯಕ ಮಾಡುವವರ ತಂಡವೇ ಇರುತ್ತದೆ. ಅವರೆಲ್ಲರೂ ಅವರವರ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿರ್ವಹಿಸುವುದರಿಂದಲೇ ವೈದ್ಯನಿಗೆ ಅಥವಾ ಆಸ್ಪತ್ರೆಗೆ ಹೆಸರು ಬರುವುದು. ಕಸ ಗುಡಿಸುವವರು, ದಾದಿಯರು, ಅಂಬುಲೆನ್ಸಿನ ಚಾಲಕರು, ವೈದ್ಯರ ಸಹಾಯಕರು ಇವರೆಲ್ಲರ ಸೇವೆಗಳು ಅದೆಷ್ಟು ಮಹತ್ವದ್ದಾಗಿರುತ್ತವೆ ಎಂದರೆ ಅದು ಅರಿತವರಿಗೆ ಮಾತ್ರ ಗೊತ್ತಾಗುತ್ತದೆ. ಜೀವದ ಹಂಗು ತೊರೆದು ಅಂಬುಲೆನ್ಸ್ ಚಲಾಯಿಸುವ ಚಾಲಕ, ತನ್ನದೇ ಮಗುವಂತೆ ಶುಶ್ರೂಷೆ ಮಾಡುವ ದಾದಿಯರು, ಕ್ಲಪ್ತ ಸಮಯಕ್ಕೆ ಸ್ವಚ್ಛತೆಯನ್ನು ಕಾಪಾಡುವ ಕಾಯಕದಲ್ಲಿ ತೊಡಗಿರುವವರು ಇಂಥ ಹಲವಾರು ಕಾಣದ ಕೈಗಳ ಸಂಗಮವೇ ಒಂದು ಪ್ರತಿಷ್ಠಿತ ಆಸ್ಪತ್ರೆಯ ಅಥವಾ ಒಂದು ಸಂಸ್ಥೆಯ ಜೀವಾಳ.  


ಗಡಿಯಲ್ಲಿ ಪ್ರಾಣವನ್ನೇ ಒತ್ತೆ ಇಟ್ಟು, ಪ್ರಾಣವನ್ನೇ ಕೊಟ್ಟು ರಕ್ಷಣೆ ಮಾಡುವ ಸೈನಿಕರ ಕಾಯಕವು ನಮಗೆ ಕಾಣುವುದೇ? ಆದರೆ ಅದರ ಪರಿಣಾಮ ನಾವು ಸುರಕ್ಷಿತವಾಗಿರುವುದೇ ಆಗಿದೆ. ಅದೆಷ್ಟೋ ರೈತರು ನಿಸ್ವಾರ್ಥದಿಂದ ಬೆಳೆಯುವ ಆಹಾರಗಳು ಮಾರುಕಟ್ಟೆಗೆ ಬರುವಲ್ಲಿವರೆಗೆ ಅದರ ಶ್ರಮ, ಸಾಹಸ, ಕಷ್ಟ ನಷ್ಟ ಎಲ್ಲವೂ ಕಾಣದೆ ಇರುವುದು ಸತ್ಯ ತಾನೆ. ನಮಗೆ ಮಾರುಕಟ್ಟೆಗೆ ಬಂದಂಥ ಆಹಾರೋತ್ಪನ್ನಗಳ ಪರಿಚಯವಿರುವಷ್ಟು ಅದರ ಹಿಂದಿನ ಯಾವ ಹಂತಗಳೂ ಅಗೋಚರವೇ. ಕಾಣದಂಥ ಕೈಗಳು ಮಳೆ ಗಾಳಿ ಎನ್ನದೆ, ಹಗಲು ರಾತ್ರಿ ಎನ್ನದೆ ವಿದ್ಯುತ್ ಕಂಬಗಳಿಗೆ ನೇತಾಡಿಕೊಂಡು ಪ್ರಾಣ ಭಯವನ್ನೂ ತೊರೆದು ಕರ್ತವ್ಯ ನಿರ್ವಹಿಸಿರುವುದರಿಂದ ನಾವು ವಿದ್ಯುತ್ತಿನ ಸರ್ವ ಉಪಯೋಗಗಳನ್ನು ಅನುಭವಿಸುತ್ತಿದ್ದೇವೆ.

ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಬಹಳ ರುಚಿಯಾದ ತಿಂಡಿ, ಊಟವಿದ್ದರೆ ಅದರ ಹಿಂದೆ ಅಡುಗೆಯವರ ಶ್ರಮ ಕಾಣುವುದು ಉಂಟೇ? ಅಂತೆಯೇ ಇವತ್ತು ಹಲವಾರು ವಿಧಗಳ ಐಷಾರಾಮಿ ಬದುಕು ನಮಗಿರಬಹುದು ಆದರೆ ಇವೆಲ್ಲವೂ ಅದೆಷ್ಟೋ ವರ್ಷಗಳ ಇಂಚಿಂಚು ಬೆಳವಣಿಗೆಗಳಿಂದ ಬಂದಂಥವೆಂದು ನಮ್ಮಕಣ್ಣಿಗೆ ಬೀಳುವುದೇ? ಹಾಗಾದರೆ ಅದನ್ನೆಲ್ಲ ಕಟ್ಟಿಕೊಂಡು ನಮಗೇನಾಗಬೇಕು. ಈಗ ಹೇಗಿದೆಯೋ ಹಾಗೆ ಬದುಕುವುದೇ ಜೀವನ ಎನ್ನಬಹುದು. ಸರಿಯೂ ಇರಬಹುದು. ಆದರೆ ನಾವು ಇದನ್ನೆಲ್ಲ ತಿಳಿಯುವ ಪ್ರಯತ್ನ ಮಾಡಿದರೆ ನಮ್ಮ ದೃಷ್ಟಿಕೋನ ಬದಲಾಗಬಹುದು, ತಿಳಿವಿನ ಆಳ ಹೆಚ್ಚಾಗಬಹುದು, ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬನ ಶ್ರಮದ ಸತ್ಯದರ್ಶನವಾಗಬಹುದು.


ಬರಿದೆ ಒಳ್ಳೆಯ ವಿಷಯಗಳಿಗೆ ಮಾತ್ರವಲ್ಲ ಜಗತ್ತಿನಲ್ಲಿ ನಡೆಯುವ ಭಯೋತ್ಪಾದನೆಯಂಥ ಕ್ರೌರ್ಯಗಳ ಹಿಂದೆಯೂ ಈ ಕಾಣದ ಕೈಗಳ ಪ್ರಕ್ರಿಯೆಗಳು ಅದೆಷ್ಟು ಇರಬಹುದೆಂದು ಊಹಿಸಲಸಾಧ್ಯ. ನಾವೇನು ಅನುಭವಿಸುತ್ತೇವೋ ಅದು ಒಂದಂಶವಾದರೆ ಕಾಣದ ಅಂಶಗಳು ತೊಂಭತ್ತೊಂಭತ್ತರಷ್ಟಿರುವುದು ಸತ್ಯವೇ.


ಅದೇರೀತಿ ವಿದ್ಯಾಭ್ಯಾಸದ ವಿಚಾರದಲ್ಲೂ ಇಂತಹುದೇ ಕೆಲವು ವಿಷಯಗಳನ್ನು ನೋಡೋಣ. ಸಾಮಾನ್ಯವಾಗಿ ಯಾವುದೇ ಪದವೀಧರರಾದರೂ ಯಾವ ಕಾಲೇಜು, ಯಾವ ವಿಶ್ವ ವಿದ್ಯಾಲಯ ಎಂದು ಪರಿಗಣಿಸಲ್ಪಡುತ್ತದೆಯೇ ಹೊರತು ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸಿದಂಥ ಅಂಗನವಾಡಿ, ಬಾಲವಾಡಿ, ಪ್ರಾಥಮಿಕ ಶಾಲೆ, ಪದವಿಪೂರ್ವ ಕಾಲೇಜು ಕಾಣದ ಕೈಯಂತೆಯೇ ಇರುತ್ತವೆ. ಯಾವುದೇ ವ್ಯಕ್ತಿ ಯಾವ ಸಾಧನೆ ಮಾಡುವಲ್ಲಿ ಕೆಳಗಿನ ತರಗತಿಗಳಿಂದ ಕಲಿತದ್ದೇ ನಿರ್ಣಾಯಕವಾಗಿರುವಾದರೂ ಮೇಲ್ದರ್ಜೆಯ ಪ್ರಮಾಣಪತ್ರಗಳಿಗೆ ಮಾತ್ರ ಬೆಲೆ ಬರುವುದು. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳೂ ಹಾಗೆಯೇ ಅಲ್ಲವೇ. ಉದಾಹರಣೆಗೆ ಸಚಿನ್ ತೆಂಡುಲ್ಕರ್. ಕ್ರಿಕೆಟ್ ಜಗತ್ತು ಕಂಡಂಥ ಅಪ್ರತಿಮ ಆಟಗಾರ. ಇವರ ಶತಕಗಳನ್ನು ವಿಜ್ರಂಭಿಸದವರೇ ಇಲ್ಲ. ಆದರೆ ಅವರನ್ನು ಆ ಮಟ್ಟಕ್ಕೆ ಕೊಂಡು ಹೋದಂಥ ಅವರ ಗುರುಗಳು ಯಾರೆಂದು ಎಷ್ಟು ಜನಕ್ಕೆ ಗೊತ್ತಿದೆ.

ಆ ಕಾಣದ ಕೈಯ ಚಳಕವೇ ತೆಂಡುಲ್ಕರ್ ಎಂಬಂಥ ಆಟಗಾರನನ್ನು ಸೃಷ್ಟಿಸಿತು. ಇವತ್ತು ಮೋದಿಜಿಯವರು ಪ್ರಧಾನಿಯಾಗಿದ್ದರೆ ಅವರ ಸಾಧನೆಗಳು ಎಷ್ಟು ಕಾರಣವೋ ಅಷ್ಟೇ ಕಾಣದ ಕೈಯಂತೆ ಪ್ರೋತ್ಸಾಹಿಸಿದ ಅವರ ಅಭಿಮಾನಿಗಳೂ ಕಾರಣರಾಗುತ್ತಾರೆ. ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಅಥವಾ ಪ್ರತಿಯೊಬ್ಬರಿಗೂ ಪರಿಚಯವಿರುವ ಕಾಣದ ಕೈ ಎಂದರೆ ಅಮ್ಮ. ಯಾವನೇ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ಪರಿಪೂರ್ಣವಾಗಿ ಪ್ರೋತ್ಸಾಹಿಸುವ ಪರಿಶ್ರಮಪಡುವ ಒಂದು ಕಾಣದ ಕೈಯೇ ಈ ಅಮ್ಮ. ಹುಟ್ಟಿದಂದಿನಿಂದ ಹಿಡಿದ ಕೈಯನ್ನು ಬಿಡದೆ ಮುನ್ನಡೆಸಿ ಅವಳ ಕೊನೆ ಉಸಿರಿರುವರೆಗು ಕೈ ಹಿಡಿದುಕೊಂಡಿರುವವಳೆಂದರೆ ಪ್ರತಿಯೊಬ್ಬರ ಅಮ್ಮ ಮಾತ್ರ. ಆದ್ದರಿಂದ ಇಂದು ಅಮ್ಮನಂಥ ಅದೆಷ್ಟೋ ಅಗೋಚರ ಶಕ್ತಿಗಳ ಸಂಗಮವೇ ಇಂದಿನ ವರ್ತಮಾನ. ಇಂದು ನಾವೇನಾಗಿದ್ದೇವೆಯೋ ಅದು ಇನ್ನೊಬ್ಬರ ಭಿಕ್ಷೆ ಎಂಬ ಅರಿವು ನಮಗಿದ್ದಾಗ ನಾವು ಪರಿಪೂರ್ಣತೆಯತ್ತ ನಡೆಯಬಹುದೆಂದೆನಿಸುತ್ತದೆ. ಏನಂತೀರಿ? 

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top