ಬದುಕು, ಬಣ್ಣ ಮಾಸಿದ ಭಾವಗಳು ಮತ್ತು ಅದರಾಚೆಗಿನ ನೋವನ್ನು ಮಲಯಾಳಂ ಸಿನಿಮಾಗಳು ಕಟ್ಟಿಕೊಡುವಷ್ಟು ಪರಿಣಾಮಕಾರಿಯಾಗಿ ನಮ್ಮ ಸಿನಿಮಾಗಳು ಯಾಕೆ ನೀಡುವುದಿಲ್ಲ ಅನ್ನೋ ಬೇಸರದ ಮಧ್ಯೆ ಭರವಸೆ ಮೂಡಿಸಿದ್ದು ಜೀಟಿಗೆ ಅನ್ನೋ ತುಳು ಚಿತ್ರ. ನಿರ್ದೇಶಕ ಸಂತೋಷ್ ಮಾಡ ಮಲಯಾಳಂ ಖ್ಯಾತ ನಿರ್ದೇಶಕ ಜಯರಾಜ್ ಜೊತೆ ಪಳಗಿರುವ ಕಾರಣ ಚಿತ್ರ ಸಹಜವಾಗಿದ್ದು ಆಪ್ತವೆನಿಸುತ್ತದೆ.
ಜೀಟಿಗೆ ಮನೋರಂಜನೆಯ ದೃಷ್ಟಿಯಿಂದ ನಿರ್ಮಿಸಿದ ಚಿತ್ರವಲ್ಲ, ಬದಲಿಗೆ ತುಳುನಾಡಿನ ದೈವಾರಾಧನೆ ಮತ್ತದರ ಅನನ್ಯ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ. ಪರಂಪರಾಗತವಾಗಿ ದೈವದ ನರ್ತನ ಸೇವೆ ಮಾಡುತ್ತಾ ಬಂದಿರುವ ತನಿಯಪ್ಪ ತನ್ನ ಮಗನಿಗೆ ಈ ಚಾಕರಿಯ ಉಸಾಬರಿ ಬೇಡ ಎಂದು ವಿದ್ಯೆ ಕಲಿಸಿ ವಿದೇಶಕ್ಕೆ ಕಳುಹಿಸುವುದು, ಗುತ್ತಿನ ಮನೆಯಲ್ಲಿ ದೈವಕ್ಕೆ ಕೋಲ ಕಟ್ಟುವುದಿಲ್ಲ ಎನ್ನುವುದು, ಮಗನ ಮದುವೆ ಮುರಿದು ಬೀಳುವುದು, ತನಿಯಪ್ಪನ ಪತ್ನಿ ಸುಂದರಿಯ ಮಗನ ಮೇಲಿನ ತೀರದ ವಾತ್ಸಲ್ಯ, ಬಾಲ್ಯದ ನೆನಪುಗಳ ಜೊತೆ ಒಂಟಿ ವೇದನೆ, ತುಳುವರ ಆರಾಧ್ಯ ದೈವ ಕೊರಗಜ್ಜನ ಕಾರಣಿಕ ಎಲ್ಲವೂ ಕಣ್ಣಿಗೆ ಕಟ್ಟುತ್ತದೆ. ಇದರ ಮಧ್ಯೆ ಕೊರೋನಾ ಮಹಾಮಾರಿ ಜನರ ಜೀವನದ ಮೇಲೆ ಎಂತಹ ಗಂಭೀರ ಪರಿಣಾಮ ಬಿರುತ್ತದೆ ಅನ್ನೋದನ್ನು ನಿರ್ದೇಶಕರು ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.
ಜೀಟಿಗೆಯನ್ನು ಮೆಚ್ಚಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮೊದಲನೆಯದು ತನಿಯಪ್ಪನಾಗಿ ಕುಸೇಲ್ದರಸೆ ನವೀನ್ ಡಿ ಪಡೀಲ್ ಅವರ ಅದ್ಭುತ ಅಭಿನಯ. ಪಡೀಲ್ ರದ್ದು ತೀರಾ ಸಹಜ ಅಭಿನಯವಾದ್ದರಿಂದ ಹಾಸ್ಯ ದೃಶ್ಯಗಳಲ್ಲಿ ನೋಡಿದ್ದಕ್ಕಿಂತ ಹೆಚ್ಚಾಗಿ ಇಲ್ಲಿನ ಪಡೀಲ್ ನಿಮಗಿಷ್ಟವಾಗುತ್ತಾರೆ. ಇನ್ನು ಪತ್ನಿ ಸುಂದರಿಯಾಗಿ ರಂಗ ಕಲಾವಿದೆ ರೂಪ ವರ್ಕಾಡಿ ಅವರದ್ದು ಮನೋಜ್ಞ ಅಭಿನಯ. ಇನ್ನು ಜೆಪಿ ತೂಮಿನಾಡ್, ಚೇತನ್ ರೈ ಮಾಣಿ, ಅರುಣ್ ರೈ, ಶಶಿರಾಜ್ ಕಾವೂರು, ಸತ್ಯ ಜೀವನ್ ಸೋಮೇಶ್ವರ ಪಾತ್ರಗಳು ಹೀಗೆ ಬಂದು ಹಾಗೆ ಹೋದರೂ ನೆನಪಲ್ಲಿ ಉಳಿಯುತ್ತೆ.
ಚಿತ್ರಕ್ಕೆ ಚಿತ್ರಕತೆ- ಸಂಭಾಷಣೆ ಬರೆದಿರುವ ಶಶಿರಾಜ್ ಕಾವೂರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದರೆ ಉನ್ನಿ ಮಾಡವುರ್ ಕೆಮರಾ ಕಣ್ಣಲ್ಲಿ ತುಳುನಾಡು ಪೊರ್ಲು. ಇನ್ನು ನಾಡೋಜ ಸಾಹಿತಿ ಅಮೃತ ಸೋಮೇಶ್ವರ ಬರೆದಿರುವ ಸಾಹಿತ್ಯ ಶಶಿರಾಜ್ ಕಾವೂರು ಕಂಠದಲ್ಲಿ ಚೆಂದ. ಸಾಕ್ಸೋಫೋನ್ ಜಯರಾಮ್ ಸಂಗೀತ ಕಿವಿಗೆ ಇಂಪು.
ಜೀಟಿಗೆ ಬರಿಯ ಚಿತ್ರವಲ್ಲ, ಬದುಕು ಬವಣೆಯ ದೀವಟಿಗೆ. ಚಿತ್ರವನ್ನು ನಿರ್ಮಾಪಕ ಅರುಣ್ ರೈ ತೋಡಾರ್ ಶ್ರಮ ಹಾಕಿ ನಿರ್ಮಾಣ ಮಾಡಿದ್ದಾರೆ. ತುಳು ಭಾಷಾಪ್ರೇಮಿಗಳು ಮನಸು ಮಾಡಿದಲ್ಲಿ ಒಂದು ಉತ್ತಮ ಸಂದೇಶ ಸಾರುವ ಚಿತ್ರವನ್ನು ಗೆಲ್ಲಿಸುವುದು ಕಷ್ಟವೇನಲ್ಲ.
-ಶಶಿ ಬೆಳ್ಳಾಯರು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ