ಅಂಬಿಕಾ ಮಹಾವಿದ್ಯಾಲಯದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ
ಪುತ್ತೂರು: ವಿದ್ಯಾರ್ಥಿಗಳಲ್ಲಿ ಅಪರಿಮಿತವಾದ ಶಕ್ತಿ ಇದೆ. ಆದರೆ ಆ ಶಕ್ತಿ ಅರ್ಥ ಆಗಬೇಕಾದರೆ ಓರ್ವ ಸಮರ್ಥ ಗುರುವಿನ ಮಾರ್ಗದರ್ಶನ ಬೇಕು. ಶಿಷ್ಯನಾದವನು ಪಂಚೇಂದ್ರಿಯಗಳ ಮೂಲಕ ಸದಸದ್ವಿಚಾರ ಚಿಂತನೆಗಳನ್ನೇ ಸ್ವೀಕರಿಸುವ ನೆಲೆಯಲ್ಲಿ ಗುರುವಿನ ಅವಶ್ಯಕತೆ ಇದೆ. ಎಲ್ಲಾ ಗುರುಗಳಲ್ಲೂ ಮಹಾಗುರು ವೇದವ್ಯಾಸರನ್ನು ಕಾಣುವ ಗುಣ ವಿದ್ಯಾರ್ಥಿಗಳಲ್ಲಿ ಒಡಮೂಡಬೇಕು ಎಂದು ಪುತ್ತೂರಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಆರ್. ವೇದವ್ಯಾಸ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಬುಧವಾರ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಗವಾನ್ ವೇದವ್ಯಾಸರು ಶ್ರೀಮನ್ನಾರಾಯಣನ ಅವತಾರವೆಂಬ ನಂಬಿಕೆಯಿದೆ. ಅಂತೆಯೇ ಶಂಕರಾಚಾರ್ಯರ ಅವತಾರವೆಂಬ ನಿಲುವೂ ಇದೆ. ಏನೇ ಇದ್ದರೂ ವ್ಯಾಸರು ಮಹಾಗುರುವೆಂಬುದರಲ್ಲಿ ಅನುಮಾನವಿಲ್ಲ. ವೇದಗಳನ್ನು ವಿಂಗಡಿಸಿ ಜನರಿಗೆ ತಲಪಿಸಿದ ಕೀರ್ತಿ ಅವರದ್ದು. ಎಲ್ಲರ ಬದುಕಿನಲ್ಲಾಗುವ ತಲ್ಲಣಗಳಿಗೂ ಉತ್ತರ ರೂಪಿಯಾಗಿ ವೇದವ್ಯಾಸರು ಕಾಣಿಸಿಕೊಳ್ಳುತ್ತಾರೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣದಲ್ಲಿ ಭಾರತೀಯ ಶಿಕ್ಷಣ, ಪಾಶ್ಚಿಮಾತ್ಯ ಶಿಕ್ಷಣವೆಂಬ ಎರಡು ಪ್ರಭೇದÀಗಳಿವೆ. ಪಾಶ್ಚಿಮಾತ್ಯ ಶಿಕ್ಷಣ ಕೋಟು ಬೂಟುಗಳ ಸಂಸ್ಕøತಿಯೊಂದಿಗೆ ಮನುಷ್ಯನಲ್ಲಿ ಅಹಂಕಾರವನ್ನು ತುಂಬಿದರೆ ಭಾರತೀಯ ಶಿಕ್ಷಣ ವಿದ್ಯಾರ್ಥಿಗೆ ತನ್ನ ಇರವನ್ನು ಅರ್ಥ ಮಾಡಿಸುವುದಲ್ಲದೆ ಈ ಪ್ರಪಂಚದಲ್ಲಿ ತಾನು ಕೇವಲ ಒಂದು ಸಣ್ಣ ಬಿಂದು ಅಷ್ಟೆ ಎಂಬ ವಿಧೇಯತೆಯನ್ನು ಒದಗಿಸಿಕೊಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತದಲ್ಲಿದೆ. ಅದನ್ನು ಮುಂದುವರೆಸುವ ಹೊಣೆಗಾರಿಕೆ ಮುಂದಿನ ಜನಾಂಗದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಪರಂಪರೆ ಹಾಗೂ ಸಂಸ್ಕøತಿಯಂತೆ ಪ್ರೊ.ವೇದವ್ಯಾಸ ಅವರ ಪಾದಪೂಜೆ ನಡೆಸಿ, ಸನ್ಮಾನಗೈದು ಗೌರವಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಸನ್ಮಾನಪತ್ರ ವಾಚಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ