ಬೆಂಗಳೂರು: ಬೆಂಗಳೂರು ಬಂಟರ ಸಂಘದ ಬಿ.ಎಸ್.ಆರ್.ಎನ್.ಎಸ್. ವಿದ್ಯಾನಿಕೇತನ-2 ನೂತನ ಶಾಲೆಯ ಆಡಳಿತ ಕಚೇರಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನೂತನ ಶಾಲಾ ಕಟ್ಟಡ ಅದ್ಭುತವಾಗಿದೆ. ಸ್ವಿಜರ್ಲೆಂಡ್ನ ಮಾಡೆಲ್ ಅನ್ನು ನೋಡಿ ಈ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ನಿಜವಾಗಿಯೂ ಇಲ್ಲಿನ ಪರಿಸರದ ಮಕ್ಕಳು ಸ್ವಿಜರ್ಲೆಂಡ್ನಲ್ಲಿದ್ದೇವೆ ಅನ್ನುವ ವಾತಾವರಣದೊಂದಿಗೆ ಕಲಿಯಲು ಸಹಾಯ ಮಾಡಲಿದೆ. ಅಲ್ಲದೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಕೂಡ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಬಂಟ ಸಮಾಜದಲ್ಲಿರುವ ಒಗ್ಗಟ್ಟು, ಸಂಘಟನಾ ಶಕ್ತಿ, ದಾನ ಹಾಗೂ ಸಮಾಜ ಸೇವೆ ಮತ್ತು ಅವರಲ್ಲಿರುವ ಪರೋಪಕಾರ ಮನೋಭಾವನೆ ಸಮಾಜಕ್ಕೆ ಮಾದರಿಯಾಗಿದೆ. ಬಂಟರ ಸಂಘ ಯಾವುದೇ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ಬಂಟ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೇ ಎಲ್ಲ ಸಮಾಜದೊಂದಿಗೆ ಬೆರೆತು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ನಾಳೆ ಅಧಿಕೃತವಾಗಿ ನೂತನ ಶಾಲಾ ಕಟ್ಟಡವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ ಶಾಲೆಯ ಆಡಳಿತ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ ಸೇರಿದಂತೆ ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ