|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜು.30: ಶಿಬಿರಂಗ ಪ್ರಕಾಶನದ ಡಾ.ಎಸ್.ಆರ್. ನರಸಿಂಹಮೂರ್ತಿಯವರ 101ನೇ ಗ್ರಂಥದ ಲೋಕಾರ್ಪಣೆ, ಅಭಿನಂದನಾ ಕಾರ್ಯಕ್ರಮ

ಜು.30: ಶಿಬಿರಂಗ ಪ್ರಕಾಶನದ ಡಾ.ಎಸ್.ಆರ್. ನರಸಿಂಹಮೂರ್ತಿಯವರ 101ನೇ ಗ್ರಂಥದ ಲೋಕಾರ್ಪಣೆ, ಅಭಿನಂದನಾ ಕಾರ್ಯಕ್ರಮ


ಬೆಂಗಳೂರು: ಶಿಬಿರಂಗ ಪ್ರಕಾಶನವು ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯ ಪ್ರವೃತ್ತವಾಗಿದ್ದು, ಕನ್ನಡ ಲಿಪಿಯಲ್ಲಿ ಅಪ್ರಕಟಿತ ಹಾಗೂ ಅತ್ಯವಶ್ಯಕವಾದ 100 ಸಂಸ್ಕೃತ ಹಾಗೂ ಕನ್ನಡ ಧಾರ್ಮಿಕ ಗ್ರಂಥಗಳನ್ನು ಪ್ರಕಾಶಿಸಿದೆ. ಈ ಎಲ್ಲ ಕೃತಿಗಳೂ ಡಾ. ಎಸ್.ಆರ್. ನರಸಿಂಹಮೂರ್ತಿ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿವೆ.


ಪ್ರಸ್ತುತ ಪ್ರಕಾಶನವು, ಸಂಪಾದಕರ 101ನೇ ಗ್ರಂಥದ ಲೋಕಾರ್ಪಣೆಯನ್ನು ಜುಲೈ 30ರಂದು ಶನಿವಾರ ಸಾಯಂಕಾಲ 6.00 ಗಂಟೆಗೆ ಜಯನಗರ 8ನೇ ಬಡಾವಣೆಯಲ್ಲಿರುವ ಶ್ರೀ ಜಯರಾಮ ಸೇವಾ ಮಂಡಳಿ ಆವರಣದ ಪ್ರೊ. ಜಿ.ವಿ. ಶತಮಾನೋತ್ಸವ ಕಲಾ ಭವನದಲ್ಲಿ ಏರ್ಪಡಿಸಲಾಗಿದೆ.


ಬೆಂಗಳೂರಿನ ರಾಜರಾಜೇಶ್ವರೀ ನಗರದ ಕೈಲಾಸಾಶ್ರಮ ಮಹಾ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಜಯೇಂದ್ರ ಪುರೀ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಖ್ಯಾತ ವಾಗ್ಮಿಗಳೂ, ಅಧ್ಯಾತ್ಮ ಚಿಂತಕರೂ ಆದ ವಿದ್ವಾನ್ ಡಾ|| ಪಾವಗಡ ಪ್ರಕಾಶ್ ರಾವ್ ಮುಖ್ಯ ಅತಿಥಿಗಳಾಗಿ ವಿಶೇಷ ಉಪನ್ಯಾಸವನ್ನು ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಮಿಗಿನಕಲ್ಲು ವಿಶ್ವೇಶ್ವರ ಭಟ್ಟರು ಭಾಗವಹಿಸಲಿದ್ದಾರೆ. ವಿವರಗಳಿಗೆ ಮೊ. 98867 14586.



ಪ್ರಕಾಶಕರು

ಡಾ. ಎಸ್.ಆರ್. ನರಸಿಂಹಮೂರ್ತಿಯವರ 101ನೇ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಕಾರ್ಯಕ್ರಮ

ಎಲ್ಲಿ: ಜಯನಗರ 8ನೇ ಬಡಾವಣೆಯಲ್ಲಿರುವ ಶ್ರೀ ಜಯರಾಮ ಸೇವಾ ಮಂಡಳಿ ಆವರಣದ ಪ್ರೊ. ಜಿ.ವಿ. ಶತಮಾನೋತ್ಸವ ಕಲಾ ಭವನ

ಎಂದು: ದಿನಾಂಕ: 30.07.2022ನೇ ಶನಿವಾರ ಸಾಯಂಕಾಲ 6.00 ಗಂಟೆಗೆ

ಗ್ರಂಥ ಲೋಕಾರ್ಪಣೆ & ದಿವ್ಯ ಸಾನ್ನಿಧ್ಯ:  ಶ್ರೀ ಶ್ರೀ ಜಯೇಂದ್ರಪುರೀ ಮಹಾಸ್ವಾಮಿಗಳು, ಕೈಲಾಸಾಶ್ರಮ ಮಹಾಸಂಸ್ಥಾನ, ಬೆಂಗಳೂರು

ಮುಖ್ಯ ಆಹ್ವಾನಿತರು: ವಿದ್ವಾನ್ ಡಾ. ಪಾವಗಡ ಪ್ರಕಾಶ್ ರಾವ್ ಮತ್ತು ವಿದ್ವಾನ್ ಮಿಗಿನಕಲ್ಲು ವಿಶ್ವೇಶ್ವರ ಭಟ್ಟ


ಲೋಕಾರ್ಪಣೆಗೊಳ್ಳುತ್ತಿರುವ ಗ್ರಂಥಗಳು

ಶ್ರೀವಿದ್ಯಾನುಸಂಧಾನ- ಅತ್ಯಂತ ಪ್ರಶಸ್ತವಾದ ದೇವೀ ಆರಾಧನೆಗೆ ಪೂರಕವಾದ ಶ್ರೀವಿದ್ಯೆಯ ಬಗ್ಗೆ ಆರಂಭಿಕರಿಗೆ ಹಾಗೂ ಉಪಾಸಕರಿಗೆ ಇರಬಹುದಾದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿರುವ ವಿಶಿಷ್ಟ ಪುಸ್ತಕ ಇದಾಗಿದೆ. ಶ್ರೀವಿದ್ಯೋಪಾಸನೆಗೆ ಕೈಹಚ್ಚುವ ಮುನ್ನ ಪ್ರತಿಯೊಬ್ಬರೂ ಈ ಕೃತಿಯ ಪ್ರಯೋಜನವನ್ನು ಪಡೆಯಬಹುದು.


ಶ್ರೀಪರಶುರಾಮ ಕಲ್ಪಸೂತ್ರಮ್- ಸಂಸ್ಕೃತದಲ್ಲಷ್ಟೇ ಪ್ರಕಟಿತಗೊಂಡು ಸಂಸ್ಕøತ ಮತ್ತು ಹಿಂದಿ ಭಾಷೆಯ ವ್ಯಾಖ್ಯಾನ ಮತ್ತು ಅನುವಾದವನ್ನು ಹೊಂದಿದ್ದ ಪರಶುರಾಮ ಪ್ರಣೀತ ಕಲ್ಪಸೂತ್ರ ಮೂಲ ಮತ್ತು  ಸರಳ ಕನ್ನಡ ಭಾವಾನುವಾದವನ್ನು ಹೊಂದಿರುವ ಈ ಕೃತಿ ವಿಶಿಷ್ಟವೆನಿಸಿದೆ.


An Introduction to Astamangala Prashna- ಇದೇ ಲೇಖಕರ ಕನ್ನಡ ಭಾಷೆಯಲ್ಲಿ ಪ್ರಕಟಗೊಂಡಿದ್ದ ಜ್ಯೋತಿಷ ಶಾಸ್ತ್ರಕ್ಕೆ ಸಂಬಂಧಿಸಿದ ಅಷ್ಟ ಮಂಗಳ ಪ್ರಶ್ನೆ ಎಂಬ ಪುಸ್ತಕದ ಆಂಗ್ಲ ಅನುವಾದವು ಇದಾಗಿದೆ.


ಶ್ರೀಲಲಿತಾರ್ಚನ ದೀಪಿಕಾ- ಶ್ರೀಚಕ್ರದಲ್ಲಿ ಲಲಿತೆಯನ್ನು ಪೂಜಿಸುವ ಆವರಣ ಪೂಜೆ, ಉಪನಿಷತ್ತು-ಸ್ತೋತ್ರ-ವೈದಿಕ ಸೂಕ್ತಗಳನ್ನು ಸಮನ್ವಯಗೊಳಿಸಿ ಮಾಡುವ ವಿಶಿಷ್ಟ ಷೋಡಶೋಪಚಾರ ಪೂಜೆ, ದಾರಿದ್ರ್ಯ ಧ್ವಂಸಿನೀ ಪೂಜೆ, ಹಲವು ರೀತಿಯ ಅಷ್ಟೋತ್ತರ ಶತನಾಮಾವಳೀ ಸ್ತೋತ್ರಗಳು, ಪಂಚಶತನಾಮಾವಳಿ, ಬಾಲಾ-ಲಲಿತಾ-ರಾಜರಾಜೇಶ್ವರೀ ಸಹಸ್ರನಾಮ ಸ್ತೋತ್ರಗಳು, ದೇವೀ ಉಪನಿಷತ್, ಸೂಕ್ತ ಹೀಗೆ ಹಲವು ವಿಶೇಷ ಉಪಾಸನಾ ಧ್ಯೇಯವಾದ ಸ್ತುತಿ ಸಮುಚ್ಚಯಗಳು ಇದರಲ್ಲಿ  ಅಡಕವಾಗಿವೆ.


ಶ್ರೀರುದ್ರಕಲ್ಪದ್ರುಮಃ - ರುದ್ರಾನುಷ್ಠಾನಕ್ಕೆ ಪೂರಕವಾದ ರುದ್ರ-ಮಹಾನ್ಯಾಸಗಳು, ರುದ್ರಹೋಮ ಕಲ್ಪಗಳೂ, ವೈದಿಕ ಹಾಗೂ ಪೌರಾಣಿಕ ರುದ್ರ ಸ್ತುತಿಗಳೂ ಇದರಲ್ಲಿ ಸೇರಿದೆ.


ಶ್ರೀಮನ್ಮಂತ್ರಸಿಂಹಃ (ಸಂಸ್ಕೃತ) - ಮಂತ್ರಶಾಸ್ತ್ರೀಯ ಗ್ರಂಥಗಳಲ್ಲಡಗಿರುವ ಅನುಷ್ಠಾನ ಪರವಾದ ಮಂತ್ರ ವಿಧಾನಗಳನ್ನು ಆರಿಸಿ, ಸಂಸ್ಕರಿಸಿ, ಉಪಾಸಕರ ಅನುಕೂಲಕ್ಕೆ ಒದಗುವ ರೀತಿಯಲ್ಲಿ ಸಿದ್ಧಗೊಂಡ ಗ್ರಂಥ “ಶ್ರೀಮನ್ಮಂತ್ರಸಿಂಹಃ” ಎಂಬ ಗ್ರಂಥ. ಅನುಷ್ಠಾನ ವಿಧಾನ, ಗಣೇಶ ಮಂತ್ರಕಲ್ಪ, ಶಿವ ಮಂತ್ರಕಲ್ಪ, ವಿಷ್ಣು ಮಂತ್ರಕಲ್ಪ,  ಶಕ್ತಿ ಮಂತ್ರಕಲ್ಪ, ದಶಮಹಾವಿದ್ಯಾ ಮಂತ್ರಕಲ್ಪ, ಮಿಶ್ರ ಮಂತ್ರಕಲ್ಪ ಹೀಗೆ ಏಳು ನಿಧಿಗಳಲ್ಲಿ ನಿರೂಪಿಸಲ್ಪಟ್ಟಿರುವ ಈ ಸಂಸ್ಕೃತ ಕೃತಿಯು ಈ ಕ್ಷೇತ್ರದಲ್ಲಿ ಆಸಕ್ತರಿಗೆ ಮಹತ್ಸೌಕರ್ಯವನ್ನು ಕಲ್ಪಿಸುತ್ತದೆ.


ಶತಾಧಿಕ ಗ್ರಂಥ ಕರ್ತೃ ರತ್ನ ಡಾ. ಎಸ್.ಆರ್.ನರಸಿಂಹಮೂರ್ತಿ

ಕೃತಿಗಳ ಸಂಪಾದಕರಾದÀ ಡಾ.ಎಸ್.ಆರ್. ನರಸಿಂಹಮೂರ್ತಿಯವರು ಲೌಕಿಕ, ಧಾರ್ಮಿಕ ಶಿಕ್ಷಣಗಳೆರಡರಲ್ಲಿಯೂ ಪರಿಶ್ರಮ ಸಾಧಿಸಿದವರು. ಎಂ.ಎಸ್ಸಿ., (ಭೂಗರ್ಭಶಾಸ್ತ್ರ). ಎಂ.ಎ.(ಕನ್ನಡ), ಎಂ.ಎ., ಪಿಹೆಚ್‍ಡಿ.,(ಜ್ಯೋತಿಷ) ಹೀಗೆ ಉನ್ನತವಾದ ಲೌಕಿಕ ಶಿಕ್ಷಣ ಸಂಪನ್ನರು. ಪ್ರಸಕ್ತ ಶ್ರೀವಿದ್ಯಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್, (ಫ್ಲೋರಿಡಾ, ಅಮೇರಿಕಾ)ನ ಕುಲಸಚಿವರೂ ಮತ್ತು ಜ್ಯೋತಿಷ ವಿಭಾಗದ ಡೀನ್ ಆಗಿರುತ್ತಾರೆ.


ಸುಮಾರು ಮೂರುದಶಕಗಳಿಗೂ ಹೆಚ್ಚು ಕಾಲದಿಂದ ವೇದಾಧ್ಯಯನ, ಪ್ರಯೋಗ, ಆಗಮ, ಶ್ರೀವಿದ್ಯೆ, ಜ್ಯೋತಿಷ, ಪಂಚಾಂಗ ಗಣನೆ, ಪತ್ರಿಕಾ ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ಅವಿರತ ತೊಡಗಿಸಿಕೊಂಡು ಅವಿಶ್ರಾಂತರಾಗಿ ದುಡಿಯುತ್ತಿರುವ ಶ್ರೀಯುತರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿದವರೆಂದು ಆಯಾ ಕ್ಷೇತ್ರದ ಎಷ್ಟೋ ಹಿರಿಯರು ಪರಿಭಾವಿಸಿದ್ದಾರೆ. ಕೆಲವೇ ಕೆಲವರಲ್ಲಿ ಅಡಗಿದ್ದ ಪ್ರಯೋಗ ಸಾಹಿತ್ಯವನ್ನು ಕ್ರಮಬದ್ಧವಾಗಿ ಸಂಕಲಿಸಿ, ಮೂರ್ತರೂಪವನ್ನು ನೀಡಿ, ಸರ್ವರಿಗೂ ಮುಟ್ಟುವಂತೆ ಮಾಡಿದ ಹಿರಿಮೆ ಶ್ರೀಯುತರಿಗೆ ಸಲ್ಲುತ್ತದೆ. 


ಅತ್ಯಂತ ಕಷ್ಟಸಾಧ್ಯವಾದ ಈ ಧರ್ಮಸಾಹಿತ್ಯ ಪ್ರಕಟಣೆಗೆ ಕಂಕಣಬದ್ಧರಾಗಿರುವ ಡಾ|| ಎಸ್.ಆರ್. ನರಸಿಂಹಮೂರ್ತಿಯವರು, ತಮ್ಮ ಮೂರು ದಶಕಗಳಷ್ಟ್ಚು ಕಾಲದ ಪರಿಶ್ರಮದಿಂದ ಇಂತಹುದೇ 100 ಕೃತಿಗಳನ್ನು ಈಗಾಗಲೇ ವೈದಿಕ ಕ್ಷೇತ್ರಕ್ಕೆ ಸಮರ್ಪಿಸಿ, ಸಾರಸ್ವತ ಸರಸ್ವತಿಯ ದಿವ್ಯಚರಣ ಸೇವಕರೆನಿಸಿದ್ದಾರೆ. ಪ್ರಕಟಿಸಲಾಗಿರುವ ಸಾಹಿತ್ಯವು 15000 ಪುಟಗಳಷ್ಟು ವಿಸ್ತರಿಸಿದೆ. ಡಾ. ಎಸ್.ಆರ್.ನರಸಿಂಹಮೂರ್ತಿಗಳು ತಮ್ಮ ಅನುಭವ, ಜ್ಞಾನ, ಅನುಷ್ಠಾನ, ಸಾಧನೆ, ತಪಸ್ಸುಗಳಿಂದ ಪರಿಪ್ಲುತಗೊಳಿಸಿ, ಶ್ರೀಗುರುಕೃಪೆಯಿಂದ ಪ್ರಸಕ್ತ ತಮ್ಮ 101ನೇ ಗ್ರಂಥ ಪ್ರಕಟಣೆಯ ಸಂಭ್ರಮವನ್ನು ಆಚರಿಸುತ್ತಲಿದ್ದಾರೆ.


ಶಿಬಿರಂಗ ಪ್ರಕಾಶನ

ಸುಮಾರು 22 ವರ್ಷಗಳಿಂದ ವೈದಿಕಪ್ರಯೋಗ, ಆಗಮ, ಉಪಾಸನೆ ಇವುಗಳಿಗೆ ಸಂಬಂಧಿಸಿದ ಆಧಾರಭೂತವಾದ ಕೃತಿಗಳ ಪ್ರಕಾಶನದಲ್ಲಿ ಶಿಬಿರಂಗ ಪ್ರಕಾಶನವು ನಿರತವಾಗಿದೆ. ಲುಪ್ತವಾಗುತ್ತಿದ್ದ ಹಾಗೂ ಕೆಲವೇ ಕೆಲವರಲ್ಲಿ ಉಳಿದಿದ್ದ ಅಥವಾ ಕನ್ನಡೇತರ ಭಾಷೆಗಳಿಗಷ್ಟೇ ಸೀಮಿತವಾಗಿದ್ದ, ಸಂಸ್ಕøತ ಪ್ರಯೋಗಾದಿ ಸಾಹಿತ್ಯಗಳನ್ನು ಶ್ರಮ ವಹಿಸಿ, ಹಸ್ತ ಪ್ರತಿ, ಮೂಲ ಗ್ರಂಥ ಸಂಪಾದನೆ ಮಾಡಿ, ಪರಿಷ್ಕರಿಸಿ, ಪರಿಣತ ವಿದ್ವಾಂಸರುಗಳಿಂದ ಪರಿಶೋಧಿಸಿ, ಇಂದಿನ ಕಾಲಕ್ಕೆ ಅವಶ್ಯಕವಾದಂತಹ ರೀತಿಯಲ್ಲಿ ಸಂಗ್ರಹಿಸಿ, ಇಲ್ಲಿಯವರೆಗೆ 100 ಕೃತಿಗಳನ್ನು ಪ್ರಕಾಶನದ ವತಿಯಿಂದ ಪ್ರಕಟಿಸಲಾಗಿದೆ. ಪ್ರಾಯಃ ಬೇರೇ ಯಾವುದೇ ಭಾಷೆಯಲ್ಲಿ ಈ ಮಟ್ಟಿನ ಪರಿಶೋಧ ಮತ್ತು ಪ್ರಕಟಣಾ ಕಾರ್ಯಗಳು ನಡೆದಿಲ್ಲವೆಂದರೂ ಅತಿಶಯೋಕ್ತಿಯಾಗಲಾರದು! ಈ ಪ್ರಯೋಗ ಸಾಹಿತ್ಯಗಳನ್ನು ಉಪಯೋಗಿಸುವವರು ಒಂದು ಸೀಮಿತ ವರ್ಗದವರಾದರೆ, ಇಡಿಯ ವೈದಿಕ ಕ್ರಿಯಾ ಕಲಾಪಗಳನ್ನು ಆಶ್ರಯಿಸಿರುವ ವರ್ಗವೆಲ್ಲವೂ ಇದರ ಫಲಾನುಭವಿಗಳೇ ಆಗಿರುತ್ತಾರೆ. ಹಾಗಾಗಿ, ಇದೊಂದು ಅತ್ಯಂತ ಪ್ರಸ್ತುತವಾದ ಕಾರ್ಯ, ಜೊತೆಜೊತೆಗೆ ಈ ಪ್ರಕಟಣೆಯ ಪ್ರಕ್ರಿಯೆಯಿಂದ ಮುಂದಿನ ಪೀಳಿಗೆಗೆ ಈ ಸಾಹಿತ್ಯವನ್ನು ಪ್ರವಹಿಸುವ ಕಾರ್ಯವೂ ಸಾರ್ಥಕವಾಗಿ ನೆರವೇರುತ್ತಿದೆ.


ಉಪಾಸನಾನುಕೂಲಕ್ಕೆ ಸುಮಾರು 25ಕ್ಕೂ ಹೆಚ್ಚು ಕೃತಿಗಳು, ಪ್ರಯೋಗ ವಿಧಿಗಳಿಗೆ ಸಂಬಂಧಿಸಿದ ಸುಮಾರು 25 ಕೃತಿಗಳು, ಆಗಮ ವಿಧಿಗಳಿಗೆ ಪೂರಕವಾದ 10 ಪುಸ್ತಕಗಳು, ಜ್ಯೋತಿಷಕ್ಕೆ ಸಂಬಂಧಿಸಿದ ಮೂರು ಪುಸ್ತಕ, 35ರಷ್ಟು ಪೂಜಾ ವಿಧಿ-ಶಾಂತಿ-ಇತ್ಯಾದಿಗಳಿಗೆ ಸೌಕರ್ಯ ಕಲ್ಪಿಸುವ ಪುಸ್ತಕಗಳು ಈವರೆವಿಗೆ ಪ್ರಕಟಗೊಂಡಿವೆ. ಎಲ್ಲ ಪುಸ್ತಕಗಳಲ್ಲಿ ನಿರೂಪಿತವಾಗಿರುವ ವಿಷಯ ವಿಚಾರಗಳೂ ಆಯಾ ಕ್ಷೇತ್ರದ ನುರಿತ ವಿದ್ವಾಂಸರ ಸಲಹೆ ಸಹಕಾರಗಳಿಂದ, ಶಾಸ್ತ್ರೀಯವಾಗಿ, ಸುಲಭ ಉಪಯೋಗಿಯಾಗಿ ಒಡಮೂಡಿವೆ. ಕರ್ನಾಟಕದಾದ್ಯಂತ ಹಾಗೂ ಕನ್ನಡಲಿಪಿಯ ಜ್ಞಾನಹೊಂದಿರುವ ದೇಶ ವಿದೇಶೀಯರೂ ಪ್ರಕಾಶನದ ಕೃತಿಗಳನ್ನು ಆಶ್ರಯಿಸಿರುತ್ತಾರೆ. ಅನೇಕ ಕೃತಿಗಳು ಪ್ರಕಟಣೆಯಾದ ಐದಾರು ತಿಂಗಳಲ್ಲಿ ಮರುಮುದ್ರಣವನ್ನು ಕಂಡಿರುವುದೂ ಕೃತಿಗಳ ಮೌಲ್ಯ ಮತ್ತು ಅವಶ್ಯಕತೆಯನ್ನು ಹೆಚ್ಚಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم