ಪುತ್ತೂರು: ಸಮಯದ ಮೌಲ್ಯದ ಅರಿವಿರಬೇಕು. ವಿದ್ಯಾರ್ಥಿಗಳು ಸಮಯದ ಸೂಕ್ತ ಬಳಕೆ ಮಾಡಿಕೊಂಡು ಮುನ್ನಡೆಯಬೇಕು. ಸಮಯ ನಮ್ಮನ್ನು ಆಳುವಂತಾಗಬಾರದು. ವಿದ್ಯಾರ್ಥಿಗಳಾಗಿದ್ದುಕೊಂಡು ಮುಂಬರುವ ವೃತ್ತಿ ಜೀವನಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕ ಕಿಶನ್. ಎನ್ ರಾವ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಐ ಯ್ಯಾಮ್ ಎ ಪಬ್ಲಿಕ್ ಸ್ಪೀಕರ್’ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಭಿವ್ಯಕ್ತಿಗೆ ಭಾಷೆಯ ಮಿತಿ ಇಲ್ಲ. ಮಾತು ಭಾಷೆಗೆ ಬಲಿಯಾಗಬಾರದು. ತಮ್ಮಲ್ಲಿರುವ ಕಲೆಯನ್ನು ಅನಾವರಣಗೊಳಿಸಲು ಹಿಂಜರಿಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ವಿಷಯದ ಮೂಲ ಮುಖ್ಯವಲ್ಲ, ಅದರಿಂದ ದೊರೆತ ಮೌಲ್ಯಗಳು ಉತ್ತಮವಾಗಿದ್ದರೆ ಅದನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡಾಗ ಒಂದಷ್ಟು ಹೊಸ ಪ್ರತಿಭೆಗಳು ಚಿಗುರೊಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ರಚನಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಿಖಿಲಾ, ಜೀವಿತ, ಶೀತಲ್ ಪ್ರಾರ್ಥಿಸಿ, ವಿದ್ಯಾರ್ಥಿ ಯತೀಶ್ ಬಿ.ಎ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರಾವ್ಯ ಎಂ.ಎಸ್ ವಂದಿಸಿ, ಪ್ರತೀಕ್ಷಾ ಬಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ