ಮೂಡುಬಿದಿರೆ: ಯಾವಾಗ ನಾವು ಕಲಿತ ಜ್ಞಾನ ಸಮಾಜಕ್ಕೆ ಕೊಡುಗೆಯಾಗಬಲ್ಲದೊ, ಆ ಜ್ಞಾನ ಶ್ರೇಷ್ಠ ಜ್ಞಾನ ಎನಿಸಿಕೊಳ್ಳುತ್ತದೆ ಎಂದು ಎನ್ಐಟಿಕೆ ಸುರತ್ಕಲ್ನ ಮ್ಯಾಕನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ ಸತ್ಯಭಾಮಾ ನುಡಿದರು.
ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಇನ್ಸ್ಟಿಟ್ಯೂಷನ್ಸ್ ಇನ್ನೊವೇಶನ್ ಕೌನ್ಸಿಲ್ನ ಸಹಯೋಗದಲ್ಲಿ ಗುರುವಾರ ಎಂಬಿಎ ಸಭಾಂಗಣದಲ್ಲಿ ನಡೆದ ‘ಸ್ಟೂಡೆಂಟ್ಸ್ ಇನ್ನೊವೇಶನ್ ಕಾಂಪಿಟೇಶನ್-2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಜ್ಞಾನ ರೈತರಿಗೆ, ಸಮಾಜಕ್ಕೆ, ಕೈಗಾರಿಕೆಗಳಿಗೆ ಉಪಯೋಗವಾಗಬೇಕು. ನಮ್ಮಲ್ಲಿ ಸಮಾಜದೆಡೆಗಿನ ಕಾಳಜಿ ಇಂತಹ ಜ್ಞಾನದ ಶೇಖರಣೆಯನ್ನು ಹೆಚ್ಚು ಹೆಚ್ಚು ಮಾಡಬಲ್ಲದು. ಕಲಿಕೆಯಲ್ಲಿ ಆಸಕ್ತಿ ಮುಖ್ಯ. ಆಪ್ತತೆಯ ಕಲಿಕೆ ಹೆಚ್ಚು ಮನದಟ್ಟಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸಬಲ್ಲದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಮನುಷ್ಯನ ಕಲಿಕೆ ನಿರಂತರವಾಗಿರಬೇಕು. ಔಪಚಾರಿಕ ಶಿಕ್ಷಣ ಮುಗಿದ ತಕ್ಷಣ ಕಲಿಕೆ ಸ್ಥಗಿತವಾಗಬಾರದು. ನಾವು ಹುಟ್ಟಿನಿಂದ ಬದುಕಿನ ಅಂತ್ಯದವರೆಗೂ ಸೋಲು-ಗೆಲುವುಗಳನ್ನು ಅನುಭವಿಸುತ್ತಾ ಸಾಗಿದಾಗ ಮಾತ್ರ ವ್ಯಕ್ತಿ ಉತ್ತಮವಾದ ಸ್ಥಾನಕ್ಕೆ ಏರಲು ಸಾಧ್ಯ ಎಂದು ಹೇಳಿದರು.
ಸಿವಿಲ್, ಮ್ಯಾಕ್ಯನಿಕಲ್, ಕಂಪ್ಯೂಟರ್ ಸೈನ್ಸ್, ಇನ್ಫೋಮೇಶನ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಮೇಶಿನ್ ಲರ್ನಿಂಗ್ ವಿಭಾಗಗಳ ಒಟ್ಟು 80 ಪ್ರೋಜೆಕ್ಟ್ಗಳ ಪ್ರದರ್ಶನ ಹಾಗೂ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು.
ಮಣ್ಣಿನ ತೇವಾಂಶ ಮತ್ತು ಹವಾಮಾನ ಮುನ್ಸೂಚನೆಯನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ನೀರಾವರಿ ವ್ಯವಸ್ಥೆ, ರಕ್ತ ದಾನಿಗಳು ಹಾಗೂ ಸ್ವೀಕರಿಸುವವರಿಗಾಗಿ ಆಂಡ್ರೈಡ್ ಅಫ್ಲಿಕೇಶನ್ ಬಳಸಿ ದಾನಿಗಳ ಹುಡುಕಾಟ, ಲೈವ್ ಟ್ರ್ಯಾಕಿಂಗ್ ಯಂತ್ರ, ತ್ಯಾಜ್ಯ ಪ್ಲಾಸ್ಟಿಕ್ ಬಳಸಿ ಪಾಲಿಮರ್ ಕಾಂಪೋಸಿಟ್ ಬ್ರಿಕ್ಸ್ನ ತಯಾರಿಕೆ, ವಿದ್ಯುತ್ ಚಾಲಿತ ವಾಹನ ಮಾದರಿ ತಯಾರಿಕೆ, ನೀರಿನ ಅನ್ಯ ಮೂಲಗಳಿಗಾಗಿ ಮಂಜು ಕೊಯ್ಲು- ಇವೇ ಮುಂತಾದ ಸಮಾಜಕ್ಕೆ ಉಪಯೋಗಿ ಪ್ರೋಜೆಕ್ಟ್ಗಳ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಎನ್ಐಟಿಕೆ ಸುರತ್ಕಲ್ನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ ಪತಿಪತಿ ಶ್ರೀಹರಿ, ಡಾ. ಬಿಜು ಆರ್ ಮೋಹನ್, ದಿನೇಶ್ ನಾಯ್ಕ್, ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಅರುಣ್ ಕುಮಾರ್ ವೈ ಎಂ, ಡೀನ್ ಪ್ಲಾನಿಂಗ್ ಡಾ ದತ್ತಾತ್ರೇಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಪ್ರೊ ಸುಧೀರ್ ಶೆಟ್ಟಿ ಸ್ವಾಗತಿಸಿ, ಕಾವ್ಯ ಕುಲಕರ್ಣಿ ವಂದಿಸಿ, ಪ್ರೇನಿಟಾ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ