ವೀಣಾವಾದಿನಿ ಸಂಗೀತ ಶಿಬಿರ ಉದ್ಘಾಟನೆ
ಬದಿಯಡ್ಕ: ಪರಿಣಾಮಕಾರಿ ಕಲಿಕೆಗೆ ತರಗತಿಗಳಿಗಿಂತ ಶಿಬಿರಗಳು ಹೆಚ್ಚು ಸಹಾಯಕ. ಶಿಬಿರಗಳಲ್ಲಿ ದಿನದ ಹೆಚ್ಚಿನ ಅವಧಿ ಗುರುಗಳೊಂದಿಗೆ ಸಮಾನ ಮನಸ್ಕರ ಕೇಂದ್ರೀಕೃತ ಅಧ್ಯಯನ ಲಭ್ಯವಾಗುತ್ತದೆ. ಅಲ್ಲದೆ ಪೂರಕ ಪರಿಸರದಲ್ಲಿ ಚರ್ಚೆ ಸಂವಾದಗಳ ಮೂಲಕ ಕಲಿಕೆ ಸುಲಭವಾಗುತ್ತದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.
ಬದಿಯಡ್ಕ ಬಳಿ ನಾರಾಯಣೀಯಂ ಸಮುಚ್ಚಯದ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ದಿನಾಂಕ 24 ರ ಮಂಗಳವಾರದಿಂದ ಆರು ದಿನಗಳ ಕಾಲ ನಡೆಯುವ ಮೃದಂಗ ಮತ್ತು ಸಂಗೀತ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ವೀಣಾವಾದಿನಿ ಸಂಗೀತ ವಿದ್ಯಾಪೀಠವು ಕಾಲಕಾಲಕ್ಕೆ ವಿವಿಧ ಸಂಗೀತ ಶಿಬಿರಗಳನ್ನು ನಡೆಸುತ್ತಿದ್ದು ಗುರುಕುಲ ಮಾದರಿಯಲ್ಲಿ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ನೆರವಾಗುತ್ತಿದೆ. ಶಿಬಿರಗಳಲ್ಲಿ ಇತರ ಆಕರ್ಷಣೆಗಳಿಗೆ ಅವಕಾಶ ಇರುವುದಿಲ್ಲ ಎಂದು ಡಾ. ಪೆರ್ಲ ಹೇಳಿದರು.
ವೀಣಾವಾದಿನಿಯ ಸಂಚಾಲಕರಾದ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮಾ ಅವರು ಕೊರೋನಾ ಅವಧಿಯಲ್ಲಿ ಕಲಿಕೆ ತೃಪ್ತಿಕರವಾಗಿರಲಿಲ್ಲ. ಅದರ ಕೊರತೆಯನ್ನು ನೀಗಿಸಲು ಶಿಬಿರಗಳ ಕಡೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಶಿಬಿರದ ಗುರುಗಳಾದ ವಿದ್ವಾನ್ ಪಯ್ಯನ್ನೂರು ಗೋವಿಂದಪ್ರಸಾದ್ ಅವರು ಮಾತಾಡಿ ಭಾರತದ ಪಾರಂಪರಿಕ ಕಲೆಗಳ ಕಲಿಕೆಗೆ ಶಿಬಿರಗಳೇ ಹೆಚ್ಚು ಉಪಯುಕ್ತ. ಗುರುಗಳ ಜೊತೆಗೆ ಇದ್ದು ಕಲಿತಾಗ ಹಲವು ಸೂಕ್ಷ್ಮ ಸಂಗತಿಗಳು ಗೊತ್ತಾಗುತ್ತವೆ ಎಂದರು.
ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರೂ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ