ಮಂಗಳೂರು: ಅಂತಾರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ಡಾ. ಮಚ್ಚೇಂದ್ರನಾಥ್ ಮಂಗಳಾದೇವಿ ಅವರ ಪ್ರಥಮ ಸಂಸ್ಮರಣೆ ಹಾಗೂ ಅವರ ಶಿಷ್ಯವೃಂದದಿAದ ಸ್ಯಾಕ್ಸೋಫೋನ್ ಗಾನ ನಮನ ಕಾರ್ಯಕ್ರಮ ಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಿ, ಡಾ. ಮಚ್ಚೇಂದ್ರನಾಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಡಾ. ಮಚ್ಚೇಂದ್ರನಾಥ ಅವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ತನ್ನ ಕಾರ್ಯವೈಖರಿ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಆವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ. ರಮಾನಾಥ ಹೆಗ್ಡೆ, ಮಾಜಿ ಮೇಯರ್ ಹರಿನಾಥ ಜೋಗಿ, ಕದ್ರಿ ದೇವಸ್ಥಾನದ ಮೊಕ್ತೇಸರರಾದ ಎಚ್. ಕೆ ಪುರುಷೋತ್ತಮ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಡಾ. ಮಚ್ಚೇಂದ್ರನಾಥ್ ಅವರ ಮಕ್ಕಳಾದ ಲಕ್ಷ್ಮೀಚರಣ್, ಸಿಂಧೂ ಭೈರವಿ ಮತ್ತು ಅಳಿಯ ಅವಿತ್ ಆನಂದ್ ಉಪಸ್ಥಿತರಿದ್ದರು. ವಿನಯಾನಂದ ಕಾನಡ್ಕ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಭಜನಾ ಕಾರ್ಯಕ್ರಮ ಹಾಗೂ ಡಾ. ಮಚ್ಚೇಂದ್ರನಾಥ್ ಮಂಗಳಾದೇವಿ ಅವರ ಶಿಷ್ಯರಿಂದ ಸ್ಯಾಕ್ಸೋಫೋನ್ ಗಾನ ನಮನ ಕಾರ್ಯಕ್ರಮ ಜರುಗಿತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment