ಅದ್ವೈತ ಸಿದ್ಧಾಂತ ಸಾರಿದರು ಶಂಕರರು
ಭಾರತದ ಎಲ್ಲಕಡೆ ಸಂಚರಿಸುತ|
ಸದ್ವಿದ್ಯೆ ಸಾಧಕರು ಸುಜ್ಞಾನ ಕಲ್ಪತರು
ಆತ್ರೇಯ ಗೋತ್ರಜರು ಶಿವಗುರುಸುತ||
ವಿಭವಸಂವತ್ಸರದೆ ಜನಿಸಿದರು ಗುರುವರ್ಯ
ಆರ್ಯಾಂಬೆ ಗರ್ಭಸಂಜಾತರಿವರು|
ಪ್ರಭೆಯುತುಂಬಿದ ಮೂರ್ತಿ ಅಧ್ಯಾತ್ಮ ಚಿಂತಕರು
ಬಾಲ್ಯದಲೆ ಸಂನ್ಯಾಸ ಹೊಂದಿದವರು||
ಗುರುವು ಗೋವಿಂದಭಗವತ್ಪಾದರನು ಕಂಡು
ಶಿಷ್ಯತ್ವ ಸ್ವೀಕರಿಸಿ ಕಲಿತರಿವರು|
ಪರಮವೇದದ ಸಾರ ಲೋಕಕ್ಕೆ ತಿಳಿಸಿದರು
ಯೋಗ, ವೇದಾಂತಕ್ಕೆ ಶರಣಾದರು||
ಬಹುಸಂಖ್ಯೆ ಅನುಯಾಯಿಗಳ ಪಡೆದ ಶಂಕರರು
ಕೀರ್ತಿಯನು ಗಳಿಸುತ್ತ ಗುರುವಾದರು|
ಮಹನೀಯ ಶ್ರೇಷ್ಠಗುರು ಬ್ರಹ್ಮಸೂತ್ರಕೆ ಭಾಷ್ಯ
ಬರೆದವರು ಅತ್ಯಂತ ಪ್ರಖ್ಯಾತರು||
ಮಂಡನಾಮಿಶ್ರರನು, ಶಾಸ್ತ್ರವೇತ್ತರ ಜಯಿಸಿ
ಸರ್ವಜ್ಞ ಪೀಠವನು ಏರಿದವರು|
ದಂಡವನು ಹಿಡಿಯುತ್ತ ಶಿಷ್ಯರಿಗೆ ಬೋಧಿಸುತ
ಅಧ್ಯಾತ್ಮ ತತ್ತ್ವವನು ಸಾರಿದವರು||
ನನ್ನೊಳಿಹ ಆತ್ಮವೇ ಪರಮಾತ್ಮ ಎಂದೆನುತ
ಅದ್ವೈತ ಸಾರಾಂಶ ಅರುಹಿದವರು|
ಉನ್ನತರು ಆಚಾರ್ಯ, ತಾತ್ತ್ವಿಕದ ನೆಲೆಗಟ್ಟು
ಒದಗಿಸುತ ದರ್ಶನವ ತೋರಿದವರು||
(ಪಂಚಮಾತ್ರಾಗಣ ಛಂದಸ್ಸು)
ಅಶ್ವತ್ಥನಾರಾಯಣ, ಮೈಸೂರು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ