|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೇ 15ರಂದು ಬೆಂಗ್ಳೂರು ತುಳು ಪರ್ಬ- 2022

ಮೇ 15ರಂದು ಬೆಂಗ್ಳೂರು ತುಳು ಪರ್ಬ- 2022

ತುಳುವೆರೆಂಕುಲು ಬೆಂಗಳೂರು 30ನೇ ವಾರ್ಷಿಕೋತ್ಸವ



ಬೆಂಗಳೂರು: ಬೆಂಗಳೂರಿನ ಪ್ರಮುಖ ತುಳು ಸಂಘಟನೆ ಕಳೆದ ಬಾರಿ "ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ" ಪ್ರತಿಷ್ಠಿತ ಸಂಘಟನಾ ಪ್ರಶಸ್ತಿ ಪಡೆದ "ತುಳುವೆರೆಂಕುಲು ಬೆಂಗಳೂರು (ರಿ.) "ಇದರ 30 ನೇ ವಾರ್ಷಿಕೋತ್ಸವ ಸಂಭ್ರಮ "ಬೆಂಗಳೂರು ತುಳು ಪರ್ಬ -2022" ಸಾಂಸ್ಕೃತಿಕ ಕಾರ್ಯಕ್ರಮವು ಮೇ 15 ರ ರವಿವಾರದಂದು ಮುಂಜಾನೆ ಗಂ 9.30 ರಿಂದ ರಾತ್ರಿ ಗಂ 8.30ರ ತನಕ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಧರ್ಮಸ್ಥಳದ ಡಾ. ಹೇಮಾವತಿ ಹೆಗ್ಗಡೆ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ, ವಿ. ಸುನೀಲ್ ಕುಮಾರ್, ಸೇರಿದಂತೆ ಡಿ.ಸುರೇಂದ್ರ ಕುಮಾರ್, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ತುಳು-ಕನ್ನಡ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಘಟಕ ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಪ್ರೊ.ಕಬಡ್ಡಿ ತಾರೆ ಪ್ರಶಾಂತ್ ರೈ ಕೈಕಾರ, ಹಾಗೂ ಇನ್ನೂ ಹಲವಾರು ಗಣ್ಯಾತಿಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.


ಮಾತ್ರವಲ್ಲದೆ ದೇಶ ವಿದೇಶದಲ್ಲಿರುವ ಸಾಂಸ್ಕೃತಿಕ, ಕ್ರೀಡೆ, ಸಿನೆಮಾ, ರಾಜಕೀಯ, ಸಾಮಾಜಿಕ ಕ್ಷೇತ್ರದ ಸಾಧಕ ಗಣ್ಯರು ಬೆಂಗಳೂರಿನ ವಿವಿಧ ತುಳು- ಕನ್ನಡ ಸಂಘಟನೆ ಪದಾಧಿಕಾರಿಗಳು, ಈ ತುಳು ಸಾಂಸ್ಕೃತಿಕ ಸಂಭ್ರಮದಲ್ಲಿ ಭಾಗವಹಿಸಲಿರುವರು.


ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಸು ಆಚರಣೆ ಜರಗಲಿದೆ. ತುಳು ಸಮುದಾಯಕ್ಕೆ ಹೆಮ್ಮೆ ಘನತೆ ತಂದ  ವಿಶೇಷ ಸಾಧಕರುಗಳಿಗೆ ಪ್ರತಿಷ್ಠಿತ ವಾರ್ಷಿಕ "ಬಲಿಯೇಂದ್ರ ಪುರಸ್ಕಾರ" ಹಾಗೂ ವಿವಿಧ ಕ್ಷೇತ್ರದ ಯುವ ಸಾಧಕರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ವಿಶೇಷ ಪುರಸ್ಕಾರ ನಡೆಯಲಿದೆ.


ಖ್ಯಾತ ಹಿನ್ನೆಲೆ ಗಾಯಕ ಡಾ. ರಮೇಶ್ಚಂದ್ರ, ನೀನಾಸಂ ಸದಾಶಿವ ರೈ, ಡಾ. ರಾಧಿಕಾ ಕಲ್ಲೂರಾಯ, ಕಾರ್ತಿಕ್ ಬಿ. ಶೆಟ್ಟಿ, ಅರ್ಜುನ್ ಕೊರ್ಡೇಲ್ ಮುಂತಾದ ತಾರಾ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ - ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಡಾ. ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆಯ ತುಳು ಹಾಸ್ಯ ನಾಟಕ "ಕೃಷ್ಣ ಸಂಧಾನೋ" ಪ್ರದರ್ಶನ ಗೊಳ್ಳಲಿದೆ.


ನಮ್ಮ ಭಾಷೆ, ಸಂಸ್ಕೃತಿ, ಕಲೆ, ಕ್ರೀಡೆ, ಸಾಹಿತ್ಯ, ಆಚಾರ ವಿಚಾರಗಳು ನವ ಪೀಳಿಗೆಯ ಯುವ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಲಾಭಿಮಾನಿಗಳೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಶ್ರೇಯಸ್ಸಿಗೆ ಪಾತ್ರರಾಗಬೇಕಾಗಿ ತುಳುವೆರೆಂಕುಲು ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ವೈ. ಜಯಂತ್ ರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಪಳ್ಳಿ ವಿಶ್ವನಾಥ ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post