|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೇವಾ ಸೌಧ. ಹಾಗೆಂದರೇನು?

ಸೇವಾ ಸೌಧ. ಹಾಗೆಂದರೇನು?


ಮಿತ್ರರೊಬ್ಬರು ದೂರವಾಣಿಸಿ ನನ್ನಲ್ಲಿ ಮೇಲಿನ ಪ್ರಶ್ನೆಯನ್ನು ಕೇಳಿದರು. ನನಗೆ ಆಶ್ಚರ್ಯವೂ ಆಯಿತು. ಒಟ್ಟಿಗೆ ಸಂತೋಷವೂ ಆಯಿತು. ಶ್ರೀಮಠದ ಆಡಳಿತ, ಮಹಾ ಮಂಡಲದಿಂದ ಸುರುವಾಗಿ ಮಂಡಲ, ವಲಯ, ಗುರಿಕಾರರು, ಘಟಕಗಳು, ಶ್ರೀ ಕಾರ್ಯಕರ್ತರಿಂದ ಕೊನೆಗೊಂಡು ಎಲ್ಲಾ ಶಿಷ್ಯವರ್ಗಕ್ಕೆ ವಿಷಯಗಳನ್ನು ತಲುಪಿಸುವ ವ್ಯವಸ್ಥೆ. ಇಷ್ಟು ವ್ಯವಸ್ಥಿತವಾದ ಆಡಳಿತವಿದ್ದರೂ ಸೇವಾ ಸೌಧದ ಬಗ್ಗೆ ಗೊತ್ತಿಲ್ಲದೆ ಇರುವುದು ಆಶ್ಚರ್ಯದ ಸಂಗತಿ. ಗೊತ್ತಿಲ್ಲದ ವಿಷಯವನ್ನು ತಿಳಿಯುವ ಕುತೂಹಲ ಬಂದುದು ಸಂತೋಷದ ಸಂಗತಿ.


ಅವರು ಕೇಳಿದ ಮೇಲೆ ನನಗೆ ಗೊತ್ತಿರುವ ಉತ್ತರವನ್ನು ತಿಳಿಸುವುದು ನನ್ನ ಧರ್ಮವೆಂದು ಅವರಿಗೆ ಈ ರೀತಿ ವಿವರಿಸಿದೆ.


ರಾಮಚಂದ್ರಾಪುರದ ಮಠ ಆರಂಭವಾದುದು ಗೋಕರ್ಣದ ಅಶೋಕೆಯಲ್ಲಿ. ಕಾರಣಾಂತರಗಳಿಂದ ಸ್ಥಾನಾಂತರಗೊಂಡು ಈಗಿನ ಹೊಸನಗರದ ರಾಮಚಂದ್ರಾಪುರದಲ್ಲಿ  ನೆಲೆನಿಂತಿದೆ. ಕಾಲಚಕ್ರ ಉರುಳಿದಂತೆ ನಮ್ಮ ಅರಿವಿಗೆ ಬಾರದೆ ಇರುವ ಅನೇಕ ಸಂಗತಿಗಳು ಆಗಿಹೋಗುತ್ತವೆ. ಅಂತೆಯೇ ಮೂಲ ಮಠದ ಜಾಗ ಮತ್ತೆ ಪುನಃ ರಾಮಚಂದ್ರಾಪುರ ಮಠದ ಸುಪರ್ದಿಗೆ ಬಂತು. ಕೆಲವು ವರುಷಗಳ ಹಿಂದೆ ಮೂಲಮಠ ಮರುಸ್ಥಾಪನೆಗೋಸ್ಕರ ಶಿಷ್ಯವರ್ಗ ಸಮರ್ಪಿಸಿದ ದ್ರವ್ಯದಿಂದ ಮಠದ ಕಟ್ಟಡವೊಂದು ಎದ್ದುನಿಂತಿತು. ನಮ್ಮ ಸಂಸ್ಕೃತಿ ಸಂಸ್ಕಾರ ಭಾರತೀಯತೆ ಉಳಿಯಬೇಕಾದರೆ ವಿದ್ಯಾಭ್ಯಾಸ ಪದ್ಧತಿ ಬದಲಾಗಲೇಬೇಕು ಎಂಬ ಆಶಯದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂಬ ಸಂಸ್ಥೆಯನ್ನು ಗುರುಗಳು ಯೋಜಿಸಿ ಅನುಷ್ಠಾನಿಸಿದರು. ಮೂಲ ಮಠವೆಂದು ಆರಂಭಿಸಿದ ಕಟ್ಟಡವನ್ನು ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ಆಡಳಿತ ಕಛೇರಿಯಾಗಿ ಸಮರ್ಪಿಸಿದರು. ಇಂದು ಅದು ಭಾರತಿ ಸೌಧ ಎಂಬ ಹೆಸರಿನಿಂದ  ಕಂಗೊಳಿಸುತ್ತಿದೆ.


ಆದರೆ ಶ್ರೀಗುರುಗಳಿಗೆ ಇಂದು ನಿತ್ಯ ಅನುಷ್ಠಾನಕ್ಕೆ, ವಾಸಕ್ಕೆ ಸೂಕ್ತ ಸ್ಥಳದ ಕೊರತೆ ಇರುವ ಕಾರಣ ಇಂದು ಶಿಷ್ಯರೊಬ್ಬರ ಮನೆಯಲ್ಲಿ ವಾಸವಾಗಿ ಅನುಷ್ಠಾನವನ್ನು ಕೈಗೊಳ್ಳುತ್ತಿದ್ದಾರೆ. ಮಠದ ಜಾಗವಿದ್ದೂ, ಶಿಷ್ಯಕೋಟಿ ಗಳಿದ್ದೂ ಗುರುಗಳಿಗೆ ವಾಸಕ್ಕೊಂದು ನೆಲೆಯನ್ನು ಕಲ್ಪಿಸಿಕೊಡುವುದು ಶಿಷ್ಯ ಕೋಟಿಗಳ ಕರ್ತವ್ಯ. ಪ್ರತಿಯೊಬ್ಬ ಶಿಷ್ಯನ ಮನಃಪೂರ್ವಕ ಸೇವೆಯಿಂದ ಎದ್ದು ನಿಲ್ಲಬೇಕಾದ ಸೌಧವೇ ಸೇವಾ ಸೌಧ.


ದೇವರ ಪೂಜೆಗೊಂದು ಪೂಜಾ ಮನೆ, ಶ್ರೀಕರಾರ್ಚಿತ ಪೂಜೆಯನ್ನು ವೀಕ್ಷಿಸಿ ಮನಸ್ಸು ಪಾವನ ಮಾಡಿಕೊಳ್ಳುವ ಭಕ್ತರಿಗಾಗಿ ವೀಕ್ಷಣಾ ಕೊಠಡಿ, ಭಾರತೀಯ ಕೃಷಿಗೆ ಮೂಲವಾದ ಸರ್ವ ಭೋಜನಕಿಂತ ಮೊದಲು ಗ್ರಾಸ ಸಮರ್ಪಿಸಲು ಮಾತೆಗೊಂದು ಗೋಶಾಲೆ, ಶ್ರೀಗಳವರ ನಿತ್ಯಾನುಷ್ಠಾನದ ಸಹಕಾರದಲ್ಲಿ ಸೇರಿಕೊಳ್ಳುವ ಪರಿವಾರದ ವಸತಿ ವ್ಯವಸ್ಥೆ, ನೂತನ ವಿಶ್ವವಿದ್ಯಾ ಪೀಠದ ಕುಲಪತಿಗಳು ಗುರುಗಳೇ ಆದಕಾರಣ ಕುಲಪತಿಗಳ ಕಾರ್ಯಾಲಯವನ್ನು ಒಳಗೊಂಡ ಸಮುಚ್ಛಯವೇ ಸೇವಾ ಸೌಧ.


ರಾಷ್ಟ್ರಕ್ಕೆ ರಾಜಧಾನಿ ಇದ್ದಂತೆ, ಕೃಷಿ ಭೂಮಿಗೊಂದು ಮನೆ ಇದ್ದಂತೆ, ದೇಹಕ್ಕೆ ಹೃದಯವಿದ್ದಂತೆ, ಮೂಲ ಮಟ್ಟದ ಕೇಂದ್ರವೇ ಸೇವಾ ಸೌಧ. ವಿಶ್ವ ವಿದ್ಯಾಪೀಠದ ಹೃದಯವೇ ಸೇವಾ ಸೌಧ.


ಹವ್ಯಕರು ನಾವು ಎಂದೆನಿಸಿಕೊಳ್ಳಲು ನಮಗೆ ಬಲು ಅಭಿಮಾನ. ರಾಮಚಂದ್ರಾಪುರ ಮಠದ ಶಿಷ್ಯವರ್ಗ ನಾವು ಎಂದೆನಿಸಿಕೊಳ್ಳಲು ಅಭಿಮಾನ. ಯಾವ ಊರಿಗೆ ಹೋಗಲಿ ಹವ್ಯಕರು ಇದ್ದಲ್ಲಿ ಸಂಸ್ಕೃತಿ ಸಂಸ್ಕಾರಗಳು ಒಂದೇ ರೀತಿ ಇವೆ. ಇಂತಹ ಒಂದು ಅದ್ಭುತ ಸಂಸ್ಕಾರವನ್ನು ಕೊಟ್ಟ ಗುರುಪರಂಪರೆಗೆ ನಾವು ಕೊಡುವ ಗುರುದಕ್ಷಿಣೆ ಸೇವಾ ಸೌಧದ ರೂಪದಲ್ಲಿ ಎದ್ದು ಬರಲಿ ಎಂಬುದು ಆಶಯ. ಶಿಷ್ಯ ವರ್ಗದವರೆಲ್ಲರೂ ಈ ಸೇವಾಕಾರ್ಯದಲ್ಲಿ ಭಾಗಿಗಳಾಗಿ ಎಂಬುದೇ ವಿನಂತಿ.


ಹರೇ ರಾಮ.

-ಎ. ಪಿ. ಸದಾಶಿವ ಮರಿಕೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post