ಉಜಿರೆ: ಶ್ರೀ ಧ. ಮಂ. ಕಾಲೇಜ್ ನ ಯಕ್ಷಗಾನ ತಂಡವು ಇತ್ತೀಚೆಗೆ ಸುರತ್ಕಲ್ ನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಗರಿಮೆಗೆ ಪಾತ್ರವಾಗಿದೆ. ಇತ್ತೀಚೆಗೆ ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲೂ ಇದೇ ತಂಡ ದ್ವಿತೀಯ ಬಹುಮಾನ ಗಳಿಸಿತ್ತು.
ಗೋವಿಂದ ದಾಸ್ ಕಾಲೇಜ್ ಸುರತ್ಕಲ್ 'ಯಕ್ಷಯಾನ- 2022'ನ್ನು ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ಒಟ್ಟು 13 ತಂಡಗಳು ಭಾಗವಹಿಸಿದ್ದು ಎಸ್.ಡಿ.ಎಂ ಕಾಲೇಜು 'ಸುದರ್ಶನ ವಿಜಯ' ಪ್ರಸಂಗವನ್ನು ಪ್ರದರ್ಶಿಸಿ ಸಮಗ್ರ ತಂಡ ಪ್ರಶಸ್ತಿ ಪ್ರಥಮ ಮತ್ತು ಸಮಗ್ರ ವೈಯಕ್ತಿಕ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ. ತಂಡದ ಸುದರ್ಶನ ಪಾತ್ರಧಾರಿ ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಶ್ರೀಶಾ ನಾರಾಯಣ ಜಿ ಹೆಗ್ಡೆ 132 ಸ್ಪರ್ಧಾರ್ಥಿಗಳಲ್ಲಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಈ ಪ್ರಸಂಗದಲ್ಲಿ ಹಿಮ್ಮೇಳ ಭಾಗವತರಾಗಿ ಶ್ರೀನಿವಾಸ ಬಳ್ಳಮಂಜ, ಚೆಂಡೆಯಲ್ಲಿ ಆನಂದ ಗುಡಿಗಾರ್, ಮದ್ದಳೆ ಶ್ರೇಯಸ್ ಪಾಳಂದೆ ಹಾಗೂ ಚಕ್ರ ತಾಳದಲ್ಲಿ ಆದಿತ್ಯ ಹೊಳ್ಳ ಸಹಕರಿಸಿದ್ದರು. ಮುಮ್ಮೇಳದಲ್ಲಿ ದೇವೇಂದ್ರನಾಗಿ ಪರೀಕ್ಷಿತ್ ಗೋಖಲೆ, ದೇವೇಂದ್ರ ಬಲರಾಗಿ ಮೋನಿಷಾ ಕೆ. ಎಲ್, ಮತ್ತು ಸೌಜನ್ಯ, ಶತ್ರುಪ್ರಸೂದನನಾಗಿ ಸುದಿತ್ ಆಚಾರ್ಯ, ರಾಕ್ಷಸರಾಗಿ ಸೌರವ್ ಹಾಗೂ ಪ್ರಜ್ಞಾ, ವಿಷ್ಣುವಾಗಿ ರೂಪೇಶ್ ಆಚಾರ್ಯ, ಲಕ್ಷ್ಮಿಯಾಗಿ ದೀಪಾ ಹೊಳ್ಳ, ಹಾಸ್ಯಗಾರನಾಗಿ ಸುಬ್ರಮಣ್ಯ ಅಭಿನಯಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಯಶವಂತ್ ಬೆಳ್ತಂಗಡಿ, ತಂಡದ ಮುಖವರ್ಜಿ ಮುಖೇಶ್ ದೇವಾಧರ್ ವಹಿಸಿಕೊಂಡಿದ್ದರು.
ತಂಡದ ಈ ಸಾಧನೆಗೆ ಪ್ರಾಂಶುಪಾಲರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ