ಮೂಡುಬಿದಿರೆ: ಹಿಂದಿನ ಕಾಲಘಟ್ಟದಲ್ಲಿ ಜ್ಞಾನ ಹೆಚ್ಚೆಂದರೆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಪ್ರಸ್ತುತ ಜ್ಞಾನದ ವಿಸ್ತರಣೆ ಎಲ್ಲಾ ಕಡೆ ಹರಡಿ ಇಡೀ ಜಗತ್ತು ಸಣ್ಣದಾಗಿ ತೋರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮತ್ತು ವಿಜಯವಾಣಿ ಪತ್ರಿಕೆ, ದಿಗ್ವಿಜಯ ವಾಹಿನಿಯ ಸಹಾಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ರಸ ಪ್ರಶ್ನೆ ಸ್ಪರ್ಧೆ 'ಮೆಗಾ ಕ್ವಿಜ್ - 2022' ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾರ್ಥಿಗಳು ದೇಶದ ತಿಳುವಳಿಕೆಯ ಜತೆಗೆ ಜಾಗತಿಕ ತಿಳುವಳಿಕೆಯನ್ನು ಪಡೆದುಕೊಂಡು, ಗ್ರಹಿಸಿದ ವಿಚಾರಗಳೊಂದಿಗೆ ಅದ್ಭುತವಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಭಾರತದ ಕಲ್ಪನೆ, ಕ್ರೀಡಾ ಮನೋಭಾವ, ಸೌಹಾರ್ದತೆ, ಪರಿಸರ ಸೌಂದರ್ಯ ಪ್ರಜ್ಞೆಯನ್ನು ಮೂಡಿಸಿಕೊಂಡು ಸೌಜನ್ಯಯುತ ಜ್ಞಾನವನ್ನು ಜಗತ್ತಿಗೆ ಪಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಇದರ ಸಂಚಾಲಕರಾದ ರಾಹುಲ್ ಕುಲಾಲ್ ಅವರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಯಾಗಿ ಶ್ವೇತಾಕಾರ್ತಿಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿ, ಕವನ ವಂದಿಸಿ, ನಳಿನಿ ನಿರೂಪಿಸಿದರು.
ಮೆಗಾ ಕ್ವಿಝ್ನಲ್ಲಿಉಡುಪಿ, ದಕ್ಷಿಣಕನ್ನಡ ಹಾಗೂ ಮಡಿಕೇರಿ ಭಾಗದ 63 ಕಾಲೇಜುಗಳು ಭಾಗವಹಿಸಿದ್ದವು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನವನ್ನು ಕಾರ್ಕಳದ ಎಂಪಿಎಂ ಪ್ರಥಮದರ್ಜೆ ಕಾಲೇಜು ಮುಡಿಗೇರಿಸಿಕೊಂಡರೆ, ದ್ವಿತೀಯ ಬಹುಮಾನವನ್ನು ಪುತ್ತೂರು ವಿವೇಕಾನಂದ ಕಾಲೇಜು ಪಡೆಯಿತು. ತೃತೀಯ ಸ್ಥಾನವನ್ನುಕೋಟೇಶ್ವರದ ಸರಕಾರಿ ಪ್ರಥಮದರ್ಜೆ ಕಾಲೇಜು, ಚತುರ್ಥ ಸ್ಥಾನವನ್ನು ಬಂಟ್ವಾಳದ ಸರಕಾರಿ ಪ್ರಥಮದರ್ಜೆ ಕಾಲೇಜಿನ ತಂಡ ಪಡೆದುಕೊಂಡಿತು. ಸ್ಪರ್ಧೆಯಲ್ಲಿ 4 ಸಮಾಧಾನಕರ ಬಹುಮಾನವನ್ನು ಕ್ರಮವಾಗಿ ಕೆನರಾ ಕಾಲೇಜು ಮಂಗಳೂರು, ತಿಲಕ್ ಕಾಲೇಜ್ ಮಂಗಳೂರು, ಎಂಪಿಯಂ ಕಾಲೇಜು ಕಾರ್ಕಳ, ಆಳ್ವಾಸ್ ಕಾಲೇಜು ಮೂಡುಬಿದಿರೆ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ವಿಜಯವಾಣಿ ಪತ್ರಿಕೆಯ ಮಂಗಳೂರು ಬ್ಯುರೋದ ಸ್ಥಾನಿಕ ಸಂಪಾದಕ ಸುರೇಂದ್ರ ವಾಗ್ಲೆ, ಆಟೋಮೇಷನ್ ಕ್ಲಾಡ್ಸ್ ಸೊಲ್ಯೂಶನ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಜಗದೀಶರಾಮ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ವಿಜಯವಾಣಿ ಪತ್ರಿಕೆಯ ಉಪಸಂಪಾದಕ ಮೋಹನದಾಸ್ ಮರಕ್ಕಡ ವಂದಿಸಿ, ವಿದ್ಯಾರ್ಥಿನಿ ದುರ್ಗಾಪ್ರಸನ್ನ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ