ಮರೆಯಲ್ಲಿ ನಿಲ್ಲುತ್ತ ಹೂಡಿರುವೆ ಬಾಣವನು
ತೆರೆದೆದೆಗೆ ನಾಟಿಹುದು ತಡೆಯಲಾರೆನು ರಾಮ
ಉರಿಯುತ್ತ ಕಾಯವಿದು ದಹಿಸುತಿದೆ ಮನಸನ್ನು ಇದು ನಿನಗೆ ತರವಲ್ಲವೋ |
ದೊರೆ ನೀನು ರಘುಕುಲಕೆ ಧರ್ಮವನು ಅರಿತವನು
ಪೊರೆಯುತ್ತ ಪುರಜನರ ಪರಿಪರಿಗೆ ಕಾಯ್ದವನು
ಅರಿಯಲಾರೆಯ ನೀನು ದಂಡಿಸಿದ ಕೋದಂಡ ನಿನ್ನದೇ ಅಲ್ಲವೇನು ||
ಬೇಟೆಯಾಡಲು ನಾನು ಕ್ರೂರ ಜಂತುವು ಅಲ್ಲ
ಕಾಟವನು ಕೊಡುವಂಥ ಜಾಯಮಾನವೆ ಇಲ್ಲ
ಅಟ್ಟಾಡಿಸಿಯೆ ಕೊಲುವ ಹುಲಿಯಲ್ಲ ಚರ್ಮಕ್ಕೆ ಜಿಂಕೆಯೂ ನಾನಲ್ಲವು |
ಕೆಟ್ಟ ನಾಲಗೆ ರುಚಿಗೆ ಮಾಂಸ ನನ್ನೊಳಗಿಲ್ಲ
ಸೊಟ್ಟ ಮೊಗದವ ನಾನು ರೂಪ ನನ್ನೊಳಗಿಲ್ಲ
ಬಿಟ್ಟ ಬಾಣವು ನನಗೆ ನ್ಯಾಯವನು ಕೊಟ್ಟಿಲ್ಲ ಎನ್ನುತಿದೆ ನನ್ನ ಮನಸು||
ವಾಲಿಯಲಿ ವೈರತ್ವ ನಿನಗ್ಯಾಕೊ ಶ್ರೀರಾಮ
ಎಲ್ಲಿಯದು ಕಿಷ್ಕಿಂಧೆ ಎಲ್ಲಿಯದು ಕೋಸಲವು
ಇಲ್ಲಿಯವ ಸುಗ್ರೀವ ಸಖ ನಿನಗೆ ಆದರೂ ನನ್ನಲ್ಲಿ ಹಗೆಯು ಯಾಕೋ |
ಎಲ್ಲಿದ್ದರೂ ಸೀತೆ ಹುಡುಕಿ ನಾತರುತಿದ್ದೆ
ಬಲ್ಲಿದವ ನೀನಾಗಿ ಮತ್ಯಾಕೆ ಎಡವಿದ್ದೆ
ಸೊಲ್ಲನ್ನು ಅಡಗಿಸುತ ರಾವಣಾಸುರನನ್ನು ಬಂಧಿಸಿಯು ತರುತಿದ್ದೆನು ||
ಇದ್ದರೂ ಇರಬಹುದು ಮನುಜ ಧರ್ಮವು ನಿನಗೆ ಬದ್ಧರಲ್ಲವೆ ನಾವು ವಾನರರ ಧರ್ಮಕ್ಕೆ
ಸದ್ದಾಗದಂತೆಯೇ ಅಡಗಿ ಘಾತವ ಯಾಕೆ
ಪ್ರಾಣಕ್ಕೆ ತಂದಿಟ್ಟೆಯೋ |
ಬಿದ್ದಿಹೆನು ನಾನಿಂದು ಈ ಗುಡ್ಡ ಗಾಡಿನಲಿ
ಸುದ್ದಿ ಕೇಳುತ ಮಡದಿ ಬಂದಿಹಳು ಸನಿಹದಲಿ ಎದ್ದು ಬದುಕುವ ಆಸೆ ಕಿಂಚಿತ್ತು ಎನಗಿಲ್ಲ
ಹರಿಚಿತ್ತದಂತಾಗಲಿ ||
ಏನೊಂದು ಸುಖವಿಹುದು ರಾಮ ಬಾಣಕ್ಕಿಲ್ಲಿ
ಬೇನೆ ಎಂಬುದೆ ಇಲ್ಲ ಶ್ರೀರಾಮ ಗುರಿಯಲ್ಲಿ
ನಾನೇನು ನಿನ್ನಲ್ಲಿ ಬೇಡಲಾರೆನು ರಾಮ
ನನ್ನವರ ನೋಡಿಕೊಳ್ಳೋ |
ಜನುಮವೊಂದಿದ್ದರೂ ಬದುಕು ಸಾವಿದ್ದರೂ
ಹನುಮನಂತಹ ಬಂಧು ನಿನ್ನಂಥ ದೊರೆ ಇರಲಿ
ಸನಿಹದಲಿ ಬರುತಿಹುದು ಕಾಲನದೆ ಆಜ್ಞೆಯು ಹೋಗಿ ಬರುವೆನು ರಾಮನೇ ||
*************
(ವಾರ್ಧಕ್ಯ ಷಟ್ಪದಿ)
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ