ಕವನ: ವಾಲಿಯ ದುರ್ವಿಧಿ

Upayuktha
1 minute read
0


ಮರೆಯಲ್ಲಿ ನಿಲ್ಲುತ್ತ ಹೂಡಿರುವೆ ಬಾಣವನು

ತೆರೆದೆದೆಗೆ ನಾಟಿಹುದು ತಡೆಯಲಾರೆನು ರಾಮ

ಉರಿಯುತ್ತ ಕಾಯವಿದು ದಹಿಸುತಿದೆ ಮನಸನ್ನು ಇದು ನಿನಗೆ ತರವಲ್ಲವೋ |

ದೊರೆ ನೀನು ರಘುಕುಲಕೆ ಧರ್ಮವನು ಅರಿತವನು 

ಪೊರೆಯುತ್ತ ಪುರಜನರ ಪರಿಪರಿಗೆ ಕಾಯ್ದವನು

ಅರಿಯಲಾರೆಯ ನೀನು ದಂಡಿಸಿದ ಕೋದಂಡ ನಿನ್ನದೇ ಅಲ್ಲವೇನು ||


ಬೇಟೆಯಾಡಲು ನಾನು ಕ್ರೂರ ಜಂತುವು ಅಲ್ಲ

ಕಾಟವನು ಕೊಡುವಂಥ ಜಾಯಮಾನವೆ ಇಲ್ಲ

ಅಟ್ಟಾಡಿಸಿಯೆ ಕೊಲುವ ಹುಲಿಯಲ್ಲ ಚರ್ಮಕ್ಕೆ ಜಿಂಕೆಯೂ ನಾನಲ್ಲವು |

ಕೆಟ್ಟ ನಾಲಗೆ ರುಚಿಗೆ ಮಾಂಸ ನನ್ನೊಳಗಿಲ್ಲ

ಸೊಟ್ಟ ಮೊಗದವ ನಾನು ರೂಪ ನನ್ನೊಳಗಿಲ್ಲ

ಬಿಟ್ಟ ಬಾಣವು ನನಗೆ ನ್ಯಾಯವನು ಕೊಟ್ಟಿಲ್ಲ ಎನ್ನುತಿದೆ ನನ್ನ ಮನಸು||


ವಾಲಿಯಲಿ ವೈರತ್ವ ನಿನಗ್ಯಾಕೊ ಶ್ರೀರಾಮ

ಎಲ್ಲಿಯದು ಕಿಷ್ಕಿಂಧೆ ಎಲ್ಲಿಯದು ಕೋಸಲವು 

ಇಲ್ಲಿಯವ ಸುಗ್ರೀವ ಸಖ ನಿನಗೆ ಆದರೂ ನನ್ನಲ್ಲಿ ಹಗೆಯು ಯಾಕೋ |

ಎಲ್ಲಿದ್ದರೂ ಸೀತೆ ಹುಡುಕಿ ನಾತರುತಿದ್ದೆ

ಬಲ್ಲಿದವ ನೀನಾಗಿ ಮತ್ಯಾಕೆ ಎಡವಿದ್ದೆ

ಸೊಲ್ಲನ್ನು ಅಡಗಿಸುತ ರಾವಣಾಸುರನನ್ನು ಬಂಧಿಸಿಯು ತರುತಿದ್ದೆನು ||


ಇದ್ದರೂ ಇರಬಹುದು ಮನುಜ ಧರ್ಮವು ನಿನಗೆ ಬದ್ಧರಲ್ಲವೆ ನಾವು ವಾನರರ ಧರ್ಮಕ್ಕೆ

ಸದ್ದಾಗದಂತೆಯೇ ಅಡಗಿ ಘಾತವ ಯಾಕೆ 

ಪ್ರಾಣಕ್ಕೆ ತಂದಿಟ್ಟೆಯೋ |

ಬಿದ್ದಿಹೆನು ನಾನಿಂದು ಈ ಗುಡ್ಡ ಗಾಡಿನಲಿ 

ಸುದ್ದಿ ಕೇಳುತ ಮಡದಿ ಬಂದಿಹಳು ಸನಿಹದಲಿ ಎದ್ದು ಬದುಕುವ ಆಸೆ ಕಿಂಚಿತ್ತು ಎನಗಿಲ್ಲ 

ಹರಿಚಿತ್ತದಂತಾಗಲಿ ||


ಏನೊಂದು ಸುಖವಿಹುದು ರಾಮ ಬಾಣಕ್ಕಿಲ್ಲಿ

ಬೇನೆ ಎಂಬುದೆ ಇಲ್ಲ ಶ್ರೀರಾಮ ಗುರಿಯಲ್ಲಿ

ನಾನೇನು ನಿನ್ನಲ್ಲಿ ಬೇಡಲಾರೆನು ರಾಮ

ನನ್ನವರ ನೋಡಿಕೊಳ್ಳೋ |

ಜನುಮವೊಂದಿದ್ದರೂ ಬದುಕು ಸಾವಿದ್ದರೂ

ಹನುಮನಂತಹ ಬಂಧು ನಿನ್ನಂಥ ದೊರೆ ಇರಲಿ

ಸನಿಹದಲಿ ಬರುತಿಹುದು ಕಾಲನದೆ ಆಜ್ಞೆಯು ಹೋಗಿ ಬರುವೆನು ರಾಮನೇ ||

*************

(ವಾರ್ಧಕ್ಯ ಷಟ್ಪದಿ)

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter
Tags

Post a Comment

0 Comments
Post a Comment (0)
To Top