ಪುತ್ತೂರು, ಮಾ.10: ಕವನ, ಸಾಹಿತ್ಯಗಳು ಭಾವನೆಗೆ ಸಂಬಂಧಿಸಿದೆ. ನಮ್ಮ ಭಾವನೆಯನ್ನು ಕವನ, ಲೇಖನಗಳಲ್ಲಿ ವ್ಯಕ್ತಪಡಿಸುತ್ತೇವೆ. ಯಾವುದೇ ಕವನ ಬರೆದರೂ ಒಳ್ಳೆಯ ವಿಷಯಕ್ಕೆ ಸಂಬಂಧಿಸಿದ ವಿಷಯವನ್ನು ಅರಿಸಿಕೊಳ್ಳಬೇಕು. ಒಳಿತು ಇದೆ, ಕೆಡುಕು ಇದೆ. ಒಳ್ಳೆಯ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉನ್ನತಿಯನ್ನು ಸಾಧಿಸಿ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಜಾಗೃತಿ ಭಿತ್ತಿ ಪತ್ರಿಕೆ, ಕನ್ನಡ ಸಂಘ ಮತ್ತು ಐಕ್ಯೂಎಸಿ ಘಟಕ ಇದರ ಸಹಯೋಗದಲ್ಲಿ ಆಯೋಜಿಸಲಾದ ಜಾಗೃತಿ ವಾರ್ಷಿಕ ಸಂಚಿಕೆ 2020-21 ಬಿಡುಗಡೆ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.
ಜಾಗೃತಿ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಸುಬ್ಬಪ್ಪ ಕೈಕಂಬ, ಜ್ಞಾನ ಎಂಬುದು ಮಾರುಕಟ್ಟೆಗಳಲ್ಲಿ ಸಿಗುವಂತ ವಸ್ತುವಲ್ಲ. ನಾವು ಲೇಖನ, ಪುಸ್ತಕಗಳನ್ನು ಓದಿ ಜ್ಞಾನ ಪಡೆದುಕೊಳ್ಳಬೇಕು. ಆದಿಕವಿಗಳೆಲ್ಲ ಇಂದಿಗೂ ಜೀವಂತರಾಗಿದ್ದಾರೆಂದರೆ ಅವರ ಸಾಹಿತ್ಯಗಳಿಂದ, ಒಂದು ಕೃತಿಯು ಸದಾ ಜೀವಂತವಾಗಿರುತ್ತದೆ. ಅದೆಷ್ಟೋ ಕವಿಗಳು ನಮ್ಮ ಜೊತೆಗೆ ಅವರ ಕೃತಿಗಳ ಮಾತನಾಡುತ್ತಿದ್ದಾರೆ. ಇಂದಿನ ಕವಿಗಳು ಸನ್ನಿವೇಶ, ಘಟನೆಗಳಿಗೆ ಹೋಲಿಸಿ ಬರೆಯುತ್ತಿದ್ದಾರೆ. ಈಗಿನ ಕಾಲಘಟ್ಟದಲ್ಲಿ ಕವನ, ಕೃತಿ, ಲೇಖನಗಳನ್ನು ಮೊಬೈಲ್ ಗಳಲ್ಲಿ ಓದುತ್ತಾರೆ. ಅದರ ಬಾಳಿಕೆ ಅಲ್ಪ ಕಾಲ ಮಾತ್ರ. ನಿಜವಾಗಿ ಪುಸ್ತಕಗಳನ್ನು ಓದಬೇಕು, ಬರೆಯಬೇಕು. ಅದು ದೀರ್ಘಕಾಲ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸುದಾನ ವಸತಿಯುತ ಶಾಲೆ ಪುತ್ತೂರಿನ ಶಿಕ್ಷಕಿ ಮತ್ತು ಲೇಖಕಿ ಕವಿತಾ ಅಡೂರು ಮಾತನಾಡಿ, ಕವಿತೆ ಲೇಖನಗಳನ್ನು ಕೇವಲ ಸ್ಪರ್ಧೆಗಳಿಗೆ ಮಾತ್ರ ಬರೆಯುವುದು ಅಲ್ಲ. ಅವುಗಳಿಂದ ಜ್ಞಾನ ವಿಕಾಸ ಆಗಬೇಕು. ಪುಸ್ತಕ ಓದಬೇಕು ಪ್ರತಿದಿನವೂ ಬರೆಯಬೇಕು. ಯಾವಾಗ ನಾವು ಓದುಗರ ಮನಸ್ಸಿಗೆ ಮನಮುಟ್ಟುವ ಹಾಗೂ ಅವರನ್ನು ಆಕರ್ಷಿಸುವ ರೀತಿಯಲ್ಲಿ ಬರೆಯುತ್ತೇವೆ ಆಗ ಆ ಸಾಹಿತ್ಯಗಳು ಉಳಿಯುತ್ತದೆ. ನಾವು ಕೃತಿಗಳನ್ನು ರಚಿಸಬೇಕೆಂದರೆ ತಾಳ್ಮೆ ಬೇಕು. ತಾಳ್ಮೆ ಇದ್ದರೆ ಬಾಳ್ವೆ. ನಾವು ಕಷ್ಟ ಪಟ್ಟು ಕೆಲಸ ಮಾಡಲು ಹೋಗುವುದಿಲ್ಲ. ನಮಗೆ ಎಲ್ಲವೂ ಸುಲಭದಲ್ಲಿ ಸಿಗಬೇಕು, ಇಲ್ಲಿ ನಾವು ಸೋಲುತ್ತೇವೆ. ಕಷ್ಟ ಪಟ್ಟು ಕೆಲಸ ಮಾಡಿದಾಗ ಗೆಲುವು ತನ್ನಿಂದ ತಾನೇ ಬರುತ್ತದೆ. ಒಬ್ಬ ಕವಿಯಾದವನಿಗೆ ಗ್ರಹಿಸುವ ಶಕ್ತಿ ಇರಬೇಕು. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇರಬೇಕು ಎಂದು ನುಡಿದರು.
ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಒಂದು ಶಕ್ತಿಯುತ ಕವನ ಬರೆಯಬೇಕೆಂದರೆ ಆ ಶಬ್ದಗಳು ಭಾರ ಇರಬೇಕು. ಒಳ್ಳೆಯ ಮೌಲ್ಯಗಳನ್ನು ಕೊಡುವಂತ ಕವನಗಳನ್ನು ಬರಿಯಬೇಕು. ವಿದ್ಯಾರ್ಥಿಗಳು ಪುಸ್ತಕ ಓದಿ ಜ್ಞಾನ ಹೆಚ್ಚಿಸಬೇಕು, ಮತ್ತು ನಿರಂತರವಾಗಿ ಕವನ ಬರೆಯಬೇಕು. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಹೊರ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಬಹು ಭಾಷೆಯಲ್ಲಿ ಕವನ ವಾಚಿಸಿದರು. ದ್ವಿತೀಯ ಬಿಸಿಎ ವಿಭಾ ಶ್ರೀ ಆಶಯ ಗೀತೆ ಹಾಡಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್ ಜಿ ವಂದಿಸಿದರು ಪ್ರಥಮ ಬಿಎ ಪತ್ರಿಕೋದ್ಯಮ ವಿಭಾಗದ ಅನನ್ಯ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ