ಪುತ್ತೂರು ಮಾ.9: ಶ್ರದ್ದೆ ಹಾಗೂ ಏಕಾಗ್ರತೆಯಿಂದ ಓದಿದರೆ ಎಂತಹ ಪರೀಕ್ಷೆಗಳನ್ನು ಸಹಾ ಧೈರ್ಯದಿಂದ ಎದುರಿಸಬಹುದು. ಕಲಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಅಗತ್ಯ. ಶೈಕ್ಷಣಿಕ ಕ್ಷೇತ್ರ ಅಥವಾ ಬೇರೆ ಯಾವುದೇ ಸಂಬಂಧಪಟ್ಟ ವಿಭಾಗದಲ್ಲಾದರೂ ವಿದ್ಯಾರ್ಥಿಗಳು ಸದಾ ಸಾಧಿಸುವ ಉತ್ಸಾಹ ಹೊಂದಿರಬೇಕು. ಇದು ನಮ್ಮ ಸಾಧನೆಗಳಿಗೆ ಮುನ್ನುಡಿಯಾಗುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್.ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸೆಮಿನಾರ್ ಸಭಾಂಗಣದಲ್ಲಿ, ವಿಕಾಸ್ ( VICAS - ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಸಿಎ ಸ್ಟಡೀಸ್ ) ಆಶ್ರಯದಲ್ಲಿ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ವಿದ್ಯಾಸಂಸ್ಥೆಗಳು ಹಲವು ಅವಕಾಶಗಳನ್ನು ಒದಗಿಸುತ್ತಿದೆ. ಈ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನ ನೀಡುವ ಕಾರ್ಯ ವಿದ್ಯಾಸಂಸ್ಥೆಗಳಿಂದ ನಡೆಯುತ್ತಿದೆ. ಇಂತಹ ಅವಕಾಶಗಳನ್ನ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು. ನ್ಯಾಯಯುತ ಮಾರ್ಗದಲ್ಲೇ ನಡೆದು ವಿದ್ಯಾಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತಾದ ಹಲವಾರು ಕನಸು ಕಂಡಿರುತ್ತಾರೆ. ಇದು ಸಾಕಾರಗೊಳ್ಳಲು ಹಲವು ಅಡಚಣೆಗಳು ಎದುರಾಗಬಹುದು. ಎಲ್ಲವನ್ನು ಆತ್ಮ ವಿಶ್ವಾಸದಿಂದ ಮತ್ತು ಧೃಢವಾದ ಧ್ಯೇಯ ಮತ್ತು ಸಂಕಲ್ಪದೊಂದಿಗೆ ಎದುರಿಸಬೇಕು. ಭವಿಷ್ಯದ ಪ್ರತಿ ಹಂತದಲ್ಲಿ ಸಿಗುವ ಯಶಸ್ಸಿಗೆ ಅಹಂಕಾರಪಡದೆ ಅದನ್ನು ಇನ್ನಷ್ಟು ಸಾಧನೆಗಳಿಗೆ ಪ್ರೇರಣೆಯಾಗುವಂತೆ ಅಲೋಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕೆ. ಎನ್. ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿವೇಕಾನಂದ ಮಹಾವಿದ್ಯಾಲಯದ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಪ್ರದ್ಯೋತ್ ಕುಮಾರ್ ಬಿ, ವಿಕ್ಯಾತ್ ಶೆಟ್ಟಿ, ಗ್ರೀಷ್ಮ ಆಳ್ವ ಮತ್ತು ತೃತೀಯ ಬಿಕಾಂ ವಿದ್ಯಾರ್ಥಿನಿ ಸೌಮ್ಯ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಸಿರಿ, ಮಾನಸಿ, ಹರ್ಷಿತ ಪ್ರಾರ್ಥಿಸಿ, ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ಭಟ್ ಸ್ವಾಗತಿಸಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ದೇವಿಪ್ರಸಾದ್ ವಂದಿಸಿ, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ