|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾಗತಿಕ ಹೂಡಿಕೆದಾರರ ಸಮಾವೇಶ 2022 -ಪೂರ್ವ ಸಿದ್ಧತೆಗೆ ಚಾಲನೆ ನೀಡಿದ ಸಿಎಂ

ಜಾಗತಿಕ ಹೂಡಿಕೆದಾರರ ಸಮಾವೇಶ 2022 -ಪೂರ್ವ ಸಿದ್ಧತೆಗೆ ಚಾಲನೆ ನೀಡಿದ ಸಿಎಂ

ಬೆಂಗಳೂರು ಅರಮನೆಯಲ್ಲಿ ನವೆಂಬರ್ 2 ರಿಂದ 4 ರವರೆಗೆ "ಇನ್ವೆಸ್ಟ್ ಕರ್ನಾಟಕ 2022"

ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

ಕರ್ನಾಟಕ  ಅವಕಾಶಗಳ ತಾಣ, ಹೂಡಿಕೆಗೆ ಪ್ರಶಸ್ತ ತಾಣ: ಮುರುಗೇಶ ನಿರಾಣಿ 




ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶ 2022ರ ಪೂರ್ವ ಸಿದ್ಧತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು. 


ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ಘೋಷ ವಾಕ್ಯ “ಬ್ಯುಲ್ಡ್‌ ಫಾರ್‌ ದಿ ವರ್ಲ್ಡ್‌’ ಮತ್ತು ಇನ್ವೆಸ್ಟ್‌ ಕರ್ನಾಟಕದ ಲೋಗೊ ಬಿಡುಗಡೆ ಮಾಡಿದರು. 


ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, “ಕೋವಿಡೋತ್ತರ ಕಾಲಘಟ್ಟದಲ್ಲಿ ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂಬುದನ್ನು ನಾವು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವುದಷ್ಟೇ ನಮ್ಮ ಕೆಲಸ.  ನಮ್ಮಲ್ಲಿರುವ ನುರಿತ ಮಾನವ ಸಂಪನ್ಮೂಲನ, ಮೂಲ ಸೌಕರ್ಯ, ನೈಸರ್ಗಿಕ ಸಂಪತ್ತಿನ ಬಗ್ಗೆ ಜಗತ್ತಿಗೆ ತಿಳಿದಿದೆ,” ಎಂದು ಹೇಳಿದರು.  


“ಹೂಡಿಕೆದಾರರ ಜತೆಗಿನ ಒಡಂಬಡಿಕೆ ಕೇವಲ ಕಡತ ಅಥವಾದ ಸುದ್ದಿಗೆ ಸೀಮಿತವಾಗಬಾರದು. ನಿಜವಾದ ಹೂಡಿಕೆದಾರರ ಜತೆಗೆ ಒಪ್ಪಂದ ಮಾಡಿಕೊಂಡು ಅದು ಕಾರ್ಯ ರೂಪಕ್ಕೆ ಬರಬೇಕು. ಕರ್ನಾಟಕದ ಮಹತ್ವ ಅರಿತೇ ಹೂಡಿಕೆದಾರರು ಇಲ್ಲಿಗೆ ಬರುತ್ತಾರೆ.  ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೊದಲೇ ಸಾಕಷ್ಟು ಹೂಡಿಕೆಗಳು ಆಗಬೇಕು ಎಂದು ಸೂಚನೆ ನೀಡಿದ್ದೇನೆ,” ಎಂದರು.  


“ಕೋವಿಡ್‌ ನಂತರದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಮ್ಮ ನುರಿತ ಕಾರ್ಮಿಕ ವರ್ಗ, ಎಂಎಸ್‌ಎಂಇಗಳು, ಸಾಕಷ್ಟು ಸಂಕಷ್ಟಗಳು ಎದುರಿಸಿವೆ, ಈಗ ಭರವಸೆಯನ್ನು ಎದುರು ನೋಡುವ ದಿನಗಳು ಬಂದಿವೆ. ಈ ಎಲ್ಲ ವರ್ಗಕ್ಕೆ  ಸರ್ಕಾರ ಹೆಗಲು ನೀಡುತ್ತದೆ,” ಎಂದರು.  


“ಒಂದೇ ವಲಯದಿಂದ ಹತ್ತಾರು ಕೋಟಿ ರೂ. ಬಂಡವಾಳ ಬರುವ ಬದಲು ಎಲ್ಲ ವಲಯಗಳಿಗೂ ಹೂಡಿಕೆ ಬರಲಿ. ಹೂಡಿಕೆ ಅಂದರೆ ಕೇವಲ ಹಣ, ಆರ್ಥಿಕತೆ ಅಲ್ಲ, ನಮ್ಮ ದೃಷ್ಟಿಯಲ್ಲಿ ಅದು ಜನ ಜೀವನ, ಈ ಹೂಡಿಕೆಯಿಂದ ಸಹಸ್ರಾರು ಜನರು ಬದುಕು ಕಟ್ಟಿಕೊಳ್ಳುವಂತಾಗಬೇಕು,”ಎಂದರು.

3 ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದ ವಿವರ:
*50ಕ್ಕೂ ಹೆಚ್ಚು ಉದ್ಯಮ, ರಾಜಕೀಯ ನಾಯಕರು, ಚಿಂತನಾ ಸಭೆಗಳು * ಬಿ2ಬಿ ಸಭೆಗಳು *ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸಲು ವಿವಿಧ ನಗರಗಳು ಹಾಗೂ ದೇಶಗಳಲ್ಲಿ ರೋಡ್‌ಶೋಗಳು ಸೇರಿದಂತೆ ಸರಣಿ ಸಮಾವೇಶಗಳು *ಪರಿಕಲ್ಪನೆ: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶ 'ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಪಾತ್ರ ಪ್ರತಿನಿಧಿಸುವ "ಬ್ಯುಲ್ಡ್‌ ಫಾರ್‌ ವರ್ಲ್ಡ್‌ *ಇನ್ವೆಸ್ಟ್ ಕರ್ನಾಟಕ 2022- ಸುಸ್ಥಿರ ಬೆಳವಣಿಗೆ, ಉತ್ಪಾದಕತೆಯನ್ನು ಉತ್ತೇಜಿಸುತ್ತದೆ, ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಒತ್ತು ನೀಡಲಿದೆ. ಇದಲ್ಲದೇ,, ಮೂಲಸೌಕರ್ಯ, ಐಟಿ, ಇಂಧನ, ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಣೆ
 


“ನವ ಕರ್ನಾಟಕದಿಂದ ನವ ಭಾರತದತ್ತ ಪರಿಕಲ್ಪನೆಯಲ್ಲಿ 21ನೇ ಶತಮಾನಕ್ಕೆ ಹೊಂದುವಂಥ ನ್ಯೂ ಟೌನ್‌ಶಿಪ್‌ ನಿರ್ಮಾಣದ ಕನಸು ನನ್ನದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ. ಬೆಂಗಳೂರು ಚೆನ್ನೈ ಕೈಗಾರಿಕಾ ಕಾರಿಡಾರ್‌ನಲ್ಲಿ ನಿರ್ಮಾಣವಾಗಲಿರುವ ಕಾರಿಡಾರ್‌ ಸಹ ಎಲ್ಲ ಸೌಲಭ್ಯವನ್ನು ಒಳಗೊಂಡಿರಲಿದೆ,” ಎಂದು ಹೇಳಿದರು. 


ನವೆಂಬರ್‌ 2-4 ಇನ್ವೆಸ್ಟ್‌ ಕರ್ನಾಟಕ 2022

"ಇನ್ವೆಸ್ಟ್ ಕರ್ನಾಟಕ 2022" ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ದೇಶ-ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಈ ಕ್ರಾಂತಿಯಿಂದ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ,”ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್‌ ಆರ್‌ ನಿರಾಣಿ ಅವರು ತಿಳಿಸಿದರು.  


“ಕರ್ನಾಟಕವು ಜಾಗತಿಕ ಹೂಡಿಕೆಗಳಿಗೆ ಪ್ರಮುಖ ತಾಣವಾಗಿದೆ. 2021-2022ರ ಹಣಕಾಸು ವರ್ಷದಲ್ಲಿ ಸತತ ಎರಡು ತ್ರೈಮಾಸಿಕಗಳಲ್ಲಿ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿದೆ. ಸೆಪ್ಟೆಂಬರ್ 2021ರ ವೇಳೆಗೆ ಕರ್ನಾಟಕಕ್ಕೆ 1.02 ಲಕ್ಷ ಕೋಟಿ ರೂ. ವಿದೇಶ ನೇರ ಬಂಡವಾಳ ಹರಿದು ಬಂದಿದೆ.   ಇದು ದೇಶದ ಒಟ್ಟಾರೆ 2.29 ಲಕ್ಷ ಕೋಟಿ ರೂಪಾಯಿಯ ವಿದೇಶಿ ನೇರ ಹೂಡಿಕೆಯ ಶೇಕಡಾ 46 ರಷ್ಟಿದೆ. ಒಟ್ಟಾರೆ ರಫ್ತಿನಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದೆ,"ಎಂದರು. 


“ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. 400 ಕ್ಕೂ ಹೆಚ್ಚು ಜಾಗತಿಕ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ರಫ್ತಿನಲ್ಲಿ ನಾವು ಮೊದಲ ಸ್ಥಾನಲ್ಲಿದ್ದೇವೆ.  ನಾವು ಬೆಂಗಳೂರಿಗರು ಎಂದು ಹೇಳಿಕೊಳ್ಳಲು ಹೆಮ್ಮೆಯ ವಿಷಯವಾಗಿದೆ,"ಎಂದು ಹೇಳಿದರು. 


“ವಲಯ-ನಿರ್ದಿಷ್ಟ ನೀತಿ ಹಾಗೂ ಕೈಗಾರಿಕಾ ನೀತಿಯಿಂದಾಗಿ  ಕರ್ನಾಟಕವು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಕಂಪನಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿದೆ,”ಎಂದು ಅವರು ವಿವರಿಸಿದರು.   


ಈ ಹಿಂದೆ 2016 ರಲ್ಲಿ  ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ  3,08,810 ಕೋಟಿ ರೂಪಾಯಿ ಮೌಲ್ಯದ 1,201  ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು.


ಸಮಾರಂಭದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್‌,  ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇವಿ ರಣಮಣರೆಡ್ಡಿ, ಅಪರ ಮುಖ್ಯಕಾರ್ಯದರ್ಶಿ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ  ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್‌ ಶಿವಶಂಕರ್‌,   ಇನ್ವೆಸ್ಟ್‌ ಕರ್ನಾಟಕದ ಸಿಓಓ ಬಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು. 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post