ಸ್ಮಾರ್ಟ್ ಸಿಟಿ ಯೋಜನೆಯಡಿ ಪಂಪ್ವೆಲ್ ಜಂಕ್ಷನ್ ನಿಂದ ಪಡೀಲ್ ವರೆಗಿನ ರಸ್ತೆ ಕಾಂಕ್ರಿಟೀಕರಣದ ಶಿಲಾನ್ಯಾಸ ಕಾರ್ಯಕ್ರಮ

Upayuktha
0

 

ಮಂಗಳೂರು: ಅಭಿವೃದ್ಧಿಯ ಚಿಂತನೆ, ಇಚ್ಛಾಶಕ್ತಿಯ ಜನಪ್ರತಿನಿಧಿಗಳು, ಯುವನಾಯಕರು ಎಲ್ಲಿರುತ್ತಾರೋ ಕ್ಷೇತ್ರಗಳು ಅಮೂಲಾಗ್ರ ಪ್ರಗತಿಯನ್ನು ಹೊಂದುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯು ರಾಜ್ಯದ ಆರು ನಗರಗಳಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ. ಆದರೆ ವೇಗವಾಗಿ ಪೂರ್ಣಪ್ರಮಾಣದ ಕಾಮಗಾರಿಗಳು ನಡೆದಿರುವುದು ಹಾಗೂ ನಡೆಯುತ್ತಿರುವುದು ಇಲ್ಲಿ ಮಾತ್ರ ಎಂಬ ಹೆಗ್ಗಳಿಕೆ ಮಂಗಳೂರಿನದ್ದು. ಮಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಕ್ಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಸ್ವಚ್ಛ ನಗರವಾಗಿ ಮಂಗಳೂರು ನಗರ ಮೊದಲ ಸ್ಥಾನಕ್ಕೆ ಬರಬೇಕು. ಇದಕ್ಕೆ ಮಂಗಳೂರಿನ ಜನತೆ ಸಹಕಾರ ನೀಡಬೇಕು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ನಗರದ ಕಪಿತಾನಿಯಾ ಬಳಿ ಪಂಪ್ವೆಲ್ ಜಂಕ್ಷನ್ - ಪಡೀಲ್ ರಸ್ತೆಯ 26 ಕೋಟಿ ವೆಚ್ಚದ ಕಾಂಕ್ರಿಟೀಕರಣ ಯೋಜನೆಯ ಗುದ್ದಲಿ ಪೂಜೆ ನೇರವೇರಿಸಿ ಭಾನುವಾರ ಮಾತನಾಡಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಸ್ಮಾರ್ಟ್ ಸಿಟಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಮಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಕಾರ್ಯಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ಮಾರ್ಟ್ ಸಿಟಿ ಸೇರಿದಂತೆ ಅನೇಕ ಯೋಜನೆಗಳು ಮಂಗಳೂರಿನಲ್ಲಿ ಜಾರಿಗೆ ಬರುತ್ತಿದೆ. ನೂತನ ಕಾಮಗಾರಿಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 150ಕ್ಕೂ ಹೆಚ್ಚು ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿಯಿಂದ ಬಂದರು ತನಕ ರಿವರ್ ಫ್ರಂಟ್ ಜೋಡಣೆ ಕಾಮಗಾರಿಯು ನಡೆಯಲಿದೆ. ಈ ರೀತಿಯ ಅನುದಾನಗಳು ಮಂಗಳೂರಿನ ಸಮಗ್ರ ಬದಲಾವಣೆಗೆ ಪೂರಕ. ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಸ್ಮಾರ್ಟ್ ಸಿಟಿ ಯೋಜನೆ ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಎಂದರು.


ಇನ್ನೋರ್ವ ಅಭ್ಯಾಗತರಾಗಿದ್ದ ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯು ವೇಗವಾಗಿ ಸಾಗಲು ಕಾರಣಕರ್ತರಾದ ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಅನೇಕರಿಗೆ ಅಭಿನಂದನೆ ತಿಳಿಸಿದರು. ಮಂಗಳೂರಿನ ಪ್ರಗತಿಗೆ ಈ ಯೋಜನೆಯು ಅಡಿಗಲ್ಲಾಗಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಾನಿಕ್ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಮನಪಾ ಸದಸ್ಯ ಸಂದೀಪ್ ಗರೋಡಿ, ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಸುಧೀರ್ ಶೆಟ್ಟಿ , ಮಾಜಿ ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಮನಪಾ ಸದಸ್ಯ ವಿಜಯ ಕುಮಾರ್ ಶೆಟ್ಟಿ, ಆಶಾ ಡಿ ಸಿಲ್ವ, ಜೇಮ್ಸ್ ಡಿ ಸೋಜ, ಭಾಸ್ಕರ ಚಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top