ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ಕೃತಿ ಬಿಡುಗಡೆ
ಬೆಂಗಳೂರು: ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಅಕ್ಷರ ಸಿದ್ಧಿಸಿದೆ, ಅಕ್ಷರ ಅಂದರೆ ಆಳಿಸಲಾಗದ್ದು ಹಾಗೂ ಅದರಲ್ಲಿ ಅಧ್ಯಾತ್ಮದ ಒಂದು ಲೋಕವಿದೆ ಹಾಗೂ ಅವರ ಬರಹಗಳು ಆಧ್ಯಾತ್ಮಿಕ ಜಗತ್ತನ್ನು ತೆರೆದಿಡುತ್ತದೆ ಎಂದು ಹಿರಿಯ ಶಿಕ್ಷಣ ತಜ್ಞ ಮತ್ತು ಸಾಹಿತಿ ಪ್ರೊ.ಕೆ.ಈ. ರಾಧಾಕೃಷ್ಣ ಅವರು ನುಡಿದರು.
ಅವರು ಗಿರಿನಗರ 3ನೇ ಹಂತದ ಅವಲಹಳ್ಳಿ ಬಿ.ಡಿ.ಎ ಬಡಾವಣೆಯ ವಿ.2 ಸ್ನೇಹ ಅಪಾರ್ಟ್ಮೆಂಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವ್ಯಾಸ ಪೀಠದ ಮೇಲೆ ಇರಿಸಿದ್ದ ಸತ್ಸಂಗ ಸಂಪದ ಕೃತಿಗೆ ಪುಷ್ಪಾರ್ಚನೆ ಮಾಡಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ದ್ವಿತೀಯ ಪ್ರಕಟಣೆ ‘ಸತ್ಸಂಗ ಸಂಪದ ‘ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಶೈಕ್ಷಣಿಕ ಸಂಸ್ಥೆಗಳು ನಿರ್ಲಕ್ಷಿಸಿದ ವಿಷಯಗಳು ಇಲ್ಲಿ ಮಿತ್ರ ಸಂಹಿತೆಯಂತೆ ವ್ಯಾಖ್ಯಾನಗಳಿವೆ. ಮಹನೀಯರ ಮನನೀಯ ವಾಕ್ಯಗಳ ಉಲ್ಲೇಖಗಳಿಂದ ಕಂಗೊಳಿಸುತ್ತವೆ. ಗಾತ್ರದಲ್ಲಿ ಚಿಕ್ಕದಾದರೂ ಪರಿಣಾಮ ದೊಡ್ಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾ.ಸೇ.ಯೋ ನಿವೃತ್ತ ಕಾರ್ಯಕ್ರಮ ಸಮಾಲೋಚಕ ಡಾ. ಹೆಚ್.ಎಸ್. ಸುರೇಶ್ ಅವರು ಕೃತಿ ಪರಿಚಯ ಮಾಡಿದರು. ಸತ್ಸಂಗ ಎಂದರೆ ಸಜ್ಜನರ ಸಂಗ, ಉತ್ತಮರ ಸಹವಾಸ, ಸತ್ಸಂಗ ಲಭಿಸುವುದೊ ಭಾಗ್ಯವೇ ಸರಿ. ಈ ಹೊತ್ತಗೆಯ ವೈಶಿಷ್ಟ್ಯವನ್ನು ಹೆಸರೇ ಹೇಳುವಂತಿದೆ. ಈ ಕೃತಿಯಲ್ಲಿ ಉಪದೇಶಗಳ ಹೊರೆಯಿಲ್ಲ. ಪ್ರತಿಯೊಬ್ಬರ ಒಳಿತಿಗೆ ಉದ್ದಾರಕ್ಕೆ ಆಸಕ್ತಿ ಹುಟ್ಟುವಂತೆ ಮಾಡುವ ಛಲ ತೊಟ್ಟಿದೆ ಈ ಗ್ರಂಥ. ಈ ಕೃತಿಯಲ್ಲಿ 114 ಬೆಳಕಿನ ಕಿಂಡಿಗಳು ಇವೆ. ಅವೆಲ್ಲವೂ ಪ್ರತಿಯೊಬ್ಬರ ಬಾಳಿಗೆ ಬೆಳಕು ಚೆಲ್ಲುವ ದೀಪ ಎಂದರೆ ಅತಿಶೋಯೋಕ್ತಿ ಅಲ್ಲ ಎಂದು ನುಡಿದರು.
ಅಂಕಣ ರೂಪದಲ್ಲಿ ರಾಜ್ಯದ ಅತ್ಯಂತ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ 400 ದಿನ ಪ್ರಕಟಣೆ ಆಗಿದೆ ಹಾಗೂ ಅದು ಕೃತಿ ರೂಪದಲ್ಲಿ ಇಂದು ಬಿಡುಗಡೆ ಆಗಿದೆ ಎಂದು ನುಡಿದರು.
ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರ ಕಲಾವಿದೆ ಕಲಾ ಕಸ್ತೂರಿ ಡಾ. ಮೀರಾಕುಮಾರ್ ರವರು ಪ್ರಥಮ ಕೃತಿ ಸ್ವೀಕರಿಸಿದರು.
ಹಿರಿಯ ವಿದ್ವಾಂಸರು ಮತ್ತು ಗಮಕಿಗಳಾದ ಡಾ. ಎನ್. ಕೆ. ರಾಮಶೇಷನ್ ಹಾಗೂ ಉಪನ್ಯಾಸಕರು ಮತ್ತು ಲೇಖಕಿ ಕೆ.ವಿ. ಪದ್ಮಾವತಿ ಅವರಿಗೆ ‘ಪ್ರಣವ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಮಾಜಿ ಸಚಿವೆ ಶ್ರೀಮತಿ ಸುಮಾ ವಸಂತ್ ಹಾಗೂ ವಿ.2 ಸ್ನೇಹ ಅಪಾರ್ಟ್ಮೆಂಟ್ ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಕೆ.ಸಿ. ರಾಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಾದ ಮಹಿತ್, ರಿಷಾಂಕ್, ತನವ್, ಗೌರಿ ಅವರಿಗೆ ಓಂಕಾರ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರಂಭದಲ್ಲಿ ವಿಶಾಲ ರಾಮಚಂದ್ರ ನೇತೃತ್ವದ ವಿ2 ಸ್ನೇಹ ಅಷ್ಟ ಲಕ್ಷ್ಮೀ ತಂಡದವರು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಡಾ.ವಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಕಾಕೋಳು ರಾಮರಾವ್ ಅಭಿನಂದನಾ ಪತ್ರ ವಾಚಿಸಿದರು.
ಸ್ವಾಗತ ಮತ್ತು ಪ್ರಸ್ತಾವನೆ ಮಾಡಿದ ಡಾ.ಗುರುರಾಜ್ ಪೋಶೆಟ್ಟಿಹಳ್ಳಿ ತಾವು ಬರವಣಿಗೆಯಲ್ಲಿ ತೊಡಗಿ 25 ವರ್ಷಗಳಾದ ಸಂಭ್ರಮಾಚರಣೆಯ ಸವಿನೆನಪಿಗೆ ಈ ಕಾರ್ಯಕ್ರಮ ಆಯೋಜಿಸಿದ್ದು ಹಿರಿಯ ವಿದ್ವಾಂಸರು ಮತ್ತು ಉದಯೋನ್ಮುಖ ಲೇಖಕರನ್ನು ಗೌರವಿಸುವ ಮೂಲಕ ಅಕ್ಷರ ಪ್ರಪಂಚಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು.
ಚಿತ್ರ, ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ